Lard Vishnu – ಸಾಮಾನ್ಯವಾಗಿ ಭೂಮಿ ಅಗೆಯುವಾಗ ಆಗಾಗ ಕೆಲವೊಂದು ಅಪರೂಪದ ವಸ್ತುಗಳು ಕಾಣಿಸುತ್ತಿರುತ್ತವೆ. ಇದೀಗ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ರೈತನೋರ್ವ ತನ್ನ ಜಮೀನು ಉಳುಮೆ ಮಾಡುತ್ತಿದ್ದಾಗ ಪುರಾತನ ಕಾಲದ ವಿಷ್ಣುವಿನ ವಿಗ್ರಹ ಪತ್ತೆಯಾಗಿದೆ. ಈ ಪ್ರತಿಮೆಯನ್ನು ನೋಡಲು ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.

ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲಾ ವ್ಯಾಪ್ತಿಯ ತಂಬಲಪಲ್ಲೆ ವ್ಯಾಪ್ತಿಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ತಂಬಳ್ಳಪಲ್ಲೆ ಮಂಡಲದ ಕೋಟಕೊಂಡ ಪಂಚಾಯತಿಯ ಏಟಗಡಪಲ್ಲೆ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.ಗ್ರಾಮದ ರೈತನೋರ್ವ ತನ್ನ ಹೊಲವನ್ನು ಉಳುಮೆ ಮಾಡುತ್ತಿದ್ದ ಸಮಯದಲ್ಲಿ ಕಲ್ಲು ತಗಲಿದ ಅನುಭವವಾಗಿದೆ. ಕೂಡಲೇ ಕೆಲಸ ನಿಲ್ಲಿಸಿ ಮಣ್ಣು ಅಗೆದು ನೋಡಿದಾಗ ವಿಗ್ರಹವೊಂದು ಕಂಡು ಬಂದಿದೆ. ಈ ವಿಗ್ರಹವನ್ನು ತೊಳೆದು ನೋಡಿದಾಗ ಅದು ಪುರಾತನ ಕಾಲದ ವಿಷ್ಣುವಿನ ವಿಗ್ರಹವಾಗಿತ್ತು. ಈ ವಿಗ್ರಹ ಸುಮಾರು ಮೂರು ಅಡಿಯಿದೆ. ವಿಗ್ರಹದ ಮೇಲಿದ್ದ ಮಣ್ಣು ತೆಗೆದು ಸ್ವಚ್ಚಗೊಳಿಸಲಾಗಿದ್ದು, ವಿಚಾರ ತಿಳಿದ ನಂತರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ದೌಡಾಯಿಸಿ ವಿಗ್ರಹವನ್ನು ವೀಕ್ಷಣೆ ಮಾಡಿ ದೇವರನ್ನು ಪೂಜೆ ಮಾಡುತ್ತಿದ್ದಾರೆ.
ಇನ್ನೂ ಈ ವಿಚಾರ ಸ್ಥಳೀಯ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದು ಪತ್ತೆಯಾದ ವಿಗ್ರಹವನ್ನು ಪರಿಶೀಲನೆ ಮಾಡಿದ್ದಾರೆ. ಮುಂದಿನ ಆದೇಶ ನೀಡುವ ತನಕ ಯಾರೂ ಈ ಜಮೀನಿನಲ್ಲಿ ಉಳುಮೆ ಮಾಡಬಾರದು ಎಂಬ ಆದೇಶವನ್ನು ತಹಸೀಲ್ದಾರರು ಆದೇಶ ಮಾಡಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಸಹ ಕೋಟಕೊಂಡ ಎಂಬಲ್ಲಿ ಎರಡು ದೇವತೆಗಳ ವಿಗ್ರಹಗಳು ಪತ್ತೆಯಾಗಿತ್ತು. ಇದೀಗ ಮತ್ತೆ ವಿಗ್ರಹ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಪ್ರಾಚೀನ ದೇವಾಲಯಗಳ ಅವಶೇಷಗಳು ಇರಬಹುದೆಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಸ್ಥಳಕ್ಕೆ ಪುರಾತತ್ವ ಇಲಾಖೆಯ ಅಧಿಕಾರಿಗಳೂ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವಿಷ್ಣುವಿನ ವಿಗ್ರಹ ಎಷ್ಟು ವರ್ಷಗಳ ಹಳೆಯದ್ದು ಎಂಬುದು ಇನ್ನೂ ಬಹಿರಂಗವಾಗಿಲ್ಲ ಎಂದು ಹೇಳಲಾಗಿದೆ. (ಕೃಪೆ ಟಿವಿ9 ಕನ್ನಡ)

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
