Nikhil Kumaraswamy – ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸ್ಮಾರ್ಟ್ ಮೀಟರ್ ಹಗರಣದಲ್ಲಿ ರಾಜ್ಯ ಸರ್ಕಾರ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿ, ಇದು ಜನರಿಗೆ ಆರ್ಥಿಕ ಭಾರವನ್ನು ಹೇರಿದೆ ಎಂದು ಹೇಳಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವನ್ನು “ಮನಿ-ಹನಿ ಸರ್ಕಾರ” ಎಂದು ಕರೆದು ಟೀಕಾ ಪ್ರಹಾರ ನಡೆಸಿದ್ದಾರೆ.
Nikhil Kumaraswamy – ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಭ್ರಷ್ಟಾಚಾರದ ಆರೋಪ
ನಿಖಿಲ್ ಕುಮಾರಸ್ವಾಮಿ ಅವರು, ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ದೂರಿದ್ದಾರೆ. “ಕೇರಳ, ಉತ್ತರ ಪ್ರದೇಶ, ಗುಜರಾತ್ನಂತಹ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ಗೆ ಕೇವಲ 900 ರೂ. ವೆಚ್ಚವಿದೆ. ಆದರೆ ಕರ್ನಾಟಕದಲ್ಲಿ 4,998 ರೂ., ಎರಡು ಫೇಸ್ ಮೀಟರ್ಗೆ 9,000 ರೂ., ಮತ್ತು ಮೂರು ಫೇಸ್ ಮೀಟರ್ಗೆ 28,000 ರೂ. ಫಿಕ್ಸ್ ಮಾಡಿದ್ದಾರೆ. ಇದು ಬಾಟಾ ಚಪ್ಪಲಿ ರೀತಿಯ ದರ ಫಿಕ್ಸಿಂಗ್ ಆಗಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದಲ್ಲದೇ, ರಾಜಶ್ರೀ ಎಲೆಕ್ಟ್ರಿಕ್ ಕಂಪನಿಗೆ ಟೆಂಡರ್ ನೀಡಿರುವುದು ಸರಿಯಾದ ಅರ್ಹತೆ ಇಲ್ಲದಿದ್ದರೂ ಎಂದು ಪ್ರಶ್ನಿಸಿದ ಅವರು, ಉತ್ತರ ಪ್ರದೇಶದಲ್ಲಿ ಬ್ಲ್ಯಾಕ್ಲಿಸ್ಟ್ ಆಗಿರುವ ಕಂಪನಿಗೆ ಸಾಫ್ಟ್ವೇರ್ ನಿರ್ವಹಣೆಗೆ ಸಬ್ ಕಾಂಟ್ರಾಕ್ಟ್ ಕೊಟ್ಟಿರುವುದು ಯಾಕೆ ಎಂದು ಕೇಳಿದರು. “ಇದು 15,500 ಕೋಟಿ ರೂ. ಲೂಟಿಯ ದೊಡ್ಡ ದರೋಡೆ. ಕೂಡಲೇ ರೀ-ಟೆಂಡರ್ ಕರೆಯಬೇಕು,” ಎಂದು ಒತ್ತಾಯಿಸಿದರು.
Nikhil Kumaraswamy – ಕಾಂಗ್ರೆಸ್ ಸರ್ಕಾರದ ದಪ್ಪ ಚರ್ಮದ ಆಡಳಿತ
“ಕಾಂಗ್ರೆಸ್ ಸರ್ಕಾರ ದಪ್ಪ ಚರ್ಮ ಇಟ್ಟುಕೊಂಡು ಆಡಳಿತ ನಡೆಸುತ್ತಿದೆ. ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಗೊತ್ತಿರುವ ಕಾರಣ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡುವ ಯತ್ನದಲ್ಲಿದ್ದಾರೆ,” ಎಂದು ನಿಖಿಲ್ ಆರೋಪಿಸಿದರು. ಸರ್ಕಾರದ ಎರಡು ವರ್ಷಗಳ ಆಡಳಿತದಲ್ಲಿ ದೊಡ್ಡ ಹಗರಣಗಳು ಬಯಲಿಗೆ ಬಂದಿವೆ ಎಂದು ಜನರು ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದರು.
Nikhil Kumaraswamy -ಸಂವಿಧಾನ ಬದಲಾವಣೆ ವಿವಾದ
ಡಿಸಿಎಂ ಡಿಕೆ ಶಿವಕುಮಾರ್ ಅವರು “ಸಂವಿಧಾನ ಬದಲಾವಣೆ ಮಾಡುತ್ತೇವೆ” ಎಂದು ಹೇಳಿರುವುದನ್ನು ತೀವ್ರವಾಗಿ ಟೀಕಿಸಿದ ನಿಖಿಲ್, “ಕಾಂಗ್ರೆಸ್ನವರು ಮೋದಿ ಸಂವಿಧಾನ ಬದಲಾಯಿಸುತ್ತಾರೆ ಎಂದು ಅಪಪ್ರಚಾರ ಮಾಡಿದ್ದರು. ಆದರೆ ಈಗ ಡಿಕೆಶಿ ಸ್ವತಃ ಇದನ್ನು ಹೇಳುವ ಮೂಲಕ ಕಾಂಗ್ರೆಸ್ನ ಮನಸ್ಥಿತಿ ಬಯಲಾಗಿದೆ. ಡಿಕೆಶಿ ತಲೆಗೆ ನಟ್ಟು-ಬೋಲ್ಟ್ ಇಲ್ಲದಂತಾಗಿದೆ. ಜನರೇ ಸ್ಪಾನರ್ ತೆಗೆದುಕೊಂಡು ಇವರ ನೆಟ್ಟು-ಬೋಲ್ಟ್ ಟೈಟ್ ಮಾಡುತ್ತಾರೆ,” ಎಂದು ವ್ಯಂಗ್ಯವಾಡಿದರು.
Read this Also : ಎಲ್ಲಾ ಫ್ರೀಯಾಗಿ ಕೊಡ್ತಾ ಇದ್ರೆ ಸರ್ಕಾರ ನಡೆಸೋದು ಹೇಗೆ ಎಂದು ಗರಂ ಆದ ಡಿಸಿಎಂ ಡಿ.ಕೆ.ಶಿವಕುಮಾರ್….!
ಮುಸ್ಲಿಂ ಮೀಸಲಾತಿ ವಿರೋಧ
ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ರಾಜ್ಯಪಾಲರಿಗೆ ದೂರು ಸಲ್ಲಿಸಿವೆ ಎಂದು ತಿಳಿಸಿದ ಅವರು, “ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ. ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಇದೆ. ಮುಸ್ಲಿಮರಿಗೆ ವಿಶೇಷವಾಗಿ ಯಾಕೆ ಕೊಡಬೇಕು? ಕಾಂಗ್ರೆಸ್ ಒಲೈಕೆ ರಾಜಕೀಯ ಬಿಡಬೇಕು,” ಎಂದು ಕಿಡಿಕಾರಿದರು.
Nikhil Kumaraswamy – ಹನಿಟ್ರ್ಯಾಪ್ ಆರೋಪ
“ನಾನೊಬ್ಬ ಯುವಕನಾಗಿ ರಾಜಕೀಯಕ್ಕೆ ಹೊಸದಾಗಿ ಬಂದಿದ್ದೇನೆ. ನನ್ನಂತೆ ಎಷ್ಟೋ ಯುವಕರು ರಾಜಕೀಯಕ್ಕೆ ಬರಬೇಕೆಂದು ಆಸೆಪಡುತ್ತಿದ್ದಾರೆ. ಆದರೆ ವಿಧಾನಸೌಧದಂತಹ ದೇವಾಲಯದಲ್ಲಿ ಬೆಳಗ್ಗೆ ಮನಿ, ಸಂಜೆ ಹನಿ ಆಗುತ್ತಿದೆ. ಈ ಸರ್ಕಾರ ಮನಿ-ಹನಿ ಸರ್ಕಾರವಾಗಿದೆ,” ಎಂದು ನಿಖಿಲ್ ಆರೋಪಿಸಿದರು.
“ಸದನದಲ್ಲಿ ರಾಜಣ್ಣ ಆರೋಪ ಮಾಡಿದ್ದರು. 48 ಜನರ ಸಿಡಿ ಇದೆ ಎನ್ನುತ್ತಾರೆ. ಸಿಡಿ ಫ್ಯಾಕ್ಟರಿ ಮಾಲೀಕರು ಯಾರು? ಎಳೂವರೆ ಕೋಟಿ ಮಹಾನ್ ವ್ಯಕ್ತಿ ಯಾರು? ಇಷ್ಟು ಸಿಡಿ ಮಾಡಿಸಿದ ಪುಣ್ಯಾತ್ಮ ಯಾರು ಎಂಬುದನ್ನು ಜನರು ತಿಳಿಯಲು ಕಾತರದಿಂದ ಕಾಯುತ್ತಿದ್ದಾರೆ. ರಾಜಣ್ಣ ಅವರೇ ದೂರು ಕೊಟ್ಟು ತನಿಖೆ ಮಾಡಿಸಿ. ಯಾಕೆ ಸತಾಯಿಸುತ್ತೀರಿ?” ಎಂದು ಸವಾಲು ಹಾಕಿದರು. ರಾಜ್ಯದ ಜನತೆಗೆ ಎಲ್ಲ ರೀತಿಯಲ್ಲೂ ಬರೆ ಎಳೆಯಲಾಗಿದೆ. ಈಗ ಸ್ಮಾರ್ಟ್ ಮೀಟರ್ ಮೂಲಕವೂ ಭಾರ ಹೇರಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಈ ಅಕ್ರಮಗಳ ವಿರುದ್ಧ ಹೋರಾಟ ಮಾಡಿ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ,” ಎಂದು ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದರು.