Water – ಭೂಮಿಯ ಮೇಲೆ ಬುದ್ದಿವಂತ ಜೀವಿ ಎನ್ನಿಸಿಕೊಂಡ ಮನುಷ್ಯನ ದುರಾಸೆಯಿಂದಲೇ ಇಂದು ಪ್ರಕೃತಿ ನಾಶವಾಗುತ್ತಿದೆ, ಇದು ಮುಂದುವರೆಯುತ್ತಾ ಹೋದರೇ ನಮ್ಮ ಭೂಮಿಯ ಮೇಲೆ ಜೀವರಾಶಿಗಳ ಅವನತಿಯಾಗುವುದು ಖಚಿತ. ಆದ್ದರಿಂದ ಪ್ರತಿಯೊಬ್ಬರೂ ಪ್ರಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಜೆ.ಎಂ.ಎಫ್.ಸಿ ನ್ಯಾಯಾಧೀಶ ಕೆ.ಎಂ.ಹರೀಶ್ ತಿಳಿಸಿದರು.
Water – ನೀರು ಸಂರಕ್ಷಣೆ ಎಲ್ಲರ ಜವಾಬ್ದಾರಿ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ರವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೂಮಿಯ ಮೇಲೆ ಕೋಟ್ಯಂತರ ಜೀವರಾಶಿಗಳಿವೆ. ಎಲ್ಲ ಜೀವರಾಶಿಗಳ ಪೈಕಿ ಮನುಜ ಬುದ್ದಿವಂತ ಪ್ರಾಣಿ ಎಂದೆನ್ನಿಸಿಕೊಂಡಿದ್ದಾನೆ. ಪ್ರಕೃತಿಯ ಮಡಿಲಿನಿಂದ ಬಂದಂತಹ ಮನುಜನೇ ಇದೀಗ ಪ್ರಕೃತಿಗೆ ಮಾರಕವಾಗುತ್ತಿದೆ. ಮಾನವರ ದುರಾಸೆಯಿಂದ ಪ್ರಕೃತಿ ದಿನೇ ದಿನೇ ನಾಶವಾಗುತ್ತಿದೆ. ಪ್ರಕೃತಿ ಒಂದು ಸರಪಳಿಯಲ್ಲಿ ನಡೆಯುತ್ತದೆ. ಮರಗಳು ಇದ್ದರೇ ನೀರು, ನೀರಿದ್ದರೇ ಮರಗಳು. ಆದರೆ ನಗರೀಕರಣ ಸೇರಿದಂತೆ ವಿವಿಧ ಕಾರಣಗಳಿಂದ ಗಿಡ-ಮರಗಳ ನಾಶವಾಗುತ್ತಿದೆ. ಇದರಿಂದ ಮಳೆಯ ಅಭಾವ ಉಂಟಾಗಿ ಮನುಷ್ಯರಿಗೆ ಸಮಸ್ಯೆಯಾಗುವುದು ಮಾತ್ರವಲ್ಲದೇ ಇಡೀ ಜೀವರಾಶಿಗಳಿಗೆ ಸಂಕಷ್ಟ ಎದುರಾಗುತ್ತದೆ. ಸರ್ಕಾರಗಳೂ ಸಹ ನೀರಿನ ಸಂರಕ್ಷಣೆಯ ಉದ್ದೇಶದಿಂದ ಕೃಷಿ ಹೊಂಡಗಳು, ಹನಿ, ತುಂತುರು ನೀರಾವರಿ ಪದ್ದತಿಗಳನ್ನು ಜಾರಿ ಮಾಡಿದೆ. ರೈತರು ಈ ಪದ್ದತಿಗಳನ್ನು ಅಳವಡಿಸಿಕೊಂಡು ನೀರನ್ನು ಸಂರಕ್ಷಣೆ ಮಾಡಬೇಕೆಂದರು.
Water – ನೀರಿಗಾಗಿ ಯುದ್ದಗಳು ನಡೆಯಬಹುದು
ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ವಕೀಲ ಉನ್ನತಿ ಜಿ.ವಿ.ವಿಶ್ವನಾಥ್ ಮಾತನಾಡಿ, ಇಡೀ ಭೂಮಿಯ ಮೂರು ಭಾಗದಷ್ಟು ನೀರು ಆವರಿಸಿದ್ದರೂ ಸಹ ಅಷ್ಟೂ ನೀರು ಕುಡಿಯಲು ಯೋಗ್ಯವಲ್ಲ. ಶೇ.10 ರಿಂದ 12 ರಷ್ಟು ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಆದರೆ ಮನುಷ್ಯರು ಮಾತ್ರ ಆ ನೀರನ್ನು ಕಲುಷಿತಗೊಳಿಸುತ್ತಿದ್ದಾರೆ. ಜೊತೆಗೆ ಅನವಶ್ಯಕವಾಗಿ ಬಳಕೆ ಮಾಡುತ್ತಿದ್ದಾರೆ. ಉದಾಹರಣೆಗೆ ಗುಡಿಬಂಡೆ ಕೆರೆಯನ್ನು ತೆಗೆದುಕೊಂಡರೇ, ಈ ಭಾಗದ ಜನರೇ ಕೋಳಿಗಳ ತಾಜ್ಯ ಸೇರಿದಂತೆ ಹಲವು ರೀತಿಯ ತಾಜ್ಯ ವಸ್ತುಗಳನ್ನು ಕೆರೆಗೆ ಎಸೆಯಲಾಗುತ್ತಿದೆ. ಇದರಿಂದ ನೀರಿನಲ್ಲಿರುವ ಜೀವರಾಶಿಗಳು ನಾಶವಾಗುತ್ತದೆ. ಇದರಿಂದ ನಮಗೂ ಸಹ ಸಮಸ್ಯೆಯಾಗುತ್ತದೆ. ಮಾನವ ಅತಿಯಾದ ಆಸೆಯಿಂದ ಇಂದು ನೀರು, ಪರಿಸರ ಎಲ್ಲವೂ ಮಲೀನವಾಗುತ್ತಿದೆ. ಈಗಾಗಲೇ ಪ್ರಾಕೃತಿಕ ವಿಕೋಪಗಳು ಸಂಭವಿಸಿದೆ. ಆದರೂ ಸಹ ಮನುಷ್ಯ ಮಾತ್ರ ಬುದ್ದಿ ಕಲಿತಿಲ್ಲ. ನಾವು ಇದೇ ಮಾದರಿಯಲ್ಲಿ ನೀರನ್ನು ಮಲಿನಗೊಳಿಸುತ್ತಾ, ವ್ಯರ್ಥ ಮಾಡುತ್ತಾ ಹೊದರೇ ಮುಂದಿನ ಪೀಳಿಗೆಗೆ ನಾವು ದ್ರೋಹ ಮಾಡಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ನೀರಿಗಾಗಿ ಯುದ್ದಗಳು ನಡೆದರೂ ಆಶ್ವರ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಅತ್ಯಂತ ಪ್ರಮುಖವಾದ ನೀರನ್ನು ಕಾಪಾಡಬೇಕು ಎಂದರು.
Read this also : ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು: ನ್ಯಾ.ಮಂಜುನಾಥಚಾರಿ
ಕಾರ್ಯಕ್ರಮದ ಅಂಗವಾಗಿ ನೀರು ಸಂರಕ್ಷಣೆ ಹಾಗೂ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ರಾಮಮೂರ್ತಿ, ನ್ಯಾಯಾಲಯದ ಸಿಬ್ಬಂದಿ ಸುರೇಶ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.