Lard Vishnu – ಸಾಮಾನ್ಯವಾಗಿ ಭೂಮಿ ಅಗೆಯುವಾಗ ಆಗಾಗ ಕೆಲವೊಂದು ಅಪರೂಪದ ವಸ್ತುಗಳು ಕಾಣಿಸುತ್ತಿರುತ್ತವೆ. ಇದೀಗ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ರೈತನೋರ್ವ ತನ್ನ ಜಮೀನು ಉಳುಮೆ ಮಾಡುತ್ತಿದ್ದಾಗ ಪುರಾತನ ಕಾಲದ ವಿಷ್ಣುವಿನ ವಿಗ್ರಹ ಪತ್ತೆಯಾಗಿದೆ. ಈ ಪ್ರತಿಮೆಯನ್ನು ನೋಡಲು ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲಾ ವ್ಯಾಪ್ತಿಯ ತಂಬಲಪಲ್ಲೆ ವ್ಯಾಪ್ತಿಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ತಂಬಳ್ಳಪಲ್ಲೆ ಮಂಡಲದ ಕೋಟಕೊಂಡ ಪಂಚಾಯತಿಯ ಏಟಗಡಪಲ್ಲೆ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.ಗ್ರಾಮದ ರೈತನೋರ್ವ ತನ್ನ ಹೊಲವನ್ನು ಉಳುಮೆ ಮಾಡುತ್ತಿದ್ದ ಸಮಯದಲ್ಲಿ ಕಲ್ಲು ತಗಲಿದ ಅನುಭವವಾಗಿದೆ. ಕೂಡಲೇ ಕೆಲಸ ನಿಲ್ಲಿಸಿ ಮಣ್ಣು ಅಗೆದು ನೋಡಿದಾಗ ವಿಗ್ರಹವೊಂದು ಕಂಡು ಬಂದಿದೆ. ಈ ವಿಗ್ರಹವನ್ನು ತೊಳೆದು ನೋಡಿದಾಗ ಅದು ಪುರಾತನ ಕಾಲದ ವಿಷ್ಣುವಿನ ವಿಗ್ರಹವಾಗಿತ್ತು. ಈ ವಿಗ್ರಹ ಸುಮಾರು ಮೂರು ಅಡಿಯಿದೆ. ವಿಗ್ರಹದ ಮೇಲಿದ್ದ ಮಣ್ಣು ತೆಗೆದು ಸ್ವಚ್ಚಗೊಳಿಸಲಾಗಿದ್ದು, ವಿಚಾರ ತಿಳಿದ ನಂತರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ದೌಡಾಯಿಸಿ ವಿಗ್ರಹವನ್ನು ವೀಕ್ಷಣೆ ಮಾಡಿ ದೇವರನ್ನು ಪೂಜೆ ಮಾಡುತ್ತಿದ್ದಾರೆ.
ಇನ್ನೂ ಈ ವಿಚಾರ ಸ್ಥಳೀಯ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದು ಪತ್ತೆಯಾದ ವಿಗ್ರಹವನ್ನು ಪರಿಶೀಲನೆ ಮಾಡಿದ್ದಾರೆ. ಮುಂದಿನ ಆದೇಶ ನೀಡುವ ತನಕ ಯಾರೂ ಈ ಜಮೀನಿನಲ್ಲಿ ಉಳುಮೆ ಮಾಡಬಾರದು ಎಂಬ ಆದೇಶವನ್ನು ತಹಸೀಲ್ದಾರರು ಆದೇಶ ಮಾಡಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಸಹ ಕೋಟಕೊಂಡ ಎಂಬಲ್ಲಿ ಎರಡು ದೇವತೆಗಳ ವಿಗ್ರಹಗಳು ಪತ್ತೆಯಾಗಿತ್ತು. ಇದೀಗ ಮತ್ತೆ ವಿಗ್ರಹ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಪ್ರಾಚೀನ ದೇವಾಲಯಗಳ ಅವಶೇಷಗಳು ಇರಬಹುದೆಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಸ್ಥಳಕ್ಕೆ ಪುರಾತತ್ವ ಇಲಾಖೆಯ ಅಧಿಕಾರಿಗಳೂ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವಿಷ್ಣುವಿನ ವಿಗ್ರಹ ಎಷ್ಟು ವರ್ಷಗಳ ಹಳೆಯದ್ದು ಎಂಬುದು ಇನ್ನೂ ಬಹಿರಂಗವಾಗಿಲ್ಲ ಎಂದು ಹೇಳಲಾಗಿದೆ. (ಕೃಪೆ ಟಿವಿ9 ಕನ್ನಡ)