School Day – ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವ ಹೋಗಲಾಡಿಸಲು ಹಾಗೂ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಮೂಲಕ ಪ್ರತಿಭೆಗಳನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ ಎಂದು ಸೋಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಮಂಗಳ ಅಶ್ವತ್ಥಪ್ಪ ಅಭಿಪ್ರಾಯ ಪಟ್ಟರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಶ್ರೀ ಸತ್ಯ ಸಾಯಿ ಬಾಲ ಮಂದಿರ ಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಈ ಶಾಲೆಯ ಶಿಕ್ಷಕ ವೃಂದ ಹಾಗೂ ಪೋಷಕ ವರ್ಗ ಶ್ರಮಿಸುತ್ತಿದೆ. ಕೆಲವು ಮಕ್ಕಳು ಕೇವಲ ಒಂದೇ ವಿಷಯಕ್ಕೆ ಸೀಮಿತವಾಗಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಓದು ಬರಹದ ಜೊತೆಗೆ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಸಹ ರೂಡಿಸಿಕೊಳ್ಳುವುದು ಒಳ್ಳೆಯ ಬೆಳವಣಿಯಾಗಿದೆ. ಹಲವಾರು ವಿದ್ಯಾರ್ಥಿಗಳು ಕೇವಲ ಮೊಬೈಲ್,ಟಿವಿ, ಗೆ ಅಂಟಿಕೊಂಡಿರುತ್ತಾರೆ ಮತ್ತೆ ಕೆಲವರು ಯಾರೊಂದಿಗೂ ಬೆರೆಯದೆ ಒಬ್ಬಂಟಿಯಾಗಿರಲು ಬಯಸುತ್ತಾರೆ ಆದರೆ ಓದು ಬರಹದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನೊಳಗೊಂಡ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಸಹ ರೂಡಿಸಿಕೊಳ್ಳಬೇಕು ಎಂದರು.
ನಂತರ ನಿವೃತ್ತ ಶಿಕ್ಷಕ ಮೆಹಬೂಬ್ ಸಾಬ್ ಮಾತನಾಡಿ, ಚಿಕ್ಕಂದಿನಿಂದಲೇ ವೇದಿಕೆಗಳ ಕಾರ್ಯಕ್ರಮಗಳಲ್ಲಿ ಭಾಗ ವಹಿಸುವುದರಿಂದ ಬುದ್ಧಿಶಕ್ತಿ ಧೈರ್ಯ ಹೆಚ್ಚಿ ಭಯ ಹೋಗಲಾಡಿಸಬಹುದು ವರ್ಷದ ಶಾಲಾ ವಾರ್ಷಿಕೋತ್ಸವದಲ್ಲಿ ಮನರಂಜನೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಬುದ್ದಿ ಬದಲಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ವ್ಯವಸ್ಥಾಪಕರು ಹಾಗೂ ಮುಖ್ಯಶಿಕ್ಷಕರಾದ ವೆಂಕಟೇಶ್ ಮಾತನಾಡಿ, ಶಾಲೆಯ ವತಿಯಿಂದ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣದ ಜೊತೆಗೆ ಕಾಲ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದ ಜೊತೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ರೂಢಿಸಿಕೊಂಡು ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವಲ್ಲಿ ಸರ್ವ ರೀತಿಯ ಪ್ರಯತ್ನ ಮಾಡಲಾಗುತ್ತಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ರೀತಿಯ ವೇಷ ಭೂಷಣಗಳೊಂದಿಗೆ ನೆರೆದಿದ್ದ ಪೋಷಕರನ್ನು ರಂಜಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗೆ ಸಾಕ್ಷಿ ಎಂಬಂತಿತ್ತು. ದೇಶ ಭಕ್ತಿ ಗೀತೆಗಳನ್ನು, ಸಾಂಸ್ಕೃತಿಕ ನೃತ್ಯಗಳನ್ನು, ಕ್ಲಾಸಿಕಲ್ ಡ್ಯಾನ್ಸ್, ಭರತನಾಟ್ಯ, ನಾಟಕ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮುಖಂಡರಾದ ಚಂದ್ರಕಲಾ, ರೂಪ, ಸೌಭಾಗ್, ನಿವೃತ್ತ ಶಿಕ್ಷಕರಾದ ಆಧಿನಾರಾಯಣಪ್ಪ, ಸೇರಿದಂತೆ ನೂರಾರು ಪೋಷಕರು, ವಿದ್ಯಾರ್ಥಿಗಳು, ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.