Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಸುರಸದ್ಮಗಿರಿ ಬೆಟ್ಟದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ) ಹಾಗೂ ಗೌರಿಬಿದನೂರು ಹೊಯ್ಸಳ ಟ್ರೆಕ್ಕಿಂಗ್ ತಂಡ ಹಾಗೂ ಯುವಕ- ಯುವತಿಯರು ಕನ್ನಡ ಧ್ವಜಾರೋಹಣವನ್ನು ಮಾಡುವ ಮೂಲಕ ಬೆಟ್ಟದಲ್ಲಿ ರಾಜ್ಯೋತ್ಸವವನ್ನು ಆಚರಿಸಿದರು.
ಈ ವೇಳೆ ಗುಡಿಬಂಡೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ ಮಾತನಾಡಿ, ನಾಡಭಾಷೆ ಕನ್ನಡ ಆಡು ಭಾಷೆ, ಅನ್ನದ ಭಾಷೆಯಾಗಲಿ. ನಿತ್ಯ ಬದುಕಿನಲ್ಲಿ ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಸೋಣ, ಆ ಮೂಲಕ ಕನ್ನಡವನ್ನು ಬೆಳೆಸೋಣ. ಇತರೆ ಭಾಷೆಗಳನ್ನು ಗೌರವಿಸೋಣ ಆದರೆ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಕೊಡೋಣ. ತಾವು ಕನ್ನಡದಲ್ಲಿ ಮಾತನಾಡುವ ಮೂಲಕ ಇತರೇ ಭಾಷಿಕರಿಗೂ ಕನ್ನಡ ಕಲಿಸುವ ಕೆಲಸ ಮಾಡೋಣ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದು ಹೇಳಿದರು.
ನಂತರ ಗೌರಿಬಿದನೂರು ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ನಂಜುಂಡಪ್ಪ ಮಾತನಾಡಿ, ಕನ್ನಡ ರಾಜ್ಯೋತ್ಸವ ನವೆಂಬರ್ ಗೆ ಮಾತ್ರ ಸೀಮಿತ ಗೊಳಿಸದೆ ವರ್ಷವಿಡೀ ಕನ್ನಡ ಕಾರ್ಯಕ್ರಮಗಳು ಮಾಡೋಣ. ನಮ್ಮ ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸೋಣ. ಇಂದು ನಾವು ಕರ್ನಾಟಕದ ಏಕತೆ ಮತ್ತು ಏಳಿಗೆಗಾಗಿ ತಮ್ಮನ್ನು ಅರ್ಪಿಸಿಕೊಂಡ ದಾರ್ಶನಿಕರನ್ನು ಸ್ಮರಿಸೋಣ. ಏಕತೆ, ಸಹೋದರತ್ವ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಮೂಲಕ ಅವರ ಪರಂಪರೆಯನ್ನು ಗೌರವಿಸೋಣ ಹಾಗೂ ಕನ್ನಡ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದ್ದರು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀನಿವಾಸ್ ಯಾದವ್ ಮಾತನಾಡಿದರು. ಈ ಸಂದರ್ಭದಲ್ಲಿ ಗೌರಿಬಿದನೂರು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ನಂಜುಂಡಪ್ಪ, ಗೌರಿಬಿದನೂರು ಹೊಯ್ಸಳ ಟ್ರೆಕ್ಕಿಂಗ್ ತಂಡದ ನೇತಾಜಿ ಅಶೋಕ್ ಮತ್ತು ತಂಡದವರು, ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕ ಶ್ರೀನಿವಾಸ್ ಗಾಂಧಿ, ಕಸಾಪ ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು, ಹೊಯ್ಸಳ ಟ್ರೆಕ್ಕಿಂಗ್ ತಂಡ ಭಾಗವಹಿಸಿದರು.