Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣದ ವೇಳೆ ಅನೇಕರು ಮನೆಯನ್ನು ಕಳೆದುಕೊಂಡಿದ್ದು, ಕೆಲವೊಂದು ಕಾರಣಗಳಿಂದ ಅವರಿಗೆ ನಿವೇಶನ ನೀಡಲು ತಡವಾಗಿತ್ತು. ಇದೀಗ ಮೊದಲ ಹಂತದಲ್ಲಿ ಫೆ.12 ರಂದು 54 ಮಂದಿಗೆ ನಿವೇಶನದ ಹಕ್ಕು ಪತ್ರ ವಿತರಣೆ ಮಾಡಲಾಗುತ್ತದೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಯೋಜನೆಯ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು ವರ್ಷಗಳ ಹಿಂದೆ ಗುಡಿಬಂಡೆ ಮುಖ್ಯ ರಸ್ತೆ ಅಗಲೀಕರಣ ಮಾಡಲಾಗಿತ್ತು. ಈ ಸಮಯದಲ್ಲಿ ಅನೇಕರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಅವರಿಗೆ ನಿವೇಶನಗಳನ್ನು ನೀಡಲು ತಡವಾಗಿದ್ದು, ಇದು ನನಗೂ ಸಹ ಬೇಸರದ ಸಂಗತಿಯಾಗಿದೆ. ಸದ್ಯ ಸ.ನಂ. 88 ರಲ್ಲಿನ 1 ಎಕರೆ 35 ಗುಂಟೆ ಜಮೀನಿನಲ್ಲಿ ನಿವೇಶನ ನೀಡಲು ತೀರ್ಮಾನಿಸಲಾಗಿದ್ದು, ರಾಜೀವ್ ಗಾಂಧಿ ವಸತಿ ನಿಗಮದಿಂದ 54 ಮಂದಿ ಫಲಾನುಭವಿಗಳಿಗೆ ನಿವೇಶನ ನೀಡಲು ಹಕ್ಕು ಪತ್ರಗಳೂ ಸಹ ಬಂದಿದ್ದು, ಫೆ.12 ರಂದು ಅರ್ಹ ಫಲಾನುಭವಿಗಳಿಗೆ ನಿವೇಶನಗಳ ಹಕ್ಕು ಪತ್ರಗಳನ್ನು ನೀಡಲಾಗುತ್ತದೆ ಎಂದರು.
ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣದ ವೇಳೆ ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಮೊದಲ ಹಂತವಾಗಿ ಈ 54 ಸೈಟ್ ಗಳ ಹಕ್ಕು ಪತ್ರಗಳನ್ನು ನೀಡಲಾಗುತ್ತದೆ. ಸದ್ಯ ಸಿದ್ದವಾಗಿರುವ ಪಟ್ಟಿಯಲ್ಲಿ ಯಾರಾದರೂ ನಿವೇಶನ ಕಳೆದುಕೊಂಡವರಿಲ್ಲದೇ ಬೇರೆಯವರಿದ್ದರೇ ಅಂತಹವರನ್ನು ಪತ್ತೆ ಮಾಡಿ ಪಟ್ಟಿಯಿಂದ ತೆಗೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಉಳಿದವರಿಗೂ ಸಹ ಶೀಘ್ರದಲ್ಲೇ ನಿವೇಶನ ನೀಡುವ ಕೆಲಸವಾಗಲಿದೆ. ಈಗಾಗಲೇ ತಾಲೂಕಿನ ಪಲೈಗಾರಹಳ್ಳಿ ಬಳಿ 5 ಎಕರೆ ಜಮೀನಿನಲ್ಲಿ ನಿವೇಶನ ನೀಡಲು ಕೆಲಸಗಳು ನಡೆಯುತ್ತಿವೆ. ಅಲ್ಲಿ ಸುಮಾರು 157 ಸೈಟ್ ಗಳು ಸಿಗಲಿದ್ದು, ಈ ಸೈಟ್ ಗಳನ್ನು ವಸತಿ ಸಚಿವರಾದ ಜಮೀರ್ ಅಹ್ಮದ್ ರವರನ್ನು ಕರೆಸಿ ಅವರ ಮೂಲಕ ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತದೆ. ಇದರ ಜೊತೆಗೆ ಗುಡಿಬಂಡೆ ಪಟ್ಟಣದಲ್ಲಿ ಯಾರಿಗೆಲ್ಲಾ ನಿವೇಶನಗಳಿಲ್ಲ ಎಲ್ಲರಿಗೂ ನಿವೇಶನ ನೀಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಪಟ್ಟಣ ವ್ಯಾಪ್ತಿಯ ನಿವೇಶನವಿಲ್ಲದವರಿಗೆ ನಿವೇಶನ ನೀಡಲು ಬೇಕಾದ ಜಮೀನನ್ನು ಶೀಘ್ರವೇ ಮಂಜೂರು ಮಾಡುವಂತೆ ತಾಲೂಕು ದಂಡಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪಟ್ಟಣದ ಸಮೀಪದಲ್ಲಿಯೇ ನಿವೇಶನ ನೀಡಲು ಜಮೀನು ಸಹ ಲಭ್ಯವಿರುವ ಮಾಹಿತಿಯಿದ್ದು, ಶೀಘ್ರದಲ್ಲೇ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಪಟ್ಟಣ ಪಂಚಾಯತಿಗೆ ಜಮೀನು ಹಸ್ತಾಂತರ ಮಾಡುವ ಕೆಲಸ ನಡೆಯಲಿದೆ ಎಂದರು. ಈ ಸಮಯದಲ್ಲಿ ಆಶ್ರಯ ಸಮಿತಿಯ ಸದಸ್ಯರಾದ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಪ.ಪಂ ಮುಖ್ಯಾಧಿಕಾರಿ ಸಭಾ ಶರೀನ್, ಪಟ್ಟಣ ಪಂಚಾಯತಿ ಅಧ್ಯಕ್ಷ ವಿಕಾಸ್, ನಿರ್ಮಲಮ್ಮ, ಬಿ.ಮಂಜುನಾಥ್, ನಾಗರಾಜ್, ಫಯಾಜ್ ಸೇರಿದಂತೆ ಹಲವರು ಇದ್ದರು.