Crime – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಬನ್ನಗಾರಹಳ್ಳಿ ಗ್ರಾಮದಲ್ಲಿ ಸುಮಾರು ಒಂದು ವರ್ಷದ ಹಿಂದೆ ನಡೆದಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಗುಡಿಬಂಡೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ನಡೆಸಿ ಮಹಾರಾಷ್ಟ್ರ ಮೂಲದ ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಂದ ₹1.85 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ.
Crime – ಒಂದು ವರ್ಷದ ಹಿಂದೆ ನಡೆದ ಘಟನೆ
ಗುಡಿಬಂಡೆ ತಾಲ್ಲೂಕಿನ ಓಬನ್ನಗಾರಹಳ್ಳಿ ಗ್ರಾಮದ ಚೌಡಮ್ಮ ಎಂಬುವವರು 2024ರ ಜನವರಿ 16ರಂದು ಎಂದಿನಂತೆ ಬಾಗೇಪಲ್ಲಿ-ಗುಡಿಬಂಡೆ ರಸ್ತೆಯ ಪಕ್ಕದಲ್ಲಿರುವ ತಮ್ಮ ಜಮೀನಿನಲ್ಲಿ ಕುರಿಗಳಿಗೆ ಹುಲ್ಲು ಕಟಾವು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಹಂಪಸಂದ್ರ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಕ್ಷಣಾರ್ಧದಲ್ಲಿ ಚೌಡಮ್ಮ ಅವರ ಕೊರಳಲ್ಲಿದ್ದ ಸುಮಾರು 33 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡು ವೇಗವಾಗಿ ಪರಾರಿಯಾಗಿದ್ದಾರೆ.
Crime – ವಿಶೇಷ ತನಿಖಾ ತಂಡ ರಚನೆ
ದಿನನಿತ್ಯದ ಕೆಲಸದಲ್ಲಿ ತೊಡಗಿದ್ದ ಚೌಡಮ್ಮ ಅವರು ದಿಢೀರನೆ ನಡೆದ ಈ ಕೃತ್ಯದಿಂದ ಆಘಾತಕ್ಕೊಳಗಾಗಿದ್ದರು. ತಕ್ಷಣವೇ ಅವರು ಗುಡಿಬಂಡೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ತನಿಖೆಯನ್ನು ಶುರು ಮಾಡಿದ್ದರು. ಸುದೀರ್ಘವಾದ ತನಿಖೆ ಹಾಗೂ ಮಾಹಿತಿ ಸಂಗ್ರಹಣೆಯ ನಂತರ, ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಶಾಲ್ ಚೌಕ್ಸೆ ಅವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಅಧೀಕ್ಷಕರಾದ ಶಿವಕುಮಾರ್ ಹಾಗೂ ಗುಡಿಬಂಡೆ ವೃತ್ತ ನಿರೀಕ್ಷಕರಾದ ನಯಾಜ್ ಬೇಗ್ ಅವರ ನೇತೃತ್ವದ ವಿಶೇಷ ಪೊಲೀಸ್ ತಂಡವು ಕಾರ್ಯಾಚರಣೆಯನ್ನು ಚುರುಕುಗೊಳಿಸಿತ್ತು. ತಂಡವು ಹಲವು ದಿನಗಳ ಕಾಲ ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ಕರೆಗಳ ಮಾಹಿತಿ ಹಾಗೂ ಇತರ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿತ್ತು.
Crime – ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಗುಡಿಬಂಡೆ ಪೊಲೀಸರು
ಈ ನಿರಂತರ ಪ್ರಯತ್ನದ ಫಲವಾಗಿ, ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿತ್ತು. ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಹಾರಾಷ್ಟ್ರ ರಾಜ್ಯದ ಪುಣೆಯ ಶಿವಾಜಿನಗರದ ನಿವಾಸಿಯಾಗಿದ್ದು ಕನ್ನಡಕ ವ್ಯಾಪಾರಿ ವೃತ್ತಿಯನ್ನು ಮಾಡುತ್ತಿದ್ದ ಸಾಧೀಕ್ ರಫೀಕ್ ಖಾನ್ (40) ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ಆತ ಕೃತ್ಯವನ್ನು ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಬಂಧಿತ ಆರೋಪಿ ಸಾಧೀಕ್ ರಫೀಕ್ ಖಾನ್ನನ್ನು ಗುಡಿಬಂಡೆ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರ ಆದೇಶದಂತೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. Read this also : Insta Love : ಇನ್ಸ್ಟಾ ಸುಂದರಿಗಾಗಿ 25 ಲಕ್ಷ ರೂ ಕೊಟ್ಟ, ಬಳಿಕ ಆಗಿದ್ದೇನು ಗೊತ್ತಾ, ಈ ಸುದ್ದಿ ಓದಿ….!
ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಅಭಿನಂದನೆ
ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಗುಡಿಬಂಡೆ ಪೊಲೀಸ್ ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್, ಸಬ್ ಇನ್ಸ್ಪೆಕ್ಟರ್ ಗಣೇಶ್, ರಮೇಶ್ ಹಾಗೂ ಪೊಲೀಸ್ ಪೇದೆಗಳಾದ ಆನಂದ್, ದಕ್ಷಿಣಾ ಮೂರ್ತಿ, ನಾರಾಯಣಸ್ವಾಮಿ, ರವೀಂದ್ರ ಕುಮಾರ್, ಮುನಿಕೃಷ್ಣ, ಅರುಣ್ ಸೇರಿದಂತೆ ಇತರರನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ಅಭಿನಂದಿಸಿದ್ದಾರೆ.