ಗುಡಿಬಂಡೆ: ತಾಲೂಕಿನ ಚಿಕ್ಕಕುರುಬರಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದ ಸಿ.ಎನ್.ಅಶ್ವತ್ಥಪ್ಪ ರವರು ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಮೃತಪಟ್ಟಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಾಲೂಕು ಪಡಿತರ ವಿತರಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಶ್ರದ್ದಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.
ಈ ವೇಳೆ ಪಡಿತರ ವಿತರಕರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಮಾತನಾಡಿ ದಿವಂಗತ ಅಶ್ವತ್ಥಪ್ಪ ರವರು ತಮ್ಮ ಅವಧಿಯಲ್ಲಿ ಸಂಘಕ್ಕಾಗಿ ತುಂಬಾನೆ ಸೇವೆ ಸಲ್ಲಿಸಿದ್ದಾರೆ. ಸಂಘದ ಜಿಲ್ಲಾ ನಿರ್ದೇಶಕರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಅಕಾಲಿಕ ಮರಣ ನಮ್ಮ ಸಂಘಕ್ಕೆ ತುಂಬಲಾರದ ನಷ್ಟ ಎಂದೇ ಹೇಳಬಹುದು. ಸದಾ ಎಲ್ಲರೊಂದಿಗೆ ನಗು ನಗುತ್ತಾ ಹಸನ್ಮುಖಿಯಾಗಿ ಬೆರೆಯುತ್ತಿದ್ದರು. ಜೊತೆಗೆ ಸಂಘದ ಕೆಲಸ ಎಂದರೇ ತುದಿಗಾಲಿನಲ್ಲಿ ನಿಂತು ಮಾಡುತ್ತಿದ್ದರು. ಪಡಿತರ ವಿತರಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಅವರಿಗೆ ಶ್ರದ್ದಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಪಡಿತರ ವಿತರಕರು ಈ ಸಭೆಗೆ ಆಗಮಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಈ ಹಿಂದೆ ಆಹಾರ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದಂತಹ ನಟರಾಜ್, ಹೊಸದಾಗಿ ವರ್ಗಾವಣೆಯಾಗಿ ಬಂದಂತಹ ಆಹಾರ ನಿರೀಕ್ಷಕಿ ಪುಷ್ಪಲತಾ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಅನ್ಸಾರಿ ಸೇರಿದಂತೆ ಹಲವರು ಅಶ್ವತ್ಥಪ್ಪರವರ ಬಗ್ಗೆ ಮಾತನಾಡಿದರು. ಈ ಸಮಯದಲ್ಲಿ ತಾಲೂಕಿನ ಪಡಿತರ ವಿತರಕರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕರು ಹಾಜರಿದ್ದರು.