Sad News – ಪ್ರತಿಯೊಬ್ಬ ತಂದೆ-ತಾಯಿಗೆ ತಮ್ಮ ಮಕ್ಕಳ ಮದುವೆ ಮಾಡುವುದು ಕರ್ತವ್ಯ ಎಂದು ಮಾತ್ರ ಭಾವಿಸದೇ ಅದೊಂದು ಸಂಭ್ರಮ, ಹಬ್ಬ ಎಂದೇ ಭಾವಿಸುತ್ತಾರೆ. ಅದೇ ರೀತಿ ತನ್ನ ಮಗಳ ಮದುವೆಯನ್ನು ಮಾಡಲು ಹೋದ ಅಪ್ಪ ಇದೀಗ ಇಹಲೋಕ ತ್ಯೆಜಿಸಿದ್ದಾರೆ. ತನ್ನ ಗೆಳಯನಿಗೆ ಮಗಳ ಮದುವೆಯ ಲಗ್ನಪತ್ರಿಕೆ ಕೊಡಲು ಹೋದ ತಂದೆ ಮಾರ್ಗ ಮಧ್ಯೆ ಅಪಘಾತದಿಂದ ಸಾವನ್ನಪ್ಪಿದ್ದಾನೆ. ಆದರೆ ಈ ವಿಷಯವೇ ತಿಳಿಯದ ಮಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಚಂದ್ರಪ್ಪ (45) ಎಂದು ಗುರ್ತಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿ ಇಂದು (ಜ.20) ಚಂದ್ರಪ್ಪ ಮಗಳು ದೀಕ್ಷಿತಾಳ ಮದುವೆ ನಿಶ್ಚಯವಾಗಿತ್ತು. ಚಂದ್ರು ತನ್ನ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಲು ಎಲ್ಲಾ ಸಿದ್ದತೆಗಳನ್ನು ನಡೆಸಿದ್ದಾರೆ. ಆದರೆ ನಿನ್ನೆ (ಜನವರಿ 19) ಬೆಳಗ್ಗೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ತನ್ನ ಸ್ನೇಹಿತನಿಗೆ ಲಗ್ನಪತ್ರಿಕೆ ಕೊಡಲು ಹೋಗಿದ್ದ ಚಂದ್ರಪ್ಪ ವಾಪಸ್ ಬರುವಾಗ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅಪ್ಪ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಹೇಳಿದ ಸಂಬಂಧಿಕರು ಆರತಕ್ಷತೆ-ಮದುವೆ ಕಾರ್ಯವನ್ನು ಮುಗಿಸಿದ್ದಾರೆ. ಆದರೆ ಚಂದ್ರು ಸಾವನ್ನಪ್ಪಿದ್ದ ವಿಷಯ ಪತ್ನಿಗೂ ತಿಳಿದಿರಲಿಲ್ಲ. ಮಗಳಿಗೂ ಗೊತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಇನ್ನೂ ಚಂದ್ರಪ್ಪ ಕುಟುಂಬಸ್ಥರು ಮದುವೆ ಕೆಲಸಗಳಲ್ಲಿ ಓಡಾಡಿ ಸುಸ್ತಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಚಂದ್ರಪ್ಪ ಪತ್ನಿ ಹಾಗೂ ಮಗಳನ್ನು ನಂಬಿಸಿದ್ದಾರೆ. ಮದುವೆಯ ಎಲ್ಲಾ ಶಾಸ್ತ್ರಗಳು ಮುಗಿಯುವ ತನಕ ಚಂದ್ರಪ್ಪ ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ಇಡಲಾಗಿದೆ. ಬಳಿಕ ಮೃತದೇಹವನ್ನು ಮನೆಗೆ ತಂದ ಬಳಿಕ ವಿಷಯ ತಿಳಿದಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ನವಜೋಡಿ ಹಾಗೂ ಸಂಬಂಧಿಕರು ಮನೆಗೆ ದೌಡಾಯಿಸಿದ್ದಾರೆ. ಸಂಭ್ರಮದ ಮದುವೆ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಪತ್ನಿ ಹಾಗೂ ಮಗಳ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ತರಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಮನೆಯವರು ಮಗಳ ಮದುವೆಯಾಯ್ತು ಎಂಬ ಸಂತೋಷದಲ್ಲಿದ್ದ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.