Local News – ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಅಕ್ಷರ ಕ್ರಾಂತಿಯ ಫಲವಾಗಿ ಇಂದು ಭಾರತ ದೇಶದ ಎಲ್ಲಾ ಸಮುದಾಯದ ಮಹಿಳೆಯರಿಗೆ ಅಕ್ಷರ ಕಲಿಯುವ ಹಕ್ಕು ದೊರೆತಿದೆ. ಮಹಿಳೆಯರಿಗೆ ಅಕ್ಷರ ಕಲಿಕೆ ಹಕ್ಕು ಕಲ್ಪಿಸಿದ ಸಾವಿತ್ರಿಬಾಯಿ ಪುಲೆ ರವರನ್ನು ಸದಾ ನೆನಪಿಸಿಕೊಳ್ಳುವುದು ದೇಶದ ಪ್ರತಿಯೊಬ್ಬ ಮಹಿಳೆಯರ ಕರ್ತವ್ಯ ಎಂದು ಶ್ರೀ ಯೋಗಿ ನಾರಾಯಣ ಬಲಿಜ ಟ್ರಸ್ಟ್ ಅಧ್ಯಕ್ಷ ಹಾಗೂ ಹಿರಿಯ ವಕೀಲರಾದ ಎ. ಜಿ. ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೊರವಲಯದ ಗಡಿದಂ ಶ್ರೀ ರಾಜರಾಜೇಶ್ವರಿ ಫಂಕ್ಷನ್ ಹಾಲ್ನಲ್ಲಿ ಶ್ರೀ ಯೋಗಿ ನಾರಾಯಣ ಬಲಿಜ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀಮತಿ ಸಾವಿತ್ರಿ ಬಾಯಿ ಫುಲೆ ರವರ 194ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಾವಿತ್ರಿ ಬಾಯಿ ಫುಲೆ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಾವಿತ್ರಿ ಬಾಯಿ ಪುಲೆ ರವರು ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಯನ್ನು ತರುವ ಹಾಗೂ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದರು.
ಹಿಂದುಳಿದ ಸಮುದಾಯಗಳನ್ನು ಸಬಲೀಕರಣಗೊಳಿಸಲು ಅನೇಕ ಅಡೆತಡೆಗಳನ್ನು ಮುರಿದ ಸಾವಿತ್ರಿಬಾಯಿ ಫುಲೆ ಅವರು ತಮ್ಮ ಪತಿ ಜ್ಯೋತಿರಾವ್ ಫುಲೆಯೊಂದಿಗೆ ಪುಣೆಯಲ್ಲಿ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರು, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಕ್ರಾಂತಿಕಾರಿ ಚಳುವಳಿಯನ್ನು ಪ್ರಾರಂಭಿಸಿ ಸಾಂಪ್ರದಾಯಿಕ ಯುಗದಲ್ಲಿ ಮಹಿಳೆಯರ ಹಕ್ಕು ಮತ್ತು ನ್ಯಾಯಕ್ಕಾಗಿ ನಿರ್ಭಯವಾಗಿ ಬೋಧಿಸಿದರು ಮತ್ತು ಪ್ರತಿಪಾದಿಸಿದ್ದರು ಎಂದ ಅವರು ಅವರ ಅಂದಿನ ಶಿಕ್ಷಣ ಕ್ರಾಂತಿ ಇಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದರು.
ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ವೆಂಕಟೇಶಪ್ಪ, ಸುಕನ್ಯಾ, ರಾಜರಾಜೇಶ್ವರಿ, ಎನ್.ನಾರಾಯಣ ಸ್ವಾಮಿ, ಆರ್. ವೆಂಕಟರಾವiಪ್ಪ, ನಾರಾಯಣ, ಎಲ್. ಭಾಸ್ಕರ್, ವೆಂಕಿ, ಮತ್ತಿತರರು ಇದ್ದರು.