Local News – ಗುಡಿಬಂಡೆ ತಾಲೂಕಿನಲ್ಲಿ ರಸ್ತೆ ಅಗಲೀಕರಣದ ಸಮಯದಲ್ಲಿ ಮನೆಗಳನ್ನು ಕಳೆದುಕೊಂಡವರು ನಿವೇಶನಗಳಿಗಾಗಿ ಮಂಜೂರಾಗಿರುವ ಭೂಮಿಯಲ್ಲಿ ಪ್ರತಿಭಟನೆ ಮಾಡಿದರೇ, ದಲಿತರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುವುದು ಸರಿಯಲ್ಲ ಎಂದು ಪೊಲೀಸರ ವಿರುದ್ದ ದಲಿತ ಮುಖಂಡರು ಅಸಮಧಾನ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಪ್ರತಿಭಟನಾಕಾರರೊಂದಿಗೆ ಸಂಧಾನ ಸಭೆಯನ್ನು ಏರ್ಪಡಿಸಿದ್ದು, ಈ ವೇಳೆ ಮಾತನಾಡಿದ ದಲಿತ ಮುಖಂಡರು, ದಲಿತರು ತಮ್ಮ ನಿವೇಶನಗಳಿಗಾಗಿ ಸರ್ಕಾರ ಮೀಸಲಿಟ್ಟಿರುವ ಭೂಮಿಯಲ್ಲಿ ತ್ವರಿತವಾಗಿ ನಿವೇಶನಗಳನ್ನು ನೀಡಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರು, ಪ್ರತಿಭಟನೆ ಮಾಡಿರುವುದೇ ತಪ್ಪಾ, ತಮ್ಮ ಹಕ್ಕನ್ನು ಕೇಳುವುದು ಬಿಟ್ಟರೇ ಬೇರೆ ಯಾವುದೇ ಕಾನೂನು ಉಲ್ಲಂಘಿಸಿರುವ ಯಾವುದೇ ಕೆಲಸ ಮಾಡಿಲ್ಲ ಆದರೂ ಸಹ ಪೊಲೀಸರು ಬಡವರ ಮೇಲೆ ದೂರು ದಾಖಲಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಅಸಮಧಾನ ವ್ಯಕ್ತಪಡಿಸಿದರು. ಇನ್ನು ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಸದರಿ ಜಮೀನಿನ ವಿಚಾರ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವುದರಿಂದ ಅ ಜಮೀನಿಗೆ ಪ್ರವೇಶ ಮಾಡಬಾರದೆಂದು ಉತ್ತರಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ಉತ್ತರ ನೀಡಿದರು.
ಇನ್ನು ತಾಲೂಕಿನ ಅನೇಕ ಗ್ರಾಮಗಳಲ್ಲಿ ಸ್ಮಶಾನಗಳು ಇಲ್ಲ, ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಜಾಗ ನೀಡಿಲ್ಲ, ಬಡ ದಲಿತರ ದರಖಾಸ್ತು ಜಮೀನು ಮಂಜೂರು ಮಾಡುವುದು, ಇಲಾಖೆಗಳಲ್ಲಿ ಆಗಿರುವ ಆಕ್ರಮಗಳನ್ನು ತನಿಖೆ ಮಾಡುವುದು ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲವಾದಲ್ಲಿ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ತಿಳಿಸಿದರು. ಇನ್ನು ತಹಶಿಲ್ದಾರ್ ಸಿಗ್ಬತ್ ವುಲ್ಲಾ ಮಾತನಾಡಿ, ತಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇವೆ, ಈ ಬಗ್ಗೆ ದಲಿತ ಮುಖಂಡರೊಂದಿಗೆ ಸಭೆ ನಡೆಸಬೇಕೆಂದು ತಿಳಿಸಿದ್ದು, ಈ ಸಭೆಯಲ್ಲಿ ನಡೆದ ಅಂಶಗಳನ್ನು ಜಿಲ್ಲಾ ಅಧಿಕಾರಿಗಳು ನಡೆಸುವ ಸಭೆಯಲ್ಲಿ ಚರ್ಚಿಸುತ್ತೇವೆಂದು ತಿಳಿಸಿದರು.
ಈ ಸಭೆಯಲ್ಲಿ ತಹಶೀಲ್ದಾರ್ ಸಿಗ್ಬತ್ತುಲ್ಲಾ, ಇಒ ನಾಗಮಣಿ, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ಗ್ರೇಡ್-2 ತಹಶಿಲ್ದಾರ್ ತುಳಸಿ, ಪ.ಪಂ.ಮುಖ್ಯಾಧಿಕಾರಿ ಸಬಾ ಶಿರೀನ್, ಆರಕ್ಷಕ ಉಪ ನಿರೀಕ್ಷಕ ಗಣೇಶ್ ಸೇರಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಲಾಧಿಕಾರಿಗಳು ತ್ವರಿತವಾಗಿ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ದಲಿತ ಮುಖಂಡರಿಗೆ ಆಶ್ವಾಸನೆ ನೀಡಿದರು. ಈ ಸಭೆಯಲ್ಲಿ ದಲಿತ ಮುಖಂಡರಾದ ಜಿ.ವಿ.ಗಂಗಪ್ಪ, ರಮಣ, ಇಸ್ಕೂಲು ನರಸಿಂಹಪ್ಪ, ರಾಜು, ಆದಿನಾರಾಯಣಪ್ಪ ಸೇರಿ ಇತರರು ಇದ್ದರು.