Health Camp -ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ, ಗುಡಿಬಂಡೆ ತಾಲೂಕಿನಲ್ಲಿ ಪ್ರತಿ ತಿಂಗಳು ಕನಿಷ್ಠ ಎರಡು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಸಮರ್ಪಕ ಸೇವಾ ಟ್ರಸ್ಟ್ನ ಮುಖ್ಯಸ್ಥರಾದ ರಾಜಣ್ಣ ಅವರು ಭರವಸೆ ನೀಡಿದ್ದಾರೆ. ಈ ಉಪಕ್ರಮವು ಗ್ರಾಮೀಣ ಭಾಗದ ಜನರ ಆರೋಗ್ಯ ಕಾಳಜಿಗೆ ಮಹತ್ವದ ಕೊಡುಗೆ ನೀಡಲಿದೆ.
Health Camp – ಸಂಚಾರಿ ಆರೋಗ್ಯ ಘಟಕದಿಂದ ಉಚಿತ ತಪಾಸಣೆ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಿಕಾಸ ಜನಕಲ್ಯಾಣ ಟ್ರಸ್ಟ್ ಗುಡಿಬಂಡೆ, ವಿಸ್ತಾರ ಫೈನಾನ್ಸಸ್, ರಾಘವೇಂದ್ರ ಗ್ರಾಮೀಣ ಆರೋಗ್ಯ ಸೇವಾ ಸಂಸ್ಥೆ ಹಾಗೂ ಸಮರ್ಪಕ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಂಚಾರಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ರಾಜಣ್ಣ ಅವರು, “ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಜನರಿಗೆ ಸಂಚಾರಿ ವಾಹನದ ಮೂಲಕ ಉಚಿತ ವೈದ್ಯಕೀಯ ತಪಾಸಣೆಯನ್ನು ಒದಗಿಸಲಾಗುವುದು. ಈ ಆರೋಗ್ಯ ಶಿಬಿರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು” ಎಂದು ಮನವಿ ಮಾಡಿದರು.
Health Camp – ರಾಜ್ಯಾದ್ಯಂತ ವಿಸ್ತರಣೆ
ಈಗಾಗಲೇ ತಮಿಳುನಾಡಿನ ತೆರಿಯೂರು, ವೆಲ್ಲೂರು, ಧರ್ಮಪುರಿ ಹಾಗೂ ಕರ್ನಾಟಕದ ರಾಯಚೂರಿನಲ್ಲಿ ಯಶಸ್ವಿಯಾಗಿ ಇಂತಹ ಶಿಬಿರಗಳನ್ನು ಆಯೋಜಿಸಲಾಗಿದೆ. ಗುಡಿಬಂಡೆಯಲ್ಲಿ ಇದು ಐದನೆಯ ಶಿಬಿರವಾಗಿದೆ. ಮುಂದಿನ ದಿನಗಳಲ್ಲಿ ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಒಟ್ಟು 12 ಸಂಚಾರಿ ತಪಾಸಣಾ ವಾಹನಗಳ ಮೂಲಕ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಲಾಗುವುದು ಎಂದು ರಾಜಣ್ಣ ಅವರು ತಿಳಿಸಿದರು. ಈ ಸೇವೆಯನ್ನು ಆಯಾ ಭಾಗದ ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಹೇಳಿದರು.
Health Camp – ಶಿಬಿರದಲ್ಲಿ ಲಭ್ಯವಿದ್ದ ಸೇವೆಗಳು
ಸಂಚಾರಿ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ಸಮಾಲೋಚನೆ, ರಕ್ತದೊತ್ತಡ (ಬಿ.ಪಿ) ತಪಾಸಣೆ, ಮಧುಮೇಹ (ಶುಗರ್) ತಪಾಸಣೆ, ಡಯಾಬಿಟಿಸ್ನಿಂದ ಉಂಟಾಗುವ ಕಾಲುಗಳ ತೊಂದರೆಗಳ ತಪಾಸಣೆ ಮತ್ತು ಚಿಕಿತ್ಸಾ ಸಮಾಲೋಚನೆಗಳನ್ನು ನಡೆಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು. ಈ ಶಿಬಿರದ ಪ್ರಯೋಜನವನ್ನು 83 ಜನ ಫಲಾನುಭವಿಗಳು ಪಡೆದುಕೊಂಡರು. Read this also : ನಾಲಿಗೆ ತಿಳಿಸುವ ಆರೋಗ್ಯ ರಹಸ್ಯಗಳು: ನಿಮ್ಮ ನಾಲಿಗೆಯ ಬಣ್ಣ ಈ ರೀತಿಯಾಗಿದ್ದರೆ ಈ ರೋಗಗಳು ಇರಬಹುದು!
Health Camp – ಗಣ್ಯರ ಉಪಸ್ಥಿತಿ
ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಸಂಸ್ಥೆಯ ಶ್ರೀಧರ್ ಸಾಗರ್ ಜೀ, ರಾಘವೇಂದ್ರ ಗ್ರಾಮೀಣ ಆರೋಗ್ಯ ಸೇವಾ ಸಂಸ್ಥೆಯ ಅಧ್ಯಕ್ಷ ನಾಗರಾಜ್, ಡಾ. ನಿಖಿತ, ಡಾ. ನಾಗರಾಜ್, ಡಾ. ಯೋಗೀಶ್, ಗ್ರಾಮ ವಿಕಾಸ ಸಂಸ್ಥೆಯ ವಾಹಿನಿ ಸುರೇಶ್, ಮಮತ, ಜಿಲ್ಲಾ ಸಂಯೋಜಕ ಮುನಿರಾಜು, ನರಸಿಂಹ ಮೂರ್ತಿ, ಶಾಲೆಯ ಮುಖ್ಯ ಶಿಕ್ಷಕರಾದ ನಾಗರಾಜ್, ಗುಡಿಬಂಡೆ ಆಸ್ಪತ್ರೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.