Gadag – ಕರ್ನಾಟಕದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಬಳಿ ಪತ್ತೆಯಾಗಿದ್ದ ಅನಾಮಧೇಯ ಮಹಿಳೆಯ ಶವದ ಪ್ರಕರಣ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಪೊಲೀಸರು ಮಹಿಳೆಯ ಮೊಬೈಲ್ ಕರೆಗಳ ಜಾಡು ಹಿಡಿದು ಹೋದಾಗ ಬೆಚ್ಚಿಬೀಳುವ ಸತ್ಯಾಂಶಗಳು ಬಯಲಾಗಿವೆ. ಇದು ಸಹಜ ಸಾವು ಎಂದು ಭಾವಿಸಿದ್ದ ಕುಟುಂಬಸ್ಥರು ದಿಗ್ಭ್ರಮೆಗೊಂಡಿದ್ದಾರೆ.
ಹೌದು… ಏಪ್ರಿಲ್ 23 ರಂದು ಲಕ್ಷ್ಮೀ ಇಂಗಳಗಿ ಎಂಬ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮೊಬೈಲ್ ಕರೆಗಳ ಇತಿಹಾಸವನ್ನು ಪರಿಶೀಲಿಸಿದಾಗ, ಕೊಲೆಯ ಹಿಂದೆ ಒಂದು ಪ್ರೇಮಕಥೆಯ ಕಹಿ ಸತ್ಯ ಅಡಗಿರುವುದು ಬೆಳಕಿಗೆ ಬಂದಿದೆ. ಲಕ್ಷ್ಮೇಶ್ವರ ಸಿಪಿಐ ನಾಗರಾಜ್ ಮಾಡಳ್ಳಿ ಅವರ ತಂಡವು ಅತ್ಯಂತ ಚಾಣಾಕ್ಷತನದಿಂದ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಯುವಕನೊಂದಿಗಿನ ಲವ್ವಿಡವ್ವಿ ಮತ್ತು ಕೊಲೆಯ ಕರಾಳ ಕಥೆಯನ್ನು ಬಹಿರಂಗಪಡಿಸಿದ್ದಾರೆ.
Gadag – ಬಯಲಾದ ಅನಾಮಧೇಯ ಶವ: ಗ್ರಾಮದಲ್ಲಿ ಆತಂಕ
ಏಪ್ರಿಲ್ 23, 2025 ರಂದು ಸೂರಣಗಿ ಗ್ರಾಮದ ದೊಡ್ಡೂರ ರಸ್ತೆಯ ಬಳಿಯ ಬಯಲು ಬಸವೇಶ್ವರ ದೇವಸ್ಥಾನದ ಸಮೀಪ ಸುಮಾರು 35 ವರ್ಷದ ಮಹಿಳೆಯ ಗುರುತು ತಿಳಿಯದ ಶವ ಪತ್ತೆಯಾಗಿತ್ತು. ಮಹಿಳೆಯ ಶವ ಪತ್ತೆಯಾದ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಇಡೀ ಗ್ರಾಮವೇ ಆತಂಕಕ್ಕೆ ಒಳಗಾಗಿತ್ತು. ಭಯಭೀತರಾದ ಸೂರಣಗಿ ಗ್ರಾಮಸ್ಥರು ತಕ್ಷಣವೇ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಲಕ್ಷ್ಮೇಶ್ವರ ಸಿಪಿಐ ನಾಗರಾಜ್ ಮಾಡಳ್ಳಿ ಮತ್ತು ಅವರ ತಂಡವು ಪರಿಶೀಲನೆ ನಡೆಸಿತು. ಆ ಸಂದರ್ಭದಲ್ಲಿ, ಇದು ಸಹಜ ಸಾವು ಅಲ್ಲ, ಖಂಡಿತವಾಗಿಯೂ ಕೊಲೆ ಎಂದು ಪೊಲೀಸರಿಗೆ ಅನುಮಾನ ಮೂಡಿತ್ತು.
Gadag – ಒಂದು ಸಣ್ಣ ಸುಳಿವು, ಪತ್ತೆಯಾದ ಹಂತಕ
ನಂತರ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದಾಗ, ಒಂದು ವಾರದ ಬಳಿಕ ಕೊಲೆಯಾದ ಮಹಿಳೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ನೇಲೊಗಲ್ ಗ್ರಾಮದ ಲಕ್ಷ್ಮೀ ಇಂಗಳಗಿ ಎಂದು ಗುರುತಿಸಲಾಯಿತು. ಆಗ ಮೃತಳ ಸಹೋದರಿ ಈ ಸಾವಿನಲ್ಲಿ ಅನುಮಾನವಿದೆ ಎಂದು ಪೊಲೀಸರಿಗೆ ದೂರು ನೀಡಿದರು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ, ಮೊಬೈಲ್ ಫೋನ್ನ ಒಂದು ಸಣ್ಣ ಕರೆ ಸುಳಿವಾಯಿತು. ಆ ಸುಳಿವಿನ ಆಧಾರದ ಮೇಲೆ ತನಿಖೆ ಮುಂದುವರಿಸಿದ ಪೊಲೀಸರಿಗೆ ಹಂತಕನ ಇಡೀ ಇತಿಹಾಸವೇ ಸಿಕ್ಕಿತು.
Gadag – ಹಣಕ್ಕಾಗಿ ಬ್ಲ್ಯಾಕ್ಮೇಲ್: ಪ್ರೀತಿ ಕಹಿಯಾದಾಗ
ಕೊಲೆಯಾದ ಲಕ್ಷ್ಮೀಗೆ ಮೂವರು ಮಕ್ಕಳಿದ್ದಾರೆ. ಆದರೆ ಗಂಡನಿಂದ ದೂರವಾಗಿದ್ದ ಲಕ್ಷ್ಮೀ ಜೀವನ ಸಾಗಿಸಲು ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಆ ಸಮಯದಲ್ಲಿ ಹಾವೇರಿ ಜಿಲ್ಲೆಯ ಸುನಿಲ್ ಎಂಬ ಯುವಕನ ಪರಿಚಯ ಅವಳಿಗಾಯಿತು. ಇಬ್ಬರ ನಡುವೆ ಪ್ರೇಮಾಂಕುರವಾಯಿತು, ನಂತರ ಅನೈತಿಕ ಸಂಬಂಧಕ್ಕೂ ತಿರುಗಿತು. ಆದರೆ 30 ವರ್ಷದ ಸುನಿಲ್ನಿಗೆ ಮದುವೆ ಮಾಡಲು ಅವರ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು. ಅದೇ ಸಮಯದಲ್ಲಿ ಲಕ್ಷ್ಮೀ ತನಗೆ 5 ಲಕ್ಷ ರೂಪಾಯಿ ಹಣ ನೀಡಬೇಕೆಂದು ಪಟ್ಟು ಹಿಡಿದಳು. ಇಲ್ಲದಿದ್ದರೆ ತಮ್ಮ ಅನೈತಿಕ ಸಂಬಂಧದ ವಿಷಯವನ್ನು ಬಹಿರಂಗಪಡಿಸುವುದಾಗಿ ಆಕೆ ಬ್ಲ್ಯಾಕ್ಮೇಲ್ ಮಾಡಲು ಪ್ರಾರಂಭಿಸಿದಳು.
Gadag – ಕಾರಿನಲ್ಲಿ ಕರೆದೊಯ್ದು ಕತ್ತು ಹಿಸುಕಿ ಕೊಲೆ
ಲಕ್ಷ್ಮೀಯ ಬ್ಲ್ಯಾಕ್ಮೇಲ್ನಿಂದ ಕಂಗಾಲಾದ ಯುವಕ ಸುನಿಲ್, ತನ್ನ ಸ್ನೇಹಿತರಾದ ಸಿದ್ದಪ್ಪ, ನಟರಾಜ್ ಮತ್ತು ರಮೇಶ್ ಅವರೊಂದಿಗೆ ಸೇರಿ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದನು. ಅದರಂತೆ, ಏಪ್ರಿಲ್ 22 ರಂದು ಲಕ್ಷ್ಮೀಯನ್ನು ಕಾರಿನಲ್ಲಿ ಮಂಗಳೂರಿಗೆ ಕರೆದುಕೊಂಡು ಹೋಗುವಾಗ ಕೇಬಲ್ ವೈಯರ್ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದರು. ನಂತರ ಮೃತದೇಹವನ್ನು ಸೂರಣಗಿ ಬಳಿ ಎಸೆದು ಪರಾರಿಯಾದರು. ಸದ್ಯ ಪೊಲೀಸರು ತಮ್ಮ ಚಾಣಾಕ್ಷ ತನಿಖೆಯಿಂದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಕಾರು, ಮೊಬೈಲ್ ಮತ್ತು ಕತ್ತು ಹಿಸುಕಲು ಬಳಸಿದ್ದ ಕೇಬಲ್ ವೈರ್ ಅನ್ನು ವಶಪಡಿಸಿಕೊಂಡು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. Read this also : Jaipur : ಜೈಪುರ ಆಸ್ಪತ್ರೆಯಲ್ಲಿ ಗಂಡನ ಕೊಲೆ ಯತ್ನ: ಪತ್ನಿ, ಪ್ರಿಯಕರ ಮತ್ತು ನರ್ಸ್ನಿಂದ ಓವರ್ಡೋಸ್ ಇಂಜೆಕ್ಷನ್?
ಒಟ್ಟಾರೆಯಾಗಿ, ಮೂವರು ಮಕ್ಕಳ ತಾಯಿ ಮದುವೆಯಾಗದ ಯುವಕನನ್ನು ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಮತ್ತೊಂದೆಡೆ, ಮದುವೆಯಾಗಿ ಸುಂದರ ಜೀವನ ನಡೆಸಬೇಕಾಗಿದ್ದ ಯುವಕ, ಮಹಿಳೆಯ ಹಿಂದೆ ಬಿದ್ದು ಈಗ ಜೈಲು ಸೇರಿದ್ದಾನೆ. ಹಾಗೆಯೇ, ಸ್ನೇಹಿತನಿಗೆ ಸಹಾಯ ಮಾಡಲು ಹೋದ ಮೂವರು ಗೆಳೆಯರೂ ಈಗ ಜೈಲಿನಲ್ಲಿ ಶಿಕ್ಷೆ ಅನುಭವಿಸುವಂತಾಗಿದೆ.