Mandya Crime – ಸಕ್ಕರೆ ನಾಡು ಮಂಡ್ಯದಲ್ಲಿ ಒಂದು ಭೀಕರ ಘಟನೆ ನಡೆದಿದೆ. ಜಿಲ್ಲೆಯ ಕೆ.ಆರ್ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿ ಪ್ರಿಯಕರನೊಬ್ಬ ತನ್ನ ವಿವಾಹಿತ ಪ್ರೇಯಸಿಯನ್ನು ಕೊಲೆ ಮಾಡಿ, ಆಕೆಯ ಚಿನ್ನಾಭರಣಗಳನ್ನು ದೋಚಿ, ಶವವನ್ನು ತನ್ನ ಜಮೀನಿನಲ್ಲಿ ಬಚ್ಚಿಟ್ಟಿದ್ದಾನೆ. ಈ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ 35 ವರ್ಷದ ಪ್ರೀತಿ ಎಂಬ ಮಹಿಳೆಯನ್ನು ಕರೋಟಿ ಗ್ರಾಮದ ಪುನೀತ್ ಹತ್ಯೆ ಮಾಡಿದ್ದಾನೆ. ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mandya Crime – ಕೇವಲ ನಾಲ್ಕೇ ದಿನದಲ್ಲಿ ಪ್ರೇಮದಿಂದ ಹತ್ಯೆಗೆ ತಿರುಗಿದ ಸಂಬಂಧ
ಪೊಲೀಸ್ ಮೂಲಗಳ ಪ್ರಕಾರ, ಮೃತ ಮಹಿಳೆ ಪ್ರೀತಿ (ಹೆಸರು ಬದಲಾಯಿಸಲಾಗಿದೆ) ಮತ್ತು ಆರೋಪಿ ಪುನೀತ್ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದರು. ಇವರ ನಡುವೆ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಸ್ನೇಹ, ಪ್ರೀತಿ ಮತ್ತು ದೈಹಿಕ ಸಂಬಂಧಗಳು ಬೆಳೆದಿವೆ. ಆದರೆ, ಪ್ರೀತಿಯ ಅತಿಯಾದ ದೈಹಿಕ ಬೇಡಿಕೆಗಳು ಕೊನೆಗೆ ಈ ಸಂಬಂಧವನ್ನು ಕೊಲೆಯಲ್ಲಿ ಅಂತ್ಯಗೊಳಿಸಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಘಟನೆ ನಡೆದ ಭಾನುವಾರದಂದು, ಪುನೀತ್ ಪ್ರೀತಿಯನ್ನು ತನ್ನ ಕಾರಿನಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಕೆಲವು ಸ್ಥಳಗಳನ್ನು ಸುತ್ತಾಡಿ, ಕೆಆರ್ಎಸ್ ಡ್ಯಾಂ ಸಮೀಪದ ಒಂದು ಲಾಡ್ಜ್ನಲ್ಲಿ ತಂಗಿ ದೈಹಿಕ ಸಂಬಂಧವನ್ನು ಬೆಳೆಸಿದ್ದಾರೆ. ಒಂದು ಬಾರಿಯ ದೈಹಿಕ ಸಂಪರ್ಕದಿಂದ ತೃಪ್ತಿಗೊಳ್ಳದ ಪ್ರೀತಿ, ಮತ್ತೊಮ್ಮೆ ಒತ್ತಾಯಿಸಿದ್ದಾಳೆ ಎನ್ನಲಾಗಿದೆ. ಇದರಿಂದ ಬೇಸರಗೊಂಡ ಪುನೀತ್ ಆಕೆಯನ್ನು ಕೆ.ಆರ್.ಪೇಟೆಗೆ ಕರೆತಂದಿದ್ದಾನೆ. ಆದರೂ, ಕೆ.ಆರ್.ಪೇಟೆಗೆ ಬಂದ ನಂತರವೂ ಪ್ರೀತಿ ಮತ್ತೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.
Mandya Crime – ಕತ್ತರಘಟ್ಟ ಕಾಡಿನಲ್ಲಿ ಬರ್ಬರ ಹತ್ಯೆ
ಪ್ರೀತಿಯ ನಿರಂತರ ಒತ್ತಾಯದಿಂದ ಕೆರಳಿದ ಪುನೀತ್, ಆಕೆಯನ್ನು ಕೆ.ಆರ್. ಪೇಟೆ ಸಮೀಪದ ಕತ್ತರಘಟ್ಟ ಕಾಡಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಮತ್ತೆ ಪ್ರೀತಿ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದಾಗ, ಪುನೀತ್ ಅದನ್ನು ನಿರಾಕರಿಸಿದ್ದಾನೆ. ಆಗ ಪ್ರೀತಿ, “ನೀನು ಗಂಡಸಾ?” ಎಂದು ವ್ಯಂಗ್ಯವಾಡಿದ್ದಾಳೆ.
ಈ ಮಾತು ಪುನೀತ್ಗೆ ತೀವ್ರ ಕೋಪ ತರಿಸಿದ್ದು, ಆತ ಆಕೆಯ ಕಪಾಳಕ್ಕೆ ಬಲವಾಗಿ ಹೊಡೆದಿದ್ದಾನೆ. ಪೆಟ್ಟಿನ ರಭಸಕ್ಕೆ ಪ್ರೀತಿ ಕೆಳಗೆ ಬಿದ್ದು, ಆಕೆಯ ತಲೆಗೆ ಪೆಟ್ಟಾಗಿ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿದ್ದಾಳೆ. ಆಗ ಪುನೀತ್ ಆಕೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ, ಪುನೀತ್ ಮೃತದೇಹವನ್ನು ತನ್ನದೇ ಕಾರಿನಲ್ಲಿ ತನ್ನ ಸ್ವಗ್ರಾಮಕ್ಕೆ ತಂದು, ತನ್ನ ಜಮೀನಿನ ಬಳಿ ಬಚ್ಚಿಟ್ಟಿದ್ದಾನೆ.
Read this also : ರೀಲ್ಸ್ ಜಗಳದ ದುರಂತ ಅಂತ್ಯ: ಪ್ರೇಯಸಿ ಸಾವಿಗೆ ಕಾರಣವಾಯ್ತು ಆ ವಿಡಿಯೋ…!
Mandya Crime – ಪತ್ತೆಹಚ್ಚಿದ ಪೊಲೀಸರು: ಆರೋಪಿ ಸೆರೆ
ಭಾನುವಾರ ರಾತ್ರಿ ಪ್ರೀತಿ ಕಾಣೆಯಾಗಿರುವ ಬಗ್ಗೆ ಹಾಸನದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ತಂತ್ರಜ್ಞಾನವನ್ನು ಬಳಸಿ, ಮೊಬೈಲ್ ನೆಟ್ವರ್ಕ್ ಆಧರಿಸಿ ಆರೋಪಿ ಪುನೀತ್ನನ್ನು ಪತ್ತೆ ಮಾಡಿದ್ದಾರೆ. ಆರಂಭದಲ್ಲಿ ಪುನೀತ್ ತಾನು ನಿರಪರಾಧಿ ಎಂದು ಹೇಳಿ ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ್ದನು. ಪ್ರೀತಿ ತನ್ನ ಕಾರನ್ನು ಬಾಡಿಗೆಗೆ ಪಡೆದಿದ್ದಳು ಮತ್ತು ಮೊಬೈಲ್ ಅನ್ನು ಕಾರಿನಲ್ಲಿಯೇ ಬಿಟ್ಟು ಹೋಗಿದ್ದಾಳೆ ಎಂದು ನಂಬಿಸಲು ಪ್ರಯತ್ನಿಸಿದ್ದನು. ಆದರೆ, ಪೊಲೀಸರು ತಮ್ಮದೇ ಆದ ಶೈಲಿಯಲ್ಲಿ ತನಿಖೆ ಮುಂದುವರೆಸಿದಾಗ, ಪುನೀತ್ ಕೊನೆಗೂ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.