DYFI Protest: ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗಳ ವಿರುದ್ದ ಡಿ.ವೈ.ಎಫ್.ಐ ಪ್ರತಿಭಟನೆ

ಗುಡಿಬಂಡೆ: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳಿದ್ದು, ಅವುಗಳನ್ನು ಕೂಡಲೇ ಬಗೆಹರಿಸಿ ಬಡವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು, ಇಲ್ಲವಾದಲ್ಲಿ ಆಸ್ಪತ್ರೆಯ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಡಿ.ವೈ.ಎಫ್.ಐ ಸಂಘಟನೆ (DYFI Protest) ಎಚ್ಚರಿಕೆ ನೀಡಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಡಿ.ವೈ.ಎಫ್.ಐ ಸಂಘಟನೆ ವತಿಯಿಂದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗಳ ವಿರುದ್ದ ಪ್ರತಿಭಟನೆಯನ್ನು (DYFI Protest) ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ, ಡಿ.ವೈ.ಎಫ್.ಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್ ಗುಡಿಬಂಡೆ ತಾಲೂಕು ಅತ್ಯಂತ ಹಿಂದುಳಿದ ತಾಲೂಕಾಗಿದ್ದು, ಈ ಭಾಗದಲ್ಲಿ ಬಡವರೇ ಹೆಚ್ಚಾಗಿದ್ದಾರೆ. ಜೊತೆಗೆ ತಾಲೂಕಿನಲ್ಲಿರುವುದು ಒಂದೇ ಸರ್ಕಾರಿ ಆಸ್ಪತ್ರೆ. ಎಲ್ಲರೂ ಇದೇ ಆಸ್ಪತ್ರೆಯನ್ನು ನಂಬಿಕೊಂಡಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಮಾತ್ರ ಅನೇಕ ಸಮಸ್ಯೆಗಳು ತಾಂಡವವಾಡುತ್ತಿವೆ. ಸರಿಯಾದ ಸಮಯಕ್ಕೆ ಅಂಬ್ಯುಲೆನ್ಸ್ ಸೇವೆ ದೊರೆಯುತ್ತಿಲ್ಲ. ಔಷಧಿಗಳು ಸಿಗುತ್ತಿಲ್ಲ, ವೈದ್ಯರು ಔಷಧಿಗಳನ್ನು ತರಲು ಹೊರಗೆ ಕಳುಹಿಸುತ್ತಿದ್ದಾರೆ. ಈ ಕುರಿತು ನಾನೆ ಸಾಕಷ್ಟು ಬಾರಿ ದೂರು ನೀಡಿದ್ದೇನೆ. ಜೊತೆಗೆ ರಾತ್ರಿ ಸಮಯದಲ್ಲಿ ಕೇವಲ ಒಬ್ಬ ವೈದ್ಯರು ಮಾತ್ರ ಕೆಲಸ ನಿರ್ವಹಿಸುತ್ತಾರೆ. ಇದರಿಂದ ತುಂಬಾನೆ ಸಮಸ್ಯೆಯಾಗುತ್ತಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಸಂಬಂಧ ಕೂಡಲೇ ಕ್ರಮ ತೆಗೆದುಕೊಂಡು ಬಡವರಿಗೆ ಸೂಕ್ತ ಹಾಗೂ ಗುಣಮಟ್ಟದ ಚಿಕಿತ್ಸೆ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

DYFI Protest 0

ಬಳಿಕ (DYFI Protest) ಜಿಲ್ಲಾ ಉಪಾಧ್ಯಕ್ಷ ಡಿ.ಆರ್‍.ದೇವರಾಜ್ ಮಾತನಾಡಿ, ರಾಜ್ಯದಾದ್ಯಂತ ಡೆಂಗ್ಯೂ ತಾಂಡವವಾಡುತ್ತಿದೆ. ಆದರೆ ಡೆಂಗ್ಯೂ ನಿಯಂತ್ರಣ ಮಾಡುವಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಆಸ್ಪತ್ರೆಯ ಮುಂಭಾಗ ಸೇರಿದಂತೆ ಒಳಭಾಗದಲ್ಲೂ ಅಸ್ವಚ್ಚತೆ ತಾಂಡವವಾಡುತ್ತಿದೆ. ಮತಷ್ಟು ಪರಿಣಾಮಕಾರಿಯಾಗಿ ಡೆಂಗ್ಯೂ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಕೇವಲ ಆಶಾಕಾರ್ಯಕರ್ತೆಯರು ಮಾತ್ರ ಕೆಲವೊಂದು ಗ್ರಾಮಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ಜೊತೆಗೆ ಆಸ್ಪತ್ರೆಯಲ್ಲಿ ಗುಂಪುಗಾರಿಕೆಯ ರಾಜಕಾರಣದಿಂದ ಬಡವರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ಅಂಬ್ಯುಲೆನ್ಸ್ ಸೇವೆ ತುಂಬಾನೆ ಕಷ್ಟಕರವಾಗಿದೆ. ಹೋಬಳಿಗೊಂದು ಅಂಬ್ಯುಲೆನ್ಸ್ ಒದಗಿಸಬೇಕು. ತಾಲೂಕಿನಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಿನಿ ಅಂಬ್ಯುಲೆನ್ಸ್ ಒದಗಿಸಬೇಕು ಎಂದು ಆಗ್ರಹಿಸಿದರು.

ಇದೇ ಸಮಯದಲ್ಲಿ ಡಿವೈಎಫ್.ಐ ಮುಖಂಡ (DYFI Protest) ಶಿವಪ್ಪ ಮಾತನಾಡಿ, ರಾತ್ರಿ ಪಾಳೆಯದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇವಲ ಒಬ್ಬ ವೈದ್ಯ ಮಾತ್ರ ಕೆಲಸ ಮಾಡುತ್ತಾರೆ. ಇದರಿಂದಾಗಿ ಬಡ ರೋಗಿಗಳು ತುಂಬಾನೆ ಸಮಸ್ಯೆಗೆ ಸಿಲುಕುತ್ತಿದ್ದಾರೆ. ನಾನು ಸಹ ಒಂದು ಭಾರಿ ಈ ಸಮಸ್ಯೆಯನ್ನು ಅನುಭವಿಸಿದ್ದೇನೆ. ನಮ್ಮ ತಾಯಿಯನ್ನು ಚಿಕಿತ್ಸೆಗೆ ಕರೆತಂದಾಗ ವೈದ್ಯರೊಬ್ಬರು ಇದ್ದು, ನನ್ನ ಅವಧಿ ಮುಗಿದಿದೆ ಎಂದು ನೊಡದೇ ಹೋಗಿ ಬಿಟ್ಟರು. ಚಿಕಿತ್ಸೆ ಸಿಗದೇ ನಮ್ಮ ತಾಯಿ ಅಂದು ಮೃತಪಟ್ಟರು. ಅಂದೇ ಮತ್ತೋರ್ವ ಮಗು ಸಹ ಪ್ರಾಣ ಕಳೆದುಕೊಂಡಿತ್ತು. ಆದ್ದರಿಂದ ರಾತ್ರಿ ಸಮಯದಲ್ಲಿ ಕನಿಷ್ಟ ಇಬ್ಬರು ವೈದ್ಯರನ್ನಾದರೂ ನೇಮಕ ಮಾಡಬೇಕು. ರಾತ್ರಿ ಪಾಳಯದಲ್ಲಿ ಒಂದೇ ವೈದ್ಯರು ಕೆಲಸ ಮಾಡಬೇಕು ಎಂಬ ಆದೇಶ ಇದ್ದರೇ ಕೊಡಿ ಎಂದು ವೈದ್ಯಾಧಿಕಾರಿಗಳಿಗೆ ಪ್ರಶ್ನೆ ಹಾಕಿದರು.

DYFI Protest 1

ಇನ್ನೂ (DYFI Protest) ಪ್ರತಿಭಟನಾಕಾರರಿಂದ ಮನವಿ ಪತ್ರ ಸಲ್ಲಿಸಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ, ತಾಲೂಕಿನಾದ್ಯಂತ ಡೆಂಗ್ಯೂ ನಿರ್ವಹಣೆಯನ್ನು ಪರಿಣಾಮಕಾರಿಯಾಗಿಯೇ ಮಾಡಲಾಗುತ್ತಿದೆ. ಸದ್ಯ ಕೊಂಚ ಮಟ್ಟಿಗೆ ಅಂಬ್ಯುಲೆನ್ಸ್ ಸಮಸ್ಯೆ ಇತ್ಯರ್ಥವಾಗಿದೆ. ನಿಮ್ಮ ಬೇಡಿಕೆಯಂತೆ ಹೆಚ್ಚುವರಿ ಆಂಬ್ಯುಲೆನ್ಸ್ ಸೇವೆ ಒದಗಿಸಲು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ನಮ್ಮ ಹಂತದಲ್ಲಿ ಬಗೆಹರಿಸಬಹುದಾದ ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಸಿಪಿಎಂ ಮುಖಂಡ ಆದಿನಾರಾಯಣಸ್ವಾಮಿ, ಡಿವೈಎಫ್.ಐ ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯರಾದ ಸೋಮಶೇಖರ್ ರೆಡ್ಡಿ, ಶಿವಪ್ಪ, ತಾಲೂಕು ಮುಖಂಡರಾದ ಗಂಗರಾಜು, ಹರಿಕೃಷ್ಣ, ರಾಮಾಂಜಿ, ವೆಂಕಟೇಶ್, ಗಂಗಾಧರ, ಅಶೋಕ್, ಶಿವಕುಮಾರ್ ಸೇರಿದಂತೆ ಹಲವರು ಇದ್ದರು.

Leave a Comment

Your email address will not be published. Required fields are marked *

Scroll to Top