Devanahalli – ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದ ಭೀಕರ ಘಟನೆಯಲ್ಲಿ ಯುವಕನೊಬ್ಬನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಲಾಗಿದೆ. ನೀರುಗುಂಟೆಪಾಳ್ಯ ಗ್ರಾಮದ 19 ವರ್ಷದ ಪ್ರೀತಂ ಎಂಬ ಯುವಕನೇ ಕೊಲೆಯಾದ ದುರ್ದೈವಿ. ಈ ಘಟನೆ ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಯುವಕನ ತಾಯಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಪ್ರೀತಂ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆತನು ತನಗಿಂತ ಎರಡು ವರ್ಷ ದೊಡ್ಡವಳಾದ ಎಂಬಿಬಿಎಸ್ ಓದುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಈ ಪ್ರೇಮ ವಿಚಾರ ತಿಳಿದ ಯುವತಿಯ ಸಂಬಂಧಿಕರು ಪ್ರೀತಂಗೆ ಎಚ್ಚರಿಕೆ ನೀಡಿದ್ದರು.
Devanahalli – ಎಚ್ಚರಿಕೆಗೂ ಬಗ್ಗದ ಪ್ರೀತಿಗೆ ದುರಂತ ಅಂತ್ಯ
ಪ್ರೀತಂ ಯುವತಿಯನ್ನು ಪ್ರೀತಿಸುವುದನ್ನು ಮುಂದುವರೆಸಿದ್ದ. ಇದರ ಪರಿಣಾಮವಾಗಿ, ಶುಕ್ರವಾರ ರಾತ್ರಿ ಪ್ರೀತಂನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಯುವತಿಯ ಚಿಕ್ಕಮ್ಮನ ಮಗ ಶ್ರೀಕಾಂತ್ ಮತ್ತು ಆತನ ಸಹಚರರು ಸೇರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಆರೋಪಿಗಳು ಕಂಠಪೂರ್ತಿ ಕುಡಿದು ಪ್ರೀತಂ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಂತರ ಆತನ ಶವವನ್ನು ಬಿಸಾಕಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
Devanahalli – ಕುಟುಂಬಸ್ಥರ ಆಕ್ರಂದನ, ನ್ಯಾಯಕ್ಕಾಗಿ ಮೊರೆ
ತಮ್ಮ ಕಣ್ಮುಂದೆಯೇ ಬೆಳೆದ ಮಗನನ್ನು ಕಳೆದುಕೊಂಡ ಪ್ರೀತಂನ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿದೆ. ಪೊಲೀಸ್ ಠಾಣೆಯ ಮುಂದೆ ಕುಳಿತಿರುವ ತಾಯಿ, ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ತಮ್ಮ ಮಗನ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ.
Devanahalli – ಯುವತಿ ತಂದೆ ಶ್ರೀನಿವಾಸ್ ಹೇಳುವುದೇನು?
ಈ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಯುವತಿಯ ತಂದೆ ಶ್ರೀನಿವಾಸ್, “ನನ್ನ ಮಗಳು ಪಲ್ಲವಿ ಚಿತ್ರದುರ್ಗದಲ್ಲಿ ಎಂಬಿಬಿಎಸ್ ಓದುತ್ತಿದ್ದಾಳೆ. ಈ ಹುಡುಗ ಪತ್ರ ಬರೆದುಕೊಂಡು ನನ್ನ ಮಗಳಿಗೆ ಪ್ರೀತಿ ಮಾಡುತ್ತಿದ್ದು, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಿದ್ದನಂತೆ. ಮಗಳು ಇತ್ತೀಚೆಗೆ ನನ್ನ ಬಳಿ ಹೆಚ್ಚು ಹಣ ಕೇಳುತ್ತಿದ್ದಳು. ವಿಚಾರಿಸಿದಾಗ, ಆತ ನನ್ನ ಫೋಟೋ ಇಟ್ಟುಕೊಂಡು ಬೆದರಿಸುತ್ತಿದ್ದರಿಂದ ಆತನಿಗೆ ಹಣ ಹಾಕಿದ್ದಾಗಿ ಹೇಳಿದಳು. ನಾನು ಮಗಳಿಗೆ ಬುದ್ಧಿವಾದ ಹೇಳಿ ಸಿಮ್ ಕಾರ್ಡ್ ಬದಲಾಯಿಸಿ, ಫೋನ್ ಪೇ ಡಿಲೀಟ್ ಮಾಡಿಸಿದ್ದೆ. ಆದರೂ ಅವನು ಅವಳನ್ನು ಹುಡುಕಿಕೊಂಡು ಚಿತ್ರದುರ್ಗಕ್ಕೆ ಹೋಗಿ ಕಿರುಕುಳ ನೀಡಿದ್ದ” ಎಂದು ತಿಳಿಸಿದ್ದಾರೆ. Read this also : ಮದುವೆಯಾದ 2 ವಾರಕ್ಕೆ ಪತಿಯ ಕೊಲೆ: ಪ್ರಿಯಕರನ ಜೊತೆ ಸೇರಿ ಪತ್ನಿಯ ಪ್ಲಾನ್ – ಸಂಪೂರ್ಣ ವಿವರ…!
Devanahalli – ನಮ್ಮ ಪತ್ನಿಯ ಅಕ್ಕನ ಮಗ ಈ ಕೃತ್ಯ ಎಸಗಿದ್ದಾನೆ
ನಮ್ಮ ಪತ್ನಿಯ ಅಕ್ಕನ ಮಗ ಈ ವಿಚಾರ ತಿಳಿದುಕೊಂಡು ಬಂದು ಈ ರೀತಿ ಮಾಡಿದ್ದಾನೆ. ನಮ್ಮ ಮನೆಯಲ್ಲಿ ಸಂಬಂಧಿಕರ ಮದುವೆ ಇತ್ತು. ಮದುವೆಗೆಂದು ಕಾರು ತೆಗೆದುಕೊಂಡು ಬಂದವನು ಈ ಕೃತ್ಯ ಎಸಗಿದ್ದಾನೆ. ಪೊಲೀಸರು ಮನೆಗೆ ಬಂದ ಮೇಲೆಯೇ ನಮಗೆ ಕೊಲೆಯಾದ ವಿಷಯ ತಿಳಿಯಿತು. ಈ ಕೊಲೆ ಪ್ರಕರಣದಲ್ಲಿ ನಮ್ಮದು ಅಥವಾ ನಮ್ಮ ಮಗಳದು ಯಾವುದೇ ಪಾತ್ರವಿಲ್ಲ. ನಾನು ಆ ಹುಡುಗನಿಗೆ ಯಾವುದೇ ಎಚ್ಚರಿಕೆ ನೀಡಿಲ್ಲ, ಅವನ ಮುಖವನ್ನೂ ನೋಡಿಲ್ಲ. ನಮಗೆ ಮಾಹಿತಿಯೇ ಇಲ್ಲದೆ ಬಂದು ಈ ರೀತಿ ಮಾಡಿದ್ದಾನೆ. ನನ್ನ ಪತ್ನಿಯೂ ಈ ರೀತಿ ಮಾಡಲು ಹೇಳಿಲ್ಲ. ಸಾಲ ಮಾಡಿ ನನ್ನ ಮಗಳನ್ನು ಓದಿಸುತ್ತಿದ್ದೇನೆ, ಕೊಲೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಾವೆಲ್ಲರೂ ಮದುವೆಯಲ್ಲಿ ಬ್ಯುಸಿಯಾಗಿದ್ದೆವು” ಎಂದು ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ.