Chikkaballapur – ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮನ ಕಲಕುವ ಘಟನೆಯೊಂದು ನಡೆದಿದೆ. ಓರ್ವ ತಾಯಿ, ತಮ್ಮಿಬ್ಬರು ಮುದ್ದಾದ ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ರಂಗಸ್ಥಳ ಗ್ರಾಮದ ರಂಗಧಾಮ ಕೆರೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಇಡೀ ಪ್ರದೇಶದಲ್ಲಿ ದುಃಖದ ಛಾಯೆ ಮೂಡಿಸಿದೆ.
Chikkaballapur – ಮೃತರ ಮಾಹಿತಿ
ರಂಗಧಾಮ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡವರು ಬಾಧಗಾನಹಳ್ಳಿ ಗ್ರಾಮದ ನಿವಾಸಿಗಳಾದ ಲಾವಣ್ಯ (30), ಅವರ ಪುತ್ರಿಯರಾದ ನಿಹಾರಿಕಾ (12) ಮತ್ತು ನೇಹಾ (9). ಅಕಾಲಿಕವಾಗಿ ಇಹಲೋಕ ತ್ಯಜಿಸಿದ ಈ ಮೂವರ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೃತರು ಚಿಕ್ಕಬಳ್ಳಾಪುರ ತಾಲೂಕಿನ ಬಾಧಗಾನಹಳ್ಳಿ ಗ್ರಾಮದವರು ಎಂದು ತಿಳಿದುಬಂದಿದೆ.
Chikkaballapur – ವೈಯಕ್ತಿಕ ಕಲಹವೇ ದುರಂತಕ್ಕೆ ಕಾರಣವಾಯಿತೇ?
ಪೊಲೀಸರ ಪ್ರಾಥಮಿಕ ತನಿಖೆಯಿಂದ ಕೆಲವು ಆಘಾತಕಾರಿ ಸತ್ಯಗಳು ಹೊರಬಿದ್ದಿವೆ. ಮೃತ ಲಾವಣ್ಯ ಅವರು ತಮ್ಮ ಪತಿ ಜಯಣ್ಣ ಅವರೊಂದಿಗೆ ನಿನ್ನೆ ತೀವ್ರ ವಾಗ್ವಾದ ನಡೆಸಿದ್ದರು ಎನ್ನಲಾಗಿದೆ. ಮುಖ್ಯವಾಗಿ ಮಕ್ಕಳನ್ನು ಶಾಲೆಗೆ ಸೇರಿಸುವ ವಿಚಾರ, ಉತ್ತಮವಾಗಿ ಸಂಪಾದಿಸುವಂತೆ ಮತ್ತು ಏರ್ಪೋರ್ಟ್ನಲ್ಲಿ ಡ್ರೈವರ್ ಕೆಲಸಕ್ಕೆ ಹೋಗುವಂತೆ ಪೀಡಿಸುತ್ತಿದ್ದರಂತೆ. ಇದೇ ವಿಚಾರದಲ್ಲಿ ಮನನೊಂದು ಲಾವಣ್ಯ ಅವರು ಈ ತೀವ್ರ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ
ನಿನ್ನೆ ಸಂಜೆ ಮನೆಯಿಂದ ನಾಪತ್ತೆಯಾಗಿದ್ದ ಲಾವಣ್ಯ ಮತ್ತು ಅವರ ಇಬ್ಬರು ಮಕ್ಕಳ ದೇಹಗಳು ಇಂದು ರಂಗಧಾಮ ಕೆರೆಯಲ್ಲಿ ತೇಲಾಡುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೂರು ಮೃತದೇಹಗಳನ್ನು ಹೊರತೆಗೆದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
Read this also : ಪ್ರೀತಿಸಿದ ಮಾವನ ಮಗಳ ಮದುವೆಗೆ ನಿರಾಕರಣೆ – ನೇಣಿಗೆ ಶರಣಾದ ಯುವಕ …..!
ಈ ದುರದೃಷ್ಟಕರ ಘಟನೆ ಪತಿ ಜಯಣ್ಣ ಅವರನ್ನು ಅಕ್ಷರಶಃ ಕಂಗೆಡಿಸಿದೆ. ಹೆಂಡತಿ ಮತ್ತು ಮಕ್ಕಳನ್ನು ಕಳೆದುಕೊಂಡು ಜಯಣ್ಣ ರೋಧಿಸುತ್ತಿರುವ ದೃಶ್ಯ ಮನಕಲಕುವಂತಿತ್ತು. ಈ ಘಟನೆಗೆ ನಿಖರ ಕಾರಣಗಳೇನು ಎಂಬ ಕುರಿತು ಚಿಕ್ಕಬಳ್ಳಾಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.