ಸಿನಿಮಾಗಳಲ್ಲಿ ಅಪರಾಧಿಗಳು ಕೊಲೆ ಮಾಡಿ ಅದನ್ನು ಅಪಘಾತ ಎಂದು ಬಿಂಬಿಸುವ ದೃಶ್ಯಗಳನ್ನು ನೀವು ನೋಡಿರಬಹುದು. ಆದರೆ, ಅಂಥದ್ದೇ ಒಂದು ರಕ್ತ ಹೆಪ್ಪುಗಟ್ಟುವ ನೈಜ ಘಟನೆ ರಾಜಸ್ಥಾನದ (Ajmer Family Murder Case) ಅಜ್ಮೀರ್ನಲ್ಲಿ ನಡೆದಿದೆ. ಕಣ್ಣೆದುರೇ ಗಂಡ, ಅತ್ತೆ, ಸವತಿ ಸೇರಿದಂತೆ ನಾಲ್ವರನ್ನು ಬರ್ಬರವಾಗಿ ಕೊಚ್ಚಿ ಕೊಂದು, ಶವಗಳನ್ನು ಕಾರಿಗೆ ಹಾಕಿ ಬೆಂಕಿ ಹಚ್ಚಿದ ಮಹಿಳೆಯೊಬ್ಬಳು, ಏನೂ ಗೊತ್ತಿಲ್ಲದಂತೆ ಕಣ್ಣೀರು ಸುರಿಸಿದ ಕರಾಳ ಸತ್ಯ ಇದೀಗ ಬಯಲಾಗಿದೆ. ರಾಜಸ್ಥಾನವನ್ನೇ ಬೆಚ್ಚಿಬೀಳಿಸಿದ ಈ ಭೀಕರ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

Ajmer Family Murder Case – ಅಪಘಾತವಲ್ಲ, ಇದು ವ್ಯವಸ್ಥಿತ ಕೊಲೆ!
ಅಜ್ಮೀರ್ ನಗರದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಶ್ರೀರಾಂಪುರ ಗ್ರಾಮದ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ಸ್ಕಾರ್ಪಿಯೋ ಕಾರೊಂದು ಪತ್ತೆಯಾಗಿತ್ತು. ಆರಂಭದಲ್ಲಿ ಎಲ್ಲರೂ ಇದೊಂದು ಭೀಕರ ರಸ್ತೆ ಅಪಘಾತ ಎಂದೇ ಭಾವಿಸಿದ್ದರು. ಆದರೆ, ವಿಧಿವಿಜ್ಞಾನ ತಜ್ಞರು ಮತ್ತು ಪೊಲೀಸ್ ತಂಡ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಶವಗಳ ಮೇಲಿದ್ದ ಗಾಯದ ಗುರುತುಗಳು ಇದು ಅಪಘಾತವಲ್ಲ, ವ್ಯವಸ್ಥಿತ ಕೊಲೆ ಎನ್ನುವುದನ್ನು ಸಾರಿ ಹೇಳುತ್ತಿದ್ದವು. ಕೊಲೆಗಾರರು ಮೊದಲು ಮನೆಯಲ್ಲೇ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸಲು ಶವಗಳನ್ನು ಕಾರಿಗೆ ತುಂಬಿಸಿ ಹೆದ್ದಾರಿಗೆ ತಂದು ಬೆಂಕಿ ಹಚ್ಚಿದ್ದರು.
ಸುಟ್ಟು ಕರಕಲಾದ ಕಾರಿನಲ್ಲಿ ಸಿಕ್ಕಿದ್ದು ಯಾರ ಶವ?
ಕಾರಿನೊಳಗೆ ಮೂರು ಹಾಗೂ ಸಮೀಪದ ಹೊಲದಲ್ಲಿ ಒಂದು ಸೇರಿ ಒಟ್ಟು ನಾಲ್ಕು ಶವಗಳು ಪತ್ತೆಯಾಗಿದ್ದವು. ಮೃತರನ್ನು ಗ್ರಾಮದ ಮಾಜಿ ಸರಪಂಚ್ ರಾಮ್ ಸಿಂಗ್ ಚೌಧರಿ, ಅವರ ತಾಯಿ ಪೂಸಿ ದೇವಿ, ರಾಮ್ ಸಿಂಗ್ ಅವರ ಎರಡನೇ ಪತ್ನಿ ಸೂರ್ಯಜ್ಞಾನ ದೇವಿ ಹಾಗೂ ಸಂಬಂಧದಲ್ಲಿ ಚಿಕ್ಕಮ್ಮನ ಮಗಳಾದ ಮಹಿಮಾ ಚೌಧರಿ ಎಂದು ಗುರುತಿಸಲಾಗಿದೆ. Read this also : ಅನೈತಿಕ ಸಂಬಂಧ ಶಂಖೆ, ಪ್ರಿಯಕರನೊಂದಿಗೆ ಸೇರಿ ಪತಿಗೆ 3 ಗಂಟೆಗಳ ಕಾಲ ಎಲೆಕ್ಟ್ರಿಕ್ ಶಾಕ್, ವಿಷ ಕೊಟ್ಟು ಕೊಂದ ಪತ್ನಿ!
ಪೊಲೀಸರನ್ನೇ ಯಾಮಾರಿಸಲು ಯತ್ನಿಸಿದ ಮೊದಲ ಪತ್ನಿ
ಕೊಲೆಗಾರರು ಯಾರು ಎಂದು ಹುಡುಕುತ್ತಾ ಪೊಲೀಸರು ರಾಮ್ ಸಿಂಗ್ ಮನೆಗೆ ಹೋದಾಗ, ಅಲ್ಲಿನ ದೃಶ್ಯವೇ ಬೇರೆ ಇತ್ತು. ರಾಮ್ ಸಿಂಗ್ ಅವರ ಮೊದಲ ಪತ್ನಿ ಸುನೀತಾ, ಊರಿನ ಮಹಿಳೆಯರ ನಡುವೆ ಕುಳಿತು (Ajmer Family Murder Case) ಎದೆ ಬಡಿದುಕೊಂಡು ಜೋರಾಗಿ ಅಳುತ್ತಿದ್ದಳು. ಅತ್ತೆಗೆ ದಿಢೀರ್ ಎದೆನೋವು ಬಂದಿದ್ದರಿಂದ ಗಂಡ ರಾಮ್ ಸಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು, ದಾರಿಯಲ್ಲಿ ಈ ಘೋರ ಅಪಘಾತ ನಡೆದಿದೆ ಎಂದು ಸುಳ್ಳು ಕಥೆ ಕಟ್ಟಿ ಪೊಲೀಸರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಳು. ಆಕೆಯ ನಟನೆ ಎಷ್ಟರಮಟ್ಟಿಗೆ ಇತ್ತೆಂದರೆ, ಆಕೆಯೇ ಈ ಇಡೀ ಹತ್ಯಾಕಾಂಡದ ರೂವಾರಿ ಎಂದು ಆರಂಭದಲ್ಲಿ ಯಾರೂ ಊಹಿಸಿರಲಿಲ್ಲ.

ಅಷ್ಟಕ್ಕೂ ಈ ಭೀಕರ ಹತ್ಯೆಗೆ ಕಾರಣವೇನು?
ಅಜ್ಮೀರ್ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ಅಗರ್ವಾಲ್ ನೇತೃತ್ವದ ತಂಡ ಕೌಟುಂಬಿಕ ಹಿನ್ನೆಲೆಯನ್ನು ಕೆದಕಿದಾಗ ಅಸಲಿ ಕಹಿಸತ್ಯ ಹೊರಬಿದ್ದಿದೆ. ರಾಮ್ ಸಿಂಗ್ ತನ್ನ ಇಬ್ಬರು ಪತ್ನಿಯರೊಂದಿಗೆ (Ajmer Family Murder Case) ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಆಸ್ತಿ ಹಾಗೂ ಈ ಎರಡನೇ ಮದುವೆಯ ವಿಚಾರವಾಗಿ ಮನೆಯಲ್ಲಿ ದೀರ್ಘಕಾಲದಿಂದ ಕೌಟುಂಬಿಕ ವಿವಾದವಿತ್ತು. ಬುಧವಾರ ತಡರಾತ್ರಿ ಈ ಕಲಹ ವಿಕೋಪಕ್ಕೆ ಹೋಗಿದೆ. ಸಿಟ್ಟಿಗೆದ್ದ ಮೊದಲ ಪತ್ನಿ ಸುನೀತಾ, ತನ್ನ ಮಗಳು ಸರಿತಾ ಹಾಗೂ ಅಪ್ರಾಪ್ತ ಮಗನ ಜೊತೆ ಸೇರಿ ಹರಿತವಾದ ಆಯುಧಗಳಿಂದ ನಾಲ್ವರನ್ನೂ ಬರ್ಬರವಾಗಿ ಕತ್ತರಿಸಿ ಕೊಂದಿದ್ದಾಳೆ.
ಕಂಬಿ ಹಿಂದಕ್ಕೆ ಹೋದ ಹಂತಕರು
ಗ್ರಾಮಸ್ಥರು ನೀಡಿದ ಸುಳಿವು (Ajmer Family Murder Case) ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನಿಂದ ಪೊಲೀಸರು ಈಗ ಆರೋಪಿ ಸುನೀತಾ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಬಳಸಿದ ಆಯುಧಗಳನ್ನು ಜಪ್ತಿ ಮಾಡಿಕೊಳ್ಳಲಾಗುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಆಸ್ತಿ ಮತ್ತು ದ್ವೇಷಕ್ಕಾಗಿ ಸ್ವಂತ ಕುಟುಂಬವನ್ನೇ ನಿರ್ನಾಮ ಮಾಡಿ, ನಾಟಕವಾಡಿದ ಈ ಕ್ರೂರ ಘಟನೆ ಇಡೀ ಗ್ರಾಮಸ್ಥರನ್ನು ಆಘಾತಕ್ಕೀಡುಮಾಡಿದೆ.
