Local News – ಚಿಕ್ಕಬಳ್ಳಾಪುರದ ಹಿರಿಯ ನ್ಯಾಯಾಧೀಶೆ ಶಿಲ್ಪಾ ರವರು ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ರೂರಲ್ ಗುಡಿಬಂಡೆಯ ಅಂಗನವಾಡಿ ಕೇಂದ್ರಗಳಿಗೆ ದಿಡೀರ್ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಗುಡಿಬಂಡೆ ತಾಲೂಕಿನ ನಡುವನಹಳ್ಳಿ ಗ್ರಾಮದ ಬಳಿ ನಡೆಸಲಾಗುತ್ತಿದ್ದ ನಮ್ಮ ನಾಡು ಗೋ ಶಾಲೆಯ ಅವ್ಯವಸ್ಥೆಗಳ ಕುರಿತು ದೂರು ನೀಡಿದ್ದ ನ್ಯಾಯಾಧೀಶೆ ಶಿಲ್ಪಾ ರವರು ಜೂ.6 ರಂದು ಗೋಶಾಲೆಗೆ ಭೇಟಿ ನೀಡಿದ್ದರು.
Local News – ನ್ಯಾಯಾಧೀಶರ ಸಮ್ಮುಖದಲ್ಲಿ ಗೋವುಗಳ ಸ್ಥಳಾಂತರ
ನಮ್ಮ ನಾಡು ಗೋಶಾಲೆಯ ಅವ್ಯವಸ್ಥೆಗಳ ಬಗ್ಗೆ ನ್ಯಾಯಾಧೀಶೆ ಶಿಲ್ಪಾ ರವರು ನೀಡಿದ ದೂರಿನ ಮೇರೆಗೆ ಗೋಶಾಲೆಯ ಮಾಲೀಕ ವೆಂಕಟೇಶ್ ನನ್ನು ಬಂಧನ ಮಾಡಲಾಗಿದೆ. ಇನ್ನೂ ನ್ಯಾಯಾಧೀಶರ ಸಮ್ಮುಖದಲ್ಲಿ ನಮ್ಮ ನಾಡು ಗೋಶಾಲೆಯಲ್ಲಿದ್ದ ಹಸುಗಳನ್ನು ಬೇರೆ ಗೋಶಾಲೆಗಳಿಗೆ ಸ್ಥಳಾಂತರ ಮಾಡಲಾಯಿತು. ಶಿಡ್ಲಘಟ್ಟದ ನಾಗಿರೆಡ್ಡಿಹಳ್ಳಿ ಗ್ರಾಮದ ಬಳಿಯ ಸರ್ಕಾರಿ ಗೋಶಾಲೆಗೆ ಹಾಗೂ ದೇವರಹೊಸಹಳ್ಳಿ ಗ್ರಾಮದ ಬಳಿಯ ಶ್ರೀಕೃಷ್ಣ ಗೋಶಾಲೆಗೆ ಹಸುಗಳನ್ನು ಸಾಗಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಡಾ.ರಂಗಪ್ಪ, ತಹಸೀಲ್ದಾರ್ ಅನೀಲ್, ಗುಡಿಬಂಡೆ ಆರಕ್ಷಕ ಉಪನಿರೀಕ್ಷಕ ಗಣೇಶ್ ರವರುಗಳು ಈ ಸಮಯದಲ್ಲಿ ಹಾಜರಿದ್ದರು.
Local News – ಸಾರ್ವಜನಿಕ ಆಸ್ಪತ್ರೆಗೆ ಭೇಟಿ, ರೋಗಿಗಳೊಂದಿಗೆ ಸಂವಾದ
ಬಳಿಕ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ನ್ಯಾಯಾಧೀಶೆ ಶಿಲ್ಪಾ ರವರು ಔಷಧಾಲಯ, ರಕ್ತ ಪರೀಕ್ಷಾ ಕೇಂದ್ರ, ವಿವಿಧ ವಾರ್ಡ್ಗಳನ್ನು ಪರೀಕ್ಷೆ ಮಾಡಿದರು. ಈ ಸಮಯದಲ್ಲಿ ಅಲ್ಲಿದ್ದ ರೋಗಿಗಳು ಹಾಗೂ ಸಾರ್ವಜನಿಕರ ಕ್ಷೇಮ ಸಮಾಚಾರವನ್ನು ವಿಚಾರಿಸಿದರು. ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಹಾಗೂ ಸ್ವಚ್ಚತೆ ಕಾಪಾಡುವಂತೆ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತನೆ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
Local News – ಅಂಗನವಾಡಿ ಕೇಂದ್ರಗಳ ಬಗ್ಗೆ ಅಸಮಧಾನ
ಇನ್ನೂ ಗುಡಿಬಂಡೆ ತಾಲೂಕಿನ ರೂರಲ್ ಗುಡಿಬಂಡೆಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ನ್ಯಾಯಧೀಶರು ಕೇಂದ್ರಗಳಲ್ಲಿನ ಅವ್ಯವಸ್ಥೆಗಳ ಕುರಿತು ಅಸಮಧಾನ ವ್ಯಕ್ತಪಡಿಸಿದರು. ಅಂಗನವಾಡಿ ಕೇಂದ್ರದಲ್ಲಿ ಅವಧಿ ಮುಗಿದ ಕೆಲವೊಂದು ಆಹಾರ ಪದಾರ್ಥಗಳನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಜೊತೆಗೆ ಕೇಂದ್ರದ ಮಕ್ಕಳಿಗೆ ಸರಿಯಾಗಿ ಮೊಟ್ಟೆ ನೀಡದ ಬಗ್ಗೆಯೂ ಆಕ್ರೋಷ ಹೊರಹಾಕಿದರು. ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಸೀಜ್ ಮಾಡಿದರು.
Read this also : ಪ್ರಕೃತಿ ನಾಶಕ್ಕೆ ಮಾನವನ ದುರಾಸೆಯೇ ಕಾರಣ: ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನಗೌಡರ್
Local News – ಅಂಗನವಾಡಿ ಕಾರ್ಯಕರ್ತೆಯರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶೆ
ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಮಯದಲ್ಲಿ ಅಂಗನವಾಡಿ ಶಿಕ್ಷಕಿ, ಸಹಾಯಕಿಯರನ್ನು ತರಾಟೆಗೆ ತೆಗೆದುಕೊಂಡರು. ಮಕ್ಕಳಿಗೆ ನೀಡುವ ಆಹಾರವನ್ನು ಸರಿಯಾಗಿ ನೀಡಬೇಕು. ನಿಮ್ಮ ಮನೆ ಮಕ್ಕಳಿಗೂ ಇದೇ ರೀತಿಯ ಆಹಾರ ಹಾಕುತ್ತೀರಾ ಹೇಳಿ. ಈ ರೀತಿಯ ನಡವಳಿಕೆ ಸರಿಯಲ್ಲ ಎಂದು ಅಂಗನವಾಡಿ ನೌಕರರನ್ನು ತರಾಟೆಗೆ ತೆಗೆದುಕೊಂಡರು.