ಬಾಗೇಪಲ್ಲಿ: ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಲು ಹಾಗೂ ಆರೋಗ್ಯ ವೃದ್ದಿಯಾಗಲು ಸಹಕಾರಿಯಾಗುತ್ತೆ. ಯೋಗಾಭ್ಯಾಸ ಮಾಡುವುದನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿನಿತ್ಯ ಅಭ್ಯಾಸ ಮಾಡುವುದನ್ನು ಬಾಲ್ಯದಿಂದಲ್ಲೇ ರೂಢಿಸಿಕೊಳ್ಳುವಂತೆ ನಿವೃತ್ತ ತಹಸೀಲ್ದಾರ್ ಹಾಗೂ ಪತಾಂಜಲಿ ಯೋಗ ಶಿಕ್ಷಕರಾದ ಎಸ್. ಮುನಿರಾಮಯ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪಟ್ಟಣದ ಯಂಗ್ ಇಂಡಿಯಾ ಶಾಲೆಯ ಆವರಣದಲ್ಲಿ ನಡೆದ 10ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನುಷ್ಯ ಒತ್ತಡದ ಜೀವನದಲ್ಲಿ ಆರೋಗ್ಯದ ಕಡೆ ಗಮನಹರಿಸದ ಪರಿಣಾಮ ಒಂದಲ್ಲೊಂದು ರೀತಿಯ ಅನಾರೋಗ್ಯಕ್ಕೆ ತುತ್ತಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಲು ಯೋಗಭ್ಯಾಸ ಅಗತ್ಯವಿದೆ ಎಂದ ಅವರು ಯೋಗ ಅನಾದಿಕಾಲದಿಂದಲ್ಲೂ ನಮ್ಮ ದೇಶದಲ್ಲಿ ರೂಢಿಯಲ್ಲಿತ್ತು. ಕಾಲಕ್ರಮೇಣ ಬಹುತೇಕ ಕಣ್ಮರೆಯಾಗಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಯೋಗಾಭ್ಯಾಸ ಮಾಡುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಹಾಗೂ ಯೋಗದ ಮಹತ್ವದ ಬಗ್ಗೆ ತಿಳಿದ ನಂತರ ಇಂದು ಭಾರತ ಸೇರಿದಂತೆ ಇಡೀ ವಿಶ್ವದಲ್ಲಿ ಮನ್ನಣೆ ಪಡೆದಿದೆ. ಕೇವಲ ವಿಶ್ವ ಯೋಗ ದಿನಾಚರಣೆ ದಿನಕ್ಕೆ ಯೋಗಾಭ್ಯಾಸ ಮಾಡುವುದು ಸೀಮಿತವಾಗದೆ ಪ್ರತಿನಿತ್ಯ ವಿವಿಧ ಭಂಗಿಗಳಲ್ಲಿ ಯೋಗಾಭ್ಯಾಸ ಮಾಡುವುದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಆರೋಗ್ಯದ ಜೊತೆಗೆ ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯಸ್ಥ ಪ್ರೊ.ಡಿ.ಶಿವಣ್ಣ ಮಾತನಾಡಿ, ದೈನಂದಿನ ಜೀವನದಲ್ಲಿ ಯೋಗಾಭ್ಯಾಸ ಮಾಡುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗುವುದರಲ್ಲದೆ ಉತ್ತಮ ಆರೋಗ್ಯವನ್ನು ಹೊಂದಲು ಹಾಗೂ ಮನಸನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗುತ್ತೆ ಎಂದ ಅವರು ಪಠ್ಯದ ಜೊತೆಗೆ ಯೋಗಾಭ್ಯಾಸ, ವ್ಯಾಯಾಮ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ವಿದ್ಯಾರ್ಥಿಧೆಸೆಯಿಂದಲ್ಲೇ ರೂಢಿಸಿಕೊಳ್ಳಬೇಕೆಂದರು.
10ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯಂಗ್ ಇಂಡಿಯಾ ಶಾಲೆಯ ವಿದ್ಯಾರ್ಥಿಗಳು ಯೋಗಾಭ್ಯಾಸ ಪ್ರದರ್ಶನ ನಡೆಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಆರ್. ಕಲ್ಪನಾ, ಯೋಗ ಶಿಕ್ಷಕ ಮುನಿರಾಜು ಮತ್ತಿತರರು ಇದ್ದರು.