Environment – ಭೂಮಿಯ ಮೇಲಿನ ಅತಿ ಬುದ್ಧಿವಂತ ಜೀವಿ ಎಂದು ಕರೆಸಿಕೊಳ್ಳುವ ಮಾನವನ ದುರಾಸೆಯಿಂದಲೇ ಇಂದು ಪ್ರಕೃತಿ ನಾಶವಾಗುತ್ತಿದೆ. ಇದು ಹೀಗೇ ಮುಂದುವರಿದರೆ ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳ ಅಳಿವು ನಿಶ್ಚಿತ ಎಂದು ನ್ಯೂ ಪಬ್ಲಿಕ್ ಶಾಲೆಯ ಮುಖ್ಯಸ್ಥೆ ಮಂಜುಳಾ ರಾಜಶೇಖರ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರೂ ಪ್ರಕೃತಿ ಸಂರಕ್ಷಣೆಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
Environment – ವಿಶ್ವ ಪರಿಸರ ದಿನಾಚರಣೆ: ಸಸಿ ನೆಡುವ ಮೂಲಕ ಜಾಗೃತಿ
ಗುಡಿಬಂಡೆ ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯಲ್ಲಿ ವಲಯ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಮಂಜುಳಾ ರಾಜಶೇಖರ್ ಮಾತನಾಡಿದರು. “ಭೂಮಿಯ ಮೇಲೆ ಕೋಟ್ಯಂತರ ಜೀವರಾಶಿಗಳಿವೆ. ಈ ಎಲ್ಲಾ ಜೀವರಾಶಿಗಳ ಪೈಕಿ ಮಾನವ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿದ್ದಾನೆ. ಆದರೆ, ಪ್ರಕೃತಿಯ ಮಡಿಲಿನಿಂದ ಬಂದ ಮಾನವನೇ ಇಂದು ಪ್ರಕೃತಿಗೆ ಮಾರಕವಾಗಿದ್ದಾನೆ. ಮಾನವರ ದುರಾಸೆಯಿಂದ ಪ್ರಕೃತಿ ದಿನದಿಂದ ದಿನಕ್ಕೆ ನಾಶವಾಗುತ್ತಿದೆ,” ಎಂದು ಅವರು ವಿಷಾದಿಸಿದರು.
Read this also : ವಿಶ್ವ ಬೈಸಿಕಲ್ ದಿನ 2025- ಪರಿಸರ ಮತ್ತು ಆರೋಗ್ಯದ ಮಿತ್ರ ಸೈಕಲ್ ಸವಾರಿ…!
Environment – ನಗರೀಕರಣದಿಂದ ಪ್ರಕೃತಿ ಸಮತೋಲನಕ್ಕೆ ಧಕ್ಕೆ
“ಪ್ರಕೃತಿ ಒಂದು ಸರಪಳಿಯಂತೆ ಕೆಲಸ ಮಾಡುತ್ತದೆ. ಮರಗಳಿದ್ದರೆ ನೀರು, ನೀರಿದ್ದರೆ ಮರಗಳು – ಇವೆರಡೂ ಒಂದಕ್ಕೊಂದು ಪೂರಕ. ಆದರೆ, ನಗರೀಕರಣ ಮತ್ತು ಇತರ ಕಾರಣಗಳಿಂದ ಮರಗಳ ನಾಶ ಹೆಚ್ಚಾಗುತ್ತಿದೆ. ಇದರಿಂದ ಮಳೆಯ ಅಭಾವ ಉಂಟಾಗಿ ಮನುಷ್ಯರಿಗೆ ಮಾತ್ರವಲ್ಲದೆ, ಇಡೀ ಜೀವರಾಶಿಗಳಿಗೆ ಸಂಕಷ್ಟ ಎದುರಾಗುತ್ತಿದೆ. ಹಾಗಾಗಿ, ನಾವೆಲ್ಲರೂ ಕಡ್ಡಾಯವಾಗಿ ಪ್ರಕೃತಿಯನ್ನು ಕಾಪಾಡಲು ಮುಂದಾಗಬೇಕು,” ಎಂದು ಮಂಜುಳಾ ರಾಜಶೇಖರ್ ಅವರು ಒತ್ತಿ ಹೇಳಿದರು.
Environment – ಅರಣ್ಯ ಇಲಾಖೆ ಅಧಿಕಾರಿ ರಾಜಶೇಖರ್ ಅವರ ಕರೆ: ಪರಿಸರ ಸಂರಕ್ಷಣೆಯೇ ನಮ್ಮ ಭವಿಷ್ಯ
ಇದೇ ಸಂದರ್ಭದಲ್ಲಿ ಮಾತನಾಡಿದ ಅರಣ್ಯ ಇಲಾಖೆಯ ಅಧಿಕಾರಿ ರಾಜಶೇಖರ್, “ಇಂದು ನಗರೀಕರಣ ಮತ್ತು ಆಧುನೀಕರಣದ ಹೆಸರಿನಲ್ಲಿ ನಾವು ಅರಣ್ಯ ಹಾಗೂ ಪರಿಸರವನ್ನು ನಾಶ ಮಾಡುತ್ತಿದ್ದೇವೆ. ಇದು ಮರಗಳ ಹನನಕ್ಕೆ ಕಾರಣವಾಗುತ್ತಿದೆ. ಪರಿಸರ ನಾಶದಿಂದ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿವೆ. ಒಂದು ಕಡೆ ಅತಿಯಾದ ಮಳೆಯಿಂದ ಅತಿವೃಷ್ಟಿಯಾದರೆ, ಮತ್ತೊಂದು ಕಡೆ ಮಳೆಯಿಲ್ಲದೆ ಅನಾವೃಷ್ಟಿ ಸಂಭವಿಸುತ್ತಿದೆ. ಪರಿಸರ ಮುನಿಸಿಕೊಂಡರೆ ಇಡೀ ಜಗತ್ತೇ ನಾಶವಾಗುತ್ತದೆ,” ಎಂದು ಎಚ್ಚರಿಸಿದರು.
ಕಾರ್ಯಕ್ರಮದ ಅಂಗವಾಗಿ, ನ್ಯೂ ಪಬ್ಲಿಕ್ ಶಾಲಾ ಆವರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟರು. ಸಸಿಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ವಹಿಸಿಕೊಂಡರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಕನಕರಾಜು, ಶಾಲಾ ಶಿಕ್ಷಕರಾದ ಖಲೀಲ್ ಉಲ್ಲಾ, ನರೇಶ್, ಮಂಜುನಾಥ್, ರೋಷಿಣಿ, ಮಮತಾ, ಫಿರ್ದೋಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.