ಕೆಲವು ದಿನಗಳ ಹಿಂದೆಯಷ್ಟೆ ಸಿಲಿಕಾನ್ ಸಿಟಿ ಬೆಂಗಳೂರಿನ ಕೆಂಗೇರಿ ಠಾಣಾ ವ್ಯಾಪ್ತಿಯ ಒಂಟಿ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ. ಬಾಡಿಗೆ ಮನೆಯಲ್ಲಿದ್ದ ಯುವತಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಗೆ ಟಾಟಾ ಏಸ್ ವಾಹನ ಕೊಡಿಸಲು ಈ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಕೊಲೆಯಾದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕದಿಯುವ ಸಲುವಾಗಿ ಮಹಿಳೆಯನ್ನು ರೀಲ್ಸ್ ರಾಣಿ ಕೊಲೆ ಮಾಡಿದ್ದಾಳೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಕಳೆದ ಮೇ.10 ರಂದು ಬೆಂಗಳೂರಿನ ಕೆಂಗೇರಿ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ಮಹಿಳೆಯೊಬ್ಬರ ಕೊಲೆ ನಡೆದಿತ್ತು. ಕೊಲೆ ಮಾಡಿದ ಆರೋಪಿಯನ್ನು ಮೋನಿಕಾ (24) ಎಂದು ಗುರ್ತಿಸಲಾಗಿದೆ. ಬಂಧಿತ ಮೋನಿಕಾ ಕಂಪನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು. ಶೋಕಿ ಮಾಡಲು ತುಂಬಾನೆ ಸಾಲ ಮಾಡಿದ್ದರಂತೆ, ಸಾಲ ತೀರಿಸಲು ಹಾಗೂ ಜೀವನ ನಡೆಸಲು ಆಕೆ ಮನೆಯ ಮಾಲಕಿಯನ್ನೇ ಹತ್ಯೆ ಮಾಡಿದ್ದಾಳೆ.
ಇನ್ನೂ ಆರೋಪಿ ಮೋನಿಕಾ ಮೂಲತಃ ಕೋಲಾರ ಜಿಲ್ಲೆಯವಳು. ಬೆಂಗಳೂರಿನ ಮನೆಯೊಂದರಲ್ಲಿ ಬಾಡಿಗೆಗಿದ್ದಳು. ಕಳೆದ ಮೂರು ತಿಂಗಳ ಹಿಂದೆ ಆಕೆ ಗುರುಮೂರ್ತಿ ಎಂಬುವವರ ಮನೆಗೆ ಬಾಡಿಗೆಗೆ ಬಂದಿದ್ದಳು. ತನ್ನ ಪ್ರಿಯಕರನನ್ನೆ ಗಂಡ ಎಂದು ಹೇಳಿ ಬಾಡಿಗೆಗೆ ಮನೆಯನ್ನು ಪಡೆದುಕೊಂಡರು. ಆದರೆ ಮನೆಯಲ್ಲಿ ಮೋನಿಕಾ ಒಬ್ಬಳೆ ವಾಸವಿದ್ದಳು. ಆಗಾಗ ಪ್ರಿಯಕರ ಬಂದು ಹೋಗುತ್ತಿದ್ದ. ಶೋಕಿ ಮಾಡುವ ಸಲುವಾಗಿ ಆಕೆ ಕೈ ತುಂಬಾ ಸಾಲ ಮಾಡಿಕೊಂಡಿದ್ದಳಂತೆ. ಜೊತೆಗೆ ಪ್ರಿಯಕರನಿಗೆ ಟಾಟಾ ಏಸ್ ವಾಹನ ಖರೀದಿಸಲು ಹಣ ಬೇಕಾಗಿದ್ದರಿಂದ ಮನೆಯ ಮಾಲಕಿ ದಿವ್ಯಾ (36) ಳ ಮೈಮೇಲಿದ್ದ ಚಿನ್ನದ ಆಭರಣಗಳ ಮೇಲೆ ಕಣ್ಣು ಹಾಕಿ ಆಕೆಯನ್ನು ಕೊಲೆ ಮಾಡಿದ್ದಾಳೆ.
ಇನ್ನೂ ಮೃತ ದಿವ್ಯ ಗಂಡ ಗುರುಮೂರ್ತಿ ಕೆಂಗೇರಿ ಉಪನಗರದ ಶಿವನಪಾಳ್ಯದಲ್ಲಿ ಸಲೂನ್ ಶಾಪ್ ನಡೆಸುತ್ತಿದ್ದರು. ದಿವ್ಯ ಅತ್ತೆ ಮಾವ ಸಹ ಬೆಳಿಗ್ಗೆನೆ ಕೆಲಸಕ್ಕೆ ಹೋಗ್ತಾ ಇದ್ದರು. ಮನೆಯಲ್ಲಿ ದಿವ್ಯ ಹಾಗೂ ಆಕೆಯ 2 ವರ್ಷದ ಮಗು ಮಾತ್ರ ಇದ್ದರು. ಇದನ್ನು ಅವಕಾಶವನ್ನಾಗಿ ಬಳಸಿಕೊಂಡು ಮೋನಿಕಾ ದಿವ್ಯ ಒಂಟಿಯಾಗಿದ್ದ ಸಮಯಕ್ಕಾಗಿ ಕಾದು, ಅವಕಾಶ ಸಿಕ್ಕಾಗಲೇ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಕೊಲೆ ಮಾಡಿದ ಬಳಿಕ ದಿವ್ಯ ಕತ್ತಿನಲ್ಲಿದ್ದ 36 ಗ್ರಾಂ ಚಿನ್ನ ಕದ್ದು ಹೋಗಿದ್ದಳು. ಬಳಿಕ ದಿವ್ಯ ಕೊಲೆಯಾದ ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರಿಗೆ ಮೊನಿಕಾ ಬಗ್ಗೆ ತಿಳಿದಿದ್ದು ಸದ್ಯ ಮೋನಿಕಾಳನ್ನು ಕೆಂಗೇರಿ ಪೊಲೀಸರು ಬಂಧನ ಮಾಡಿದ್ದಾರೆ ಎಂದು ತಿಳಿದುಬಂದಿದೆ.