Techie – ತುಮಕೂರು ಜಿಲ್ಲೆಯ ಕುಣಿಗಲ್ ಬಳಿಯ ದೊಡ್ಡಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಾಪ್ಟ್ವೇರ್ ಕಂಪನಿ ಉದ್ಯೋಗಿಯಾಗಿರುವ ಮಹಿಳೆಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಮೃತ ದುರ್ದೈವಿಯನ್ನು ಕುಣಿಗಲ್ ತಾಲೂಕಿನ ಸೊಬಗಾನಹಳ್ಳಿ ನಿವಾಸಿ ಸುಮಾ (26) ಎಂದು ಗುರ್ತಿಸಲಾಗಿದೆ.
ಕುಣಿಗಲ್ ತಾಲೂಕಿನ ಸೊಬಗಾನಹಳ್ಳಿ ನಿವಾಸಿ ಸುಮಾ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಗುರುವಾರ (ಫೆ.27) ರಂದು ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬಂದಿದ್ದರು. ಸುಮಾ ಶಿವರಾತ್ರಿ ನಿಮಿತ್ತ ಬೆಂಗಳೂರಿನಿಂದ ಊರಿಗೆ ಬಂದಿದ್ದರು. ಸಂಜೆ ವೇಳೆಗೆ ಕೆರೆ ಬಳಿ ಸುಮಾಳ ಬ್ಯಾಗ್, ಮೊಬೈಲ್, ಬಸ್ ಟಿಕೆಟ್ ಹಾಗೂ ಚಪ್ಪಲಿ ಸಿಕ್ಕಿದೆ. ಇದರಿಂದ ಅನುಮಾನಗೊಂಡು ಮಾಹಿತಿಯನ್ನು ಸುಮಾಳ ಕುಟುಂಬಸ್ಥರಿಗೆ ತಲುಪಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳ ಸಿಬ್ಬಂದಿ, ಪೊಲೀಸರು ಹಾಗೂ ಸುಮಾಳ ಕುಟುಂಬಸ್ಥರು ಕೆರೆಯ ಬಳಿ ದೌಡಾಯಿಸಿದ್ದಾರೆ. ಕೆರೆಯಲ್ಲಿ ಗುರುವಾರ ಸಂಜೆಯಿಂದ ಸುಮಾಳ ದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ಆದರೆ ಸುಮಾ ಪತ್ತೆಯಾಗಿರಲಿಲ್ಲ.
ನಂತರ ಶುಕ್ರವಾರ ಮತ್ತೆ ಶೋಧಕಾರ್ಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಮುಂದಾಗಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿಯ ಜೊತೆಗೆ ಶಾಸಕ ರಂಗನಾಥ್ ರವರೂ ಕೈ ಜೋಡಿಸಿದ್ದಾರೆ. ತಾವೇ ಖುದ್ದು ಶೋಧಕಾರ್ಯಕ್ಕಾಗಿ ಕೆರೆಗೆ ಇಳಿದಿದ್ದರು. ನಿರಂತರ ಶೋಧಕಾರ್ಯದ ಬಳಿಕ ಸುಮಾಳ ಮೃತದೇಹ ಪತ್ತೆಯಾಗಿದೆ. ಇನ್ನೂ ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು ಎಂದು ತಿಳಿದುಬಂದಿದೆ. ಇನ್ನೂ ಮೂಲಗಳ ಪ್ರಕಾರ ಸುಮಾ ಗುರುವಾರ ಬೆಂಗಳೂರಿಗೆ ವಾಪಸ್ ಆಗುವ ವೇಳೆ ಬಸ್ ನಲ್ಲಿ ಪೋನ್ ಮೂಲಕ ಮಾತನಾಡುತ್ತಾ ಜಗಳ ಮಾಡಿಕೊಂಡಿದ್ದರಂತೆ. ಜಗಳ ಮಾಡುತ್ತಲೇ ಕುಣಿಗಲ್ ಬಸ್ ನಿಲ್ದಾಣದಿಂದ ದೊಡ್ಡಕೆರೆ ಬಳಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.
ಲಕ್ನೋ ದಲ್ಲಿ ಪುರುಷ ಟೆಕ್ಕಿ ಆತ್ಮಹತ್ಯೆಗೆ ಶರಣು, ಪತ್ನಿಯ ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆ?
ಇನ್ನೂ ಉತ್ತರಪ್ರದೇಶದ ಆಗ್ರಾದಲ್ಲಿ ಟಿಸಿಎಸ್ ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಪತ್ನಿಯ ವಿರುದ್ದ ಆರೋಪ ಮಾಡಿ, ತಮ್ಮ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಫೆ.24 ರಂದು ಮಾನವ್ ಶರ್ಮಾ ಎಂಬ ವ್ಯಕ್ತಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನಾ ವಿಡಿಯೋ ಮಾಡಿಟ್ಟು ಪತ್ನಿಯ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಸುಮಾರು 7 ನಿಮಿಷಗಳ ಕಾಲ ಭಯಾನಕ ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಆತ ತಮ್ಮ ಪತ್ನಿ ಬೇರೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಆರೋಪ ಮಾಡಿದ್ದಾರೆ.
ಇನ್ನೂ ಕಾನೂನು ಪುರುಷರನ್ನು ರಕ್ಷಣೆ ಮಾಡಬೇಕು. ಇಲ್ಲವಾದಲ್ಲಿ ದೂಷಣೆ ಮಾಡಲು ಪುರುಷರೇ ಇಲ್ಲದ ಸಮಯ ಬರಬಹುದು. ನನ್ನ ಹೆಂಡತಿ ಬೇರೊಬ್ಬ ಪುರುಷನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು. ಆದ್ದರಿಂದ ನಾನು ಏನು ಮಾಡಬಹುದು. ನನಗೆ ಸಾಯುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ. ನಾನು ಹೋಗಬೇಕು, ದಯವಿಟ್ಟು ಪುರುಷರ ಬಗ್ಗೆ ಯೋಚನೆ ಮಾಡಿ, ಕ್ಷಮಿಸಿ, ದಯವಿಟ್ಟು ಯಾರಾದರೂ ಪುರುಷರ ಬಗ್ಗೆ ಧ್ವನಿ ಎತ್ತಬೇಕು ಎಂದು ತಮ್ಮ ನೋವನ್ನು ವಿಡಿಯೋ ಮೂಲಕ ಹಂಚಿಕೊಂಡು, ನೇಣಿಗೆ ಶರಣಾಗಿದ್ದಾರೆ.