Gudibande – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗ ಬಲಿಜ ಸಮುದಾಯದ ವತಿಯಿಂದ ಯೋಗಿನಾರೇಯಣ ಕೈವಾರ ತಾತಯ್ಯ ನವರ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮವನ್ನು ಏ.30 ರಂದು ನಿಗಧಿಪಡಿಸಲಾಗಿತ್ತು. ಆದರೆ ಅದೇ ಜಾಗದಲ್ಲಿ ಹಾವಳಿ ಬೈರೇಗೌಡ ಪುತ್ಥಳಿ ನಿರ್ಮಾಣ ಮಾಡಲು ವಕ್ಕಲಿಗ ಸಮುದಾಯ ಆಗ್ರಹಿಸಿದ ಘಟನೆ ನಡೆಯಿತು. ಈ ಕಾರಣದಿಂದ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣ ಸೃಷ್ಟಿಯಾಗಿತ್ತು. ವಕ್ಕಲಿಗ ಸಮುದಾಯದ ಮುಖಂಡರು ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನುಕಾಟ ತಳ್ಳಾಟ ನಡೆಯಿತು.
Gudibande – ಅಷ್ಟಕ್ಕೂ ಆಗಿದ್ದೇನು?
ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗ ಸರ್ಕಾರಕ್ಕೆ (ಬಿ.ಕರಾಬ್) ಸೇರಿದ ಜಾಗದಲ್ಲಿ ಕೈವಾರ ತಾತಯ್ಯನವರ ಪುತ್ಥಳಿ ನಿರ್ಮಾಣ ಮಾಡಲು ಬಲಿಜ ಸಮುದಾಯದವರು ಭೂಮಿ ಪೂಜಾ ಕಾರ್ಯಕ್ರಮವನ್ನು ನಿಗಧಿಪಡಿಸಿದ್ದರು. ಆದರೆ ಈ ಹಿಂದೆಯೇ ಅದೇ ಜಾಗದಲ್ಲಿ ಹಾವಳಿ ಬೈರೇಗೌಡರವರ ಪುತ್ಥಳಿ ನಿರ್ಮಾಣಕ್ಕಾಗಿ ಜಾಗ ನೀಡುವಂತೆ ವಕ್ಕಲಿಗರ ಸಂಘದ ವತಿಯಿಂದ ಮನವಿ ನೀಡಲಾಗಿದ್ದು, ಏಕಾಏಕಿ ಆ ಜಾಗದಲ್ಲಿ ಕೈವಾರ ತಾತಯ್ಯನವರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ವಕ್ಕಲಿಗ ಮುಖಂಡರ ಆಗ್ರಹವಾಗಿತ್ತು. ಇದೇ ಕಾರಣದಿಂದ ಅಲ್ಲಿ ಕೈವಾರ ತಾತಯ್ಯ ನವರ ಪುತ್ಥಳಿ ನಿರ್ಮಾಣ ಆದರೇ, ನಮ್ಮ ಬೈರೇಗೌಡ ಪುತ್ಥಳಿ ಸಹ ನಿರ್ಮಾಣವಾಗಬೇಕೆಂದು ವಕ್ಕಲಿಗ ಸಮುದಾಯ ಆಗ್ರಹಿಸಿದೆ. ಆದರೆ ಈ ಜಾಗದಲ್ಲಿ ಪುತ್ಥಳಿ ನಿರ್ಮಾಣಕ್ಕಾಗಿ ಪಪಂ ಆಡಳಿತ ಮಂಡಳಿ ಸಭೆಯ ನಡಾವಳಿ ಸಹ ಮಾಡಲಾಗಿದ್ದು, ನಾವು ಅದರಂತೆ ಪುತ್ಥಳಿ ನಿರ್ಮಾಣ ಮಾಡಲು ಸಿದ್ದತೆ ಮಾಡಿಕೊಂಡಿದ್ದಾಗಿ ಸ್ಥಳೀಯ ಬಲಿಜ ಮುಖಂಡರು ಹೇಳಿದ್ದಾರೆ.
Gudibande – ಬಲಿಜ ಸಮುದಾಯದ ವಾದ ಏನು?
ಬಲಿಜ ಸಮುದಾಯದ ವತಿಯಿಂದ ಶಾಸಕರು, ತಹಸೀಲ್ದಾರ್ ರವರು ಹಾಗೂ ಪಟ್ಟಣ ಪಂಚಾಯತಿ ಅಧ್ಯಕ್ಷರಿಗೆ ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಮನವಿ ನೀಡಿದ್ದೆವು. ಅದರಂತೆ ಅವರು ನಮಗೆ ಭರವಸೆ ನೀಡಿದ್ದರು. ಜೊತೆಗೆ ಪುತ್ಥಳಿ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗ ನಮ್ಮ ಸಮುದಾಯದವರಿಗೆ ಸೇರಿದೆ. ಅದರಂತೆ ಎಲ್ಲರ ಒಪ್ಪಿಗೆಯ ಮೇರೆಗೆ ಪುತ್ಥಳಿ ನಿರ್ಮಾಣಕ್ಕೆ ಏ.30 ರಂದು ಭೂಮಿ ಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸದರಿ ಜಾಗದ ದಾಖಲೆ ನಮ್ಮ ಸಮುದಾಯದವರಿಗೆ ಸೇರಿದ್ದು, ನಾವು ಕಾನೂನಿನಂತೆ ಭೂಮಿ ಪೂಜೆ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ನಾವು ಎಲ್ಲಾ ಸಮುದಾಯದವರನ್ನೂ ಸೇರಿಸಿಕೊಂಡು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವು. ಆದರೆ ಏಕಾಏಕಿ ಕಾರ್ಯಕ್ರಮ ನಡೆಯಬೇಕಿದ್ದ ಹಿಂದಿನ ದಿನದ ರಾತ್ರಿ ಅಧಿಕಾರಿಗಳು ಕರೆ ಮಾಡಿ ಕಾರ್ಯಕ್ರಮ ಮುಂದೂಡಿ ಎಂದು ಒತ್ತಾಯ ಮಾಡಿದ್ದರು. ನಮ್ಮ ಸಮುದಾಯದವರಿಗೆ ಸೇರಿದ ಮೂಲ ಜಾಗದಲ್ಲಿ ಪುತ್ಥಳಿ ನಿರ್ಮಾಣ ಮಾಡುತ್ತಿದ್ದೇವೆ ವಿನಃ ಸರ್ಕಾರದ ಜಾಗದಲ್ಲಿ ಅಲ್ಲ. ಎಲ್ಲಾ ಸಮುದಾಯಗಳಿಗೂ ಸೇರಿದ ಕೈವಾರ ತಾತಯ್ಯನವರ ಪುತ್ಥಳಿ ನಿರ್ಮಾಣಕ್ಕೆ ಯಾರೂ ಅಡ್ಡಿ ಮಾಡಬಾರದು. ಸದ್ಯ ಏನು ಅನ್ಯ ಸಮುದಾಯದವರು ಇಂದು ಗಲಾಟೆ ಮಾಡುತ್ತಿದ್ದಾರೆ ಇದು ಸರಿಯಲ್ಲ. ಈ ರೀತಿಯ ತೊಂದರೆ ನಮಗೆ ಕೊಟ್ಟರೇ ಮುಂದಿನ ದಿನಗಳಲ್ಲಿ ನಾವೂ ಸಹ ಅದೇ ರೀತಿಯಾಗಿ ನಡೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
Gudibande – ವಕ್ಕಲಿಗ ಸಮುದಾಯದ ಒತ್ತಾಯವೇನು?
ಇನ್ನೂ ಗುಡಿಬಂಡೆಯಲ್ಲಿ ಹಾವಳಿ ಬೈರೇಗೌಡ ರವರ ಪುತ್ಥಳಿ ನಿರ್ಮಾಣ ಮಾಡಲು ಸುಮಾರು ತಿಂಗಳುಗಳ ಹಿಂದೆಯೇ ನಾವೂ ಸಹ ಮನವಿ ಸಲ್ಲಿಸಿದ್ದೇವು. ಗುಡಿಬಂಡೆಯ ಕೆರೆ, ಬೆಟ್ಟ ಕಟ್ಟಿಸಿದಂತಹ ಹಾವಳಿ ಬೈರೇಗೌಡರ ಪುತ್ಥಳಿ ನಿರ್ಮಾಣ ಮಾಡಿದರೇ ಅದೊಂದು ಸ್ಮಾರಕವಾಗುತ್ತದೆ. ನಾವು ಯಾವುದೇ ಪುತ್ಥಳಿ ನಿರ್ಮಾಣಕ್ಕೆ ವಿರೋಧ ಮಾಡಲ್ಲ. ಇದೀಗ ಕೈವಾರ ತಾತಯ್ಯನವರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಕಾನೂನಿನಂತೆ ಅವರಿಗೆ ಆ ಜಾಗದಲ್ಲಿ ಪುತ್ಥಳಿ ನಿರ್ಮಾಣ ಮಾಡಲು ಅನುಮತಿ ನೀಡಿಲ್ಲ. ಅದು ಸರ್ಕಾರಕ್ಕೆ ಸೇರಿದ ಬಿ ಕರಾಬ್ ಜಾಗವಾಗಿದೆ. ಈ ಹಿಂದೆ ಅದೇ ಜಾಗಕ್ಕೆ ಸಂಬಂಧಿಸಿದಂತೆ ಕೆಲವೊಂದು ಗಲಾಟೆಗಳೂ ಸಹ ನಡೆದಿದೆ. ಇದೀಗ ಏಕಾಏಕಿ ಸಮುದಾಯದವರು ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಅಧಿಕಾರಿಗಳು ಕೂಡಲೇ ಆ ಜಾಗವನ್ನು ವಶಕ್ಕೆ ತೆಗೆದುಕೊಂಡು ಸೂಕ್ತ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು. Read this also : ಅಮುಲ್ನ ಹೊಸ ಪ್ರೋಟೀನ್ ಮ್ಯಾಂಗೋ ಕುಲ್ಫಿ: ಆರೋಗ್ಯಕರ ಡೆಸರ್ಟ್ನ ಸಂಪೂರ್ಣ ವಿವರ…!
Gudibande – ಬೆಳಿಗಿನಿಂದಲೇ ಬೀಡು ಬಿಟ್ಟ ಪೊಲೀಸರು
ಇನ್ನೂ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆಯುವ ಸಾಧ್ಯತೆಯ ಕುರಿತು ಮೊದಲೇ ಮಾಹಿತಿ ಪಡೆದುಕೊಂಡ ಪೊಲೀಸರು ಏ.30ರ ಬೆಳಿಗಿನಿಂದಲೇ ಸ್ಥಳದಲ್ಲಿ ಬೀಡು ಬಿಟ್ಟಿದ್ದರು. ಯಾವುದೇ ಅನಾಹುತಗಳು ನಡೆಯದಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಮೊದಲಿಗೆ ತಹಸೀಲ್ದಾರ್ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಸೇರಿದಂತೆ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸವನ್ನೇ ಪಡಬೇಕಾಯಿತು. ಕೆಲ ಸಮಯ ಬಿಗುವಿನ ವಾತಾವರಣ ಸಹ ನಿರ್ಮಾಣವಾಗಿದ್ದು, ಬಹುಶಃ ಗುಡಿಬಂಡೆಯ ಇತಿಹಾಸದಲ್ಲಿ ಎರಡು ಸಮುದಾಯಗಳ ನಡುವೆ ಈ ಮಟ್ಟಿಗೆ ವಾಗ್ವಾದ ನಡೆದಿದ್ದು, ಇದೇ ಮೊದಲು ಎಂದು ಹೇಳಲಾಗುತ್ತಿದೆ.
Gudibande – ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ಭೇಟಿ, ಅವರು ಹೇಳಿದ್ದಿಷ್ಟು.
ಗುಡಿಬಂಡೆ ಪಟ್ಟಣದಲ್ಲಿ ಪುತ್ಥಳಿ ನಿರ್ಮಾಣಕ್ಕೆ ಸಂಬಧಿಸಿದಂತೆ ಎರಡು ಸಮುದಾಯದವರ ನಡುವೆ ವಾಗ್ವಾದ ಉಂಟಾಗಿತ್ತು. ಈ ಕುರಿತು ನನ್ನ ಗಮನಕ್ಕೆ ಬಂದಿದ್ದು, ನಾನು ಸ್ಥಳಕ್ಕೆ ಭೇಟಿ ನೀಡಿ ಎರಡೂ ಸಮುದಾಯದವರ ಜೊತೆ ಮಾತನಾಡಿದ್ದೇನೆ. ಒಂದು ಸಮುದಾಯ ಜಾಗದ ಒಳಗೆ ಗುದ್ದಲಿ ಪೂಜೆ ನಡೆಸಲು ಹೋಗಿದ್ದರೇ, ಮತ್ತೊಂದು ಸಮುದಾಯ ಹೊರಗೆ ಗಲಾಟೆ ಮಾಡಿದ್ದರು. ಎರಡೂ ಸಮುದಾಯಗಳ ಮುಖಂಡರನ್ನು ಮಾತನಾಡಿದ್ದು, ಅವರಿಗೆ ಕಾನೂನು ಬಾಹಿರವಾಗಿ ಏನೂ ಕೆಲಸ ಮಾಡದಂತೆ ಸೂಚನೆ ನೀಡಿದ್ದೇವೆ. ಎಲ್ಲರೂ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಶೀಘ್ರವಾಗಿ ಎರಡೂ ಸಮುದಾಯಗಳ ಮುಖಂಡರನ್ನು ಕರೆಸಿ ಸಭೆ ನಡೆಸಿ ಕಾನೂನಿನಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲ್ಲಿಯವರೆಗೂ ವಿವಾದಿತ ಜಾಗದಲ್ಲಿ ಯಾರೂ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದ್ದು, ಎಲ್ಲರೂ ಜಾಗದಿಂದ ಹೊರಟಿದ್ದಾರೆ ಎಂದರು.