Crime News – ನಮ್ಮ ಕರ್ನಾಟಕದ ಪಕ್ಕದ ಕೇರಳ ಗಡಿಭಾಗದಲ್ಲಿ, ಕಾಸರಗೋಡಿನ ವರ್ಕಾಡಿ ಎಂಬಲ್ಲಿ ನಡೆದಿರುವ ಘಟನೆಯೊಂದು, ಅಮ್ಮ-ಮಗನ ಸಂಬಂಧದ ಪವಿತ್ರತೆಯನ್ನೇ ಪ್ರಶ್ನಿಸುವಂತಿದೆ. ತನ್ನನ್ನು ಹೆತ್ತು, ಹೊತ್ತು, ಸಾಕಿ ಬೆಳೆಸಿದ ತಾಯಿಯನ್ನೇ ಮಗನೊಬ್ಬ ಬರ್ಬರವಾಗಿ ಕೊಲೆ ಮಾಡಿ, ನಂತರ ಶವಕ್ಕೆ ಬೆಂಕಿ ಹಚ್ಚಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಇದನ್ನು ಪ್ರಶ್ನಿಸಲು ಬಂದ ನೆರೆಮನೆಯವರಿಗೂ ಬೆಂಕಿ ಹಚ್ಚಿ ಪರಾರಿಯಾಗಿದ್ದ ಆ ಪಾಪಿ, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
Crime News – ಹೃದಯವಿದ್ರಾವಕ ಕೃತ್ಯ
ಕಾಸರಗೋಡಿನ ವರ್ಕಾಡಿಯಲ್ಲಿ 59 ವರ್ಷದ ಹಿಲ್ಡಾ ಮೊಂತೇರೊ ಎಂಬ ಮಹಿಳೆ, ತನ್ನ 26 ವರ್ಷದ ಮಗ ಮೆಲ್ವಿನ್ ಮೊಂತೆರೋ ಜೊತೆ ವಾಸವಾಗಿದ್ದರು. ಘಟನೆ ನಡೆದ ರಾತ್ರಿ, ತಾಯಿ ಹಿಲ್ಡಾ ಊಟ ಮಾಡಿ ನೆಮ್ಮದಿಯಾಗಿ ಮಲಗಿದ್ದರು. ಆದರೆ, ಮುಂಜಾನೆ, ಮಗ ಮೆಲ್ವಿನ್ ತಾಯಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಾನೆ. ಈ ಕೃತ್ಯ ನಡೆದಿದ್ದು ಹೇಗೆ ಎಂಬುದು ಇನ್ನೂ ಸಂಪೂರ್ಣವಾಗಿ ತಿಳಿದುಬಂದಿಲ್ಲ, ಆದರೆ ನಿದ್ರೆಯಲ್ಲಿದ್ದ ತಾಯಿಗೆ ಮಗನೇ ಮರಣದಂಡನೆ ವಿಧಿಸಿರುವುದು ನಿಜಕ್ಕೂ ದುರಂತ.
Crime News – ಸಾವಿನ ನಂತರವೂ ಕ್ರೌರ್ಯ: ತಾಯಿಯ ಶವಕ್ಕೆ ಬೆಂಕಿ ಹಚ್ಚಿದ ಮಗ!
ತಾಯಿಯ ಹತ್ಯೆ ಮಾಡಿದ ನಂತರವೂ ಮೆಲ್ವಿನ್ ಕ್ರೌರ್ಯ ನಿಂತಿರಲಿಲ್ಲ. ಆತ ತಾಯಿಯ ಮೃತದೇಹವನ್ನು ಮನೆಯ ಹಿಂಭಾಗಕ್ಕೆ ಎಳೆದುಕೊಂಡು ಹೋಗಿ, ಅಲ್ಲಿ ಬೆಂಕಿ ಹಚ್ಚಿದ್ದಾನೆ. ಈ ದುಷ್ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಆತ ಹೀಗೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಮನೆಯ ಹಿಂಭಾಗದಲ್ಲಿ ಹೊಗೆ ಬರುತ್ತಿರುವುದನ್ನು ಕಂಡ ನೆರೆಮನೆಯವರು, ಏನೋ ಅನಾಹುತ ನಡೆದಿದೆ ಎಂದು ಅರಿತು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಆಕ್ರೋಶಗೊಂಡ ಪಾಪಿ ಮೆಲ್ವಿನ್, ಅವರ ಮೇಲೂ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಈ ವೇಳೆ 30 ವರ್ಷದ ಲೋಲಿಟಾ ಎಂಬ ಮಹಿಳೆಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Crime News – ಮಾದಕ ವ್ಯಸನವೇ ಹತ್ಯೆಗೆ ಕಾರಣವೇ?
ಘಟನೆ ನಡೆದ ಬಳಿಕ ಆರೋಪಿ ಮೆಲ್ವಿನ್ ಮೊಂತೆರೋ ಸ್ಥಳದಿಂದ ಪರಾರಿಯಾಗಿದ್ದ. ಪೊಲೀಸರು ತಕ್ಷಣವೇ ದೂರು ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಮೂಲಗಳ ಪ್ರಕಾರ, ಮೆಲ್ವಿನ್ ಮೊಂತೆರೋ ಮಾದಕ ವ್ಯಸನಿಯಾಗಿದ್ದ ಎನ್ನಲಾಗಿದ್ದು, ಇದೇ ಕಾರಣಕ್ಕೆ ಆತ ತನ್ನ ತಾಯಿಯನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮಾದಕ ವ್ಯಸನಗಳು ಹೇಗೆ ಅಮೂಲ್ಯ ಸಂಬಂಧಗಳನ್ನು ಹಾಳುಮಾಡುತ್ತವೆ ಎಂಬುದಕ್ಕೆ ಇದೊಂದು ಭಯಾನಕ ಉದಾಹರಣೆ.
Read this also : ತೆಲಂಗಾಣದಲ್ಲಿ ನಡೆದ ಘಟನೆ, ಪ್ರೇಮ ವಿರೋಧಿಸಿದ್ದಕ್ಕೆ ತಾಯಿಯನ್ನೇ ಕೊಂದ 10ನೇ ಕ್ಲಾಸ್ ವಿದ್ಯಾರ್ಥಿನಿ…!
Crime News – ಹೇಗೆ ಸಿಕ್ಕಿಬಿದ್ದ ಆ ಪಾಪಿ ಪುತ್ರ?
ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ ಮೆಲ್ವಿನ್ ಗಾಗಿ ಪೊಲೀಸರು ಹಲವು ದಿನಗಳಿಂದ ಹುಡುಕಾಟ ನಡೆಸಿದ್ದರು. ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಆತ ಅಡಗಿದ್ದಾನೆಂಬ ಖಚಿತ ಮಾಹಿತಿ ಸಿಕ್ಕ ನಂತರ, ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಇದೀಗ ಪೊಲೀಸರು ಆತನನ್ನು ಹೆಚ್ಚಿನ ವಿಚಾರಣೆಗಾಗಿ ಕರೆದೊಯ್ದಿದ್ದು, ಈ ಕೃತ್ಯದ ಹಿಂದಿನ ಸಂಪೂರ್ಣ ಸತ್ಯ ಹೊರಬರಬೇಕಿದೆ.