Politics – ಕರ್ನಾಟಕ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿಯಷ್ಟೆ, ಸಂಪುಟ ವಿಸ್ತರಣೆಯ ಕುರಿತಂತೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
Politics – ಸಚಿವ ಸಂಪುಟ ವಿಸ್ತರಣೆ ಎಲ್ಲಾ ಮಾದ್ಯಮಗಳ ಸೃಷ್ಟಿ
ಈ ವೇಳೆ ಸುದ್ದಿಗಾರರು ಸ್ಥಳೀಯ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರಿಗೆ ಈ ಬಾರಿ ಸಚಿವ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವರು, ಸದ್ಯ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆದಿಲ್ಲ. ಸಚಿವ ಸಂಪುಟ ವಿಸ್ತರಣೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿಯಷ್ಟೆ. ಮುಂದಿನ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ಅಂದು ಶಾಸಕ ಸುಬ್ಬಾರೆಡ್ಡಿಯವರಿಗೆ ಸಚಿವ ಸ್ಥಾನ ಸಿಗುತ್ತದೆ, ಸಿಗಬೇಕೆಂಬ ಬಯಕೆ ಸಹ ನಮಗಿದೆ. ಇದೇ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಯ ಕುರಿತು ಮಾತನಾಡಿ, ದೆಹಲಿಯಲ್ಲಿ ಏನು ಆಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿಯಿಲ್ಲ. ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ತಲೆಬಾಗುತ್ತೇವೆ ಎಂದರು.
Politics – ವಸ್ತು ಸ್ಥಿತಿ ಅರಿತು ಮಾತನಾಡಬೇಕು ಎಂದ ಸಚಿವ ಸುಧಾಕರ್
ಇನ್ನೂ ಕೈ ಶಾಸಕರ ಹೆಸರೇಳಿ ಆತ್ಮಹತ್ಯೆಗೆ ಶರಣಾದ ವಿನಯ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ರಾಜಕಾರಣದಲ್ಲಿ ಪರ ಹಾಗೂ ವಿರೋಧ ಇದ್ದೇ ಇರುತ್ತದೆ. ಶಾಸಕರ ಚಿತ್ರವನ್ನು ಹಾಕಿ ಕೊಲೆಗಡುಕ ಎಂದು ಪೋಸ್ಟರ್ ಹಾಕಿದ್ದರು. ಈ ಸಂಬಂಧ ಯಾರೋ ಖಾಸಗಿ ವ್ಯಕ್ತಿಗಳು ದೂರು ದಾಖಲಿಸಿದ್ದರು. ಇದರಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡು ಶಾಸಕರ ಹೆಸರು ಬರೆದರೇ ಯಾರು ಹೊಣೆಯಾಗುತ್ತಾರೆ. ವೈಯುಕ್ತಿಕವಾಗಿ ನಿಂದನೆ ಮಾಡುವುದು ಸರಿಯಲ್ಲ. ಈ ರೀತಿಯಾಗಿ ವೈಯುಕ್ತಿಕ ನಿಂದನೆ ಮಾಡಿದರೇ ಅವರ ಅನುಯಾಯಿಗಳು ದೂರು ನೀಡುತ್ತಾರೆ. ಪ್ರಕರಣ ದಾಖಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನಾನು ಸಹ ಕೆಟ್ಟದಾಗಿ ಮಾತನಾಡಲು ಸಾಧ್ಯವೇ, ಬಿಜೆಪಿಯವರು ವಸ್ತುಸ್ಥಿತಿಯನ್ನು ಅರಿತುಕೊಳ್ಳಬೇಕು. ಈ ಪ್ರಕರಣದಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.
Read this also : ಹೊಸ ವರ್ಷಕ್ಕೆ ರಾಜ್ಯ ಸಂಪುಟ ಪುನಾರಚನೆ ಫಿಕ್ಸಾ? ಪರೋಕ್ಷವಾಗಿ ಸುಳಿವು ಕೊಟ್ರಾ ಸಿಎಂ ಸಿದ್ದು….!
Politics – ಗುಡಿಬಂಡೆ ಪ್ರವಾಸೋದ್ಯಮ ಅಭಿವೃದ್ದಿಯ ಕುರಿತು
ಇನ್ನೂ ಗುಡಿಬಂಡೆಯನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ದಿ ಮಾಡಲು ಇಲ್ಲಿನ ಜನರ ಬೇಡಿಕೆ ಹಾಗೂ ಶಾಸಕರ ಒತ್ತಾಯವೂ ಸಹ ಇದೆ. ರೋಪ್ ವೇ, ಅಮಾನಿ ಬೈರಸಾಗರ ಕೆರೆಯಲ್ಲಿ ಬೋಟಿಂಗ್ ಸೇರಿದಂತೆ ಹಲವು ಕಾಮಗಾರಿಗಳು ನಡೆಯಬೇಕಿದೆ. ಅದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು, ಸಚಿವರ ಜೊತೆಗೆ ಸಭೆ ಮಾಡಲಾಗುತ್ತದೆ. ಟ್ರಕ್ಕಿಂಗ್ ಸಹ ಹೆಚ್ಚಾಗುತ್ತಿದ್ದು, ಇದಕ್ಕೆ ಪೂರಕವಾದ ರೀತಿಯಲ್ಲಿ ಯಾವ ರೀತಿಯ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂಬ ಎಲ್ಲಾ ವಿಚಾರಗಳನ್ನು ಪರಿಶೀಲನೆ ನಡೆಸಿ ಆದಷ್ಟು ಶೀಘ್ರವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.