Sunday, June 29, 2025
HomeStateರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು

ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲ್ಲೂಕು ಚಿಕ್ಕ ತಾಲ್ಲೂಕಾದರೂ ಐತಿಹಾಸಿಕ, ಸಾಂಸ್ಕೃತಿಕ, ಪ್ರವಾಸೋದ್ಯಮಕ್ಕೆ ಗುಡಿಬಂಡೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಚಲನಚಿತ್ರಗಳು, ಧಾರವಾಹಿಗಳು ಈ ಭಾಗದಲ್ಲಿಯೇ ಚಿತ್ರೀಕರಣಗೊಂಡಿದ್ದು, ಶೂಟಿಂಗ್ ನಡೆಸಲು ಉತ್ತಮವಾದ ಸ್ಥಳಗಳಿವೆ.

Gudibande 3

ಚಿಕ್ಕಬಳ್ಳಾಪುರ ಗುಡಿಬಂಡೆ ತಾಲ್ಲೂಕಿನ ಸುತ್ತಮುತ್ತಲಿನಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಐತಿಹಾಸಿಕ ಹಿನ್ನೆಲೆಯುಳ್ಳ 7 ಸುತ್ತಿನ ಕೋಟೆಯಿಂದ ಆವೃತವಾಗಿರುವ ಸುರಸದ್ಮಗಿರಿ ಬೆಟ್ಟ. ಹಿಂದಿನ ಕಾಲದಲ್ಲಿಯೇ ಭಾರತ ಭೂಪಟವನ್ನು ಹೋಲುವಂತೆ ನಿರ್ಮಿಸಿರುವ ಅಮಾನಿ ಬೈರಸಾಗರ ಕೆರೆ, ಅತ್ಯಂತ ಪುರಾತನ ಜೈನ ಬಸದಿಗಳು, ಪಟ್ಟಣಕ್ಕೆ ಸಮೀಪದಲ್ಲಿಯೇ ನವಿಲು ಜಿಂಕೆಗಳ ವನ ಜೊತೆಗೆ ಪಕ್ಕದ ತಾಲ್ಲೂಕಿನ ವಾಟದಹೊಸಹಳ್ಳಿ ಕೆರೆ (ಇತ್ತಿಚಿಗೆ ಪ್ರಸಿದ್ದವಾಗಿದೆ), ಚಿಕ್ಕಬಳ್ಳಾಪುರದ ಆವುಲ ಬೆಟ್ಟ ಹೀಗೆ ಅನೇಕ ಸ್ಥಳಗಳು ಪ್ರಾಕೃತಿಕ ಸೊಬಗನ್ನು ಹೊಂದಿದ್ದು, ಚಲನಚಿತ್ರ, ಧಾರವಾಹಿ, ಕಿರುಚಿತ್ರಗಳ ಚಿತ್ರೀಕರಣಕ್ಕೆ ಸೂಕ್ತವಾಗಿದೆ ಎನ್ನಬಹುದು.

ವಾರಾಂತ್ಯಕ್ಕೆ ಪ್ರವಾಸಿಗರ ದಂಡು: ಇನ್ನೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯ ಜನತೆ ಈ ಪ್ರದೇಶಗಳನ್ನು ವೀಕ್ಷಿಸಲು ಬರುತ್ತಿರುವುದು ಸಾಮಾನ್ಯವಾಗಿದೆ. ತನ್ನದೇ ಆದ ಪ್ರಾಕೃತಿಕ ಸೊಬಗು ಹೊಂದಿರುವ ಗುಡಿಬಂಡೆಯ ಸುತ್ತಮುತ್ತಲಿನ ಪರಿಸರದ ಸೌಂದರ್ಯ ಇಡೀ ರಾಜ್ಯದ ಜನರನ್ನು ಸೆಳೆಯುತ್ತಿದೆ ಎನ್ನಲಾಗುತ್ತಿದೆ.

Gudibande 1

ಭವ್ಯ ಸ್ವಾಗತ ಕೋರುವ ಬೈರಸಾಗರ ಕೆರೆ: ಇನ್ನೂ ಗುಡಿಬಂಡೆಗೆ ಆಗಮಿಸುತ್ತಿದ್ದಂತೆ ಪ್ರಯಾಣಿಕರಿಗೆ ಆಹ್ವಾನ ನೀಡುವಂತೆ ಕಾಣಿಸುವುದು ಅಮಾನಿ ಬೈರಸಾಗರ ಕೆರೆ. ಕೆರೆಯ ಏರಿ ಮೇಲೆ ಪ್ರಯಾಣಿಸುವುದೇ ಒಂದು ರೀತಿಯ ವಿಭಿನ್ನ ಅನುಭವ. ಜೊತೆಗೆ ಕೆರೆಯು ಪ್ರಸ್ತುತ ತುಂಬಿ ಕೋಡಿ ಹರಿಯುವ ಹಂತದಲ್ಲಿದ್ದು, ಇನ್ನೂ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದೆ ಕೆರೆಯ ಬಳಿಯೇ ಸ್ಯಾಂಡಲ್‌ವುಡ್‌ನಲ್ಲಿ ಹಿಟ್ ಹೊಡೆದ ಮೋನಾಲಿಸಾ ಚಿತ್ರದ ಓ ಪ್ರಿಯತಮೆ ಇದು ನ್ಯಾಯಾನಾ ಎಂಬ ಗೀತೆಯ ಚಿತ್ರೀಕರಣ ಸಹ ನಡೆದಿದೆ. ಇದರ ಜೊತೆಗೆ ದಳಪತಿ ಚಲನಚಿತ್ರ ಹಾಗೂ ರಾಮಾಚಾರಿ ಕನ್ನಡದ ಧಾರವಾಹಿಗಳನ್ನು ಸಹ ಈ ಭಾಗದಲ್ಲಿ ಚಿತ್ರಿಕರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.

ಚಾರಣಿಗರಿಗಾಗಿ ಸುರಸದ್ಮಗಿರಿ ಕೋಟೆ: ನಂತರ ಪಟ್ಟಣದ ವ್ಯಾಪ್ತಿಯಲ್ಲಿಯೇ ಕಾಣಸಿಗುವುದು ಸುರಸದ್ಮಗಿರಿ ಬೆಟ್ಟ. ಈ ಬೆಟ್ಟಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ರಾಜ್ಯದ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟಗಳಲ್ಲಿ ಪೈಕಿ ಇದು ಸಹ ಒಂದಾಗಿದೆ. ಈ ಭಾಗವನ್ನು ಆಳ್ವಿಕೆ ನಡೆಸುತ್ತಿದ್ದ ಹಾವಳಿ ಬೈರಗೌಡ ಬೆಟ್ಟದ ಸುತ್ತಲೂ ರಕ್ಷಣೆಗಾಗಿ 7 ಸುತ್ತಿನ ಕೋಟೆಯನ್ನು ನಿರ್ಮಿಸಿದ್ದಾನೆ. ಜೊತೆಗೆ ಬೆಟ್ಟದ ಮೇಲ್ಭಾಗದಿಂದ ಸುಂದರವಾದ ಪರಿಸರದ ಸೊಬಗನ್ನು ಕಾಣಬಹುದಾಗಿದೆ. ರಾಮಾಯಣದ ಪ್ರಕಾರ ರಾಮ ಲಕ್ಷ್ಮಣರು ವನವಾಸದ ಸಮಯದಲ್ಲಿ ೧೦೮ ಜೋರ್ತಿಲಿಂಗಗಳ ಪೈಕಿ ಇಲ್ಲಿಯೂ ಸಹ ರಾಮೇಶ್ವರ ಲಿಂಗವನ್ನು ಪ್ರತಿಷ್ಟಾಪಿಸಿದ್ದಾರೆ ಎಂಬ ಖ್ಯಾತಿಯೂ ಸಹ ಇದೆ. ಆದರೆ ಸ್ಥಳೀಯ ಆಡಳಿತ ಈ ಬೆಟ್ಟದಲ್ಲಿ ವಾಹನ ನಿಲುಗಡೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೇ ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ ನಿಗಧಿತ ಶುಲ್ಕ ವಿಧಿಸುವುದರಿಂದ ಸರ್ಕಾರಕ್ಕೂ ಆದಾಯ ಬರಲಿದೆ.

Gudibande 2

ಒಟ್ಟಿನಲ್ಲಿ ಹೇಳುವುದದರೇ, ವ್ಯಾಪ್ತಿ ಚಿಕ್ಕದಾದರೂ ಇದರ ವಿಶಾಲತೆ ಹೆಚ್ಚು ಎಂಬಂತೆ ರಾಜ್ಯದಲ್ಲಿಯೇ ಅತ್ಯಂತ ಚಿಕ್ಕ ತಾಲ್ಲೂಕುಗಳಲ್ಲಿ ಒಂದಾದ ಗುಡಿಬಂಡೆಯನ್ನು ರಾಜ ಮಹಾರಾಜರು ಸೇರಿದಂತೆ ಪಾಳೇಗಾರರು ಆಳಿದ್ದ ಐತಿಹಾಸಿಕ ಪ್ರದೇಶವಾಗಿದೆ. ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಗುಡಿಬಂಡೆಗೆ ಭೇಟಿ ನೀಡುವ ಪ್ರವಾಸಿಗರು ಪುನಃ ಪುನಃ ಭೇಟಿ ನೀಡಬೇಕೆನ್ನುತ್ತಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular