Micro Finance – ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ಹೆಚ್ಚಾಗಿದ್ದು, ಅದರಿಂದ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಮೈಕ್ರೋಫೈನಾನ್ಸ್ ಕಂಪನಿಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ತಾಲೂಕು ಜನವಾದಿ ಮಹಿಳಾ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಳಿಕ ಗ್ರೇಡ್-2 ತಹಸೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಕಾರ್ಯದರ್ಶಿ ಭಾಗ್ಯಮ್ಮ ಮಾತನಾಡಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಜನಸಾಮಾನ್ಯರು, ಬಡವರು, ಕೂಲಿಕಾರ್ಮಿಕರಿಗೆ ಕಿರುಕುಳ ನೀಡಿ ಬಲವಂತವಾಗಿ ಸಾಲ ವಸೂಲಾತಿ ಮಾಡುತ್ತಿದ್ದಾರೆ. ಇದರಿಂದ ಕಿರುಕುಳಕ್ಕೆ ಒಳಗಾದವರು ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದು, ಅವರನ್ನೆ ನಂಬಿರುವ ಕುಟುಂಬಸ್ಥರು ಬೀದಿ ಪಾಲಾಗುತ್ತಿದ್ದಾರೆ. ರೈತರು, ಕೃಷಿ ಕೂಲಿಕಾರ್ಮಿಕರು, ಮಹಿಳೆಯರು ಸೇರಿ ಅಸಂಘಟಿತ ಕಾರ್ಮಿಕರು ಋಣ ಮುಕ್ತಿಗಾಗಿ ತಾಲೂಕು ಮಟ್ಟದಲ್ಲಿ ಋಣ ಮುಕ್ತಿ ಆಯೋಗವನ್ನು ಅಸ್ತ್ಥಿತ್ವಕ್ಕೆ ತಂದು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲವನ್ನು ಅದರ ವ್ಯಾಪ್ತಿಗೆ ಒಳಪಡಿಸಬೇಕು. ಸ್ವ-ಸಹಾಯ ಗುಂಪುಗಳ ಸ್ವರೂಪವನ್ನು ಮೊದಲಿನಂತೆ ರಕ್ಷಿಸಿಕೊಂಡು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಜಿಲ್ಲಾ ಸಹಕಾರಿ ಬ್ಯಾಂಕುಗಳ ಬಲವರ್ಧನೆ ಮಾಡಬೇಕು, ಇಲ್ಲವಾದಲ್ಲಿ ರಾಜ್ಯದಲ್ಲಿ ಕಿರುಕುಳಕ್ಕೋಳಗಾದವರ ಸಾವಿನ ಸಂಖ್ಯೆ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಈ ಮೈಕ್ರೋಫೈನಾನ್ಸ್ ಕಂಪನಿಗಳ ಹಾವಳಿ ನಿಯಂತ್ರಣ ಮಾಡಬೇಕೆಂದರು.
ನಂತರ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆಕ್ರಮವಾಗಿ ಅನೇಕ ಕಿರು ಸಾಲಗಾರರು ಸಂಸ್ಥೆಗಳನ್ನು ಪ್ರಾರಂಭಿಸಿ ಬಡ ಕೂಲಿ ಕಾರ್ಮಿಕರಿಗೆ ಸಾಲ ನೀಡಿ ಮತ್ತೆ ವಸೂಲಿಗಾಗಿ ಪೀಡಿಸುತ್ತಿದ್ದಾರೆ. ಇದಕ್ಕೆ ಇತ್ತಿಚಿಗೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ಉದಾಹರಣೆ ಎನ್ನಬಹುದಾಗಿದೆ. ಆದ್ದರಿಂದ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ನಬಾರ್ಡ್, ಆರ್.ಬಿ.ಐ ನಿಯಂತ್ರಣದಲ್ಲೆ ಒಳಪಡಿಸಬೇಕು, ಆರ್.ಬಿ.ಐ ನಿಯಮಗಳನ್ವಯ ಬಡವರಿಗೆ ಯಾವುದೇ ದಾಖಲೆ ಪಡೆಯದೇ ಒಂದು ಲಕ್ಷದ ವರೆಗೆ ಸಾಲ ನೀಡಬೇಕು, ಬಲವಂತವಾಗಿ ಸಾಲ ವಸೂಲಾತಿ ಕ್ರಮಗಳಿಗೆ ಕನಿಷ್ಟ 6 ತಿಂಗಳು ಕಡಿಮೆ ಇಲ್ಲದಂತಹ ಶಿಕ್ಷೆ ಮತ್ತು ಕನಿಷ್ಟ 10 ಸಾವಿರರೂನಿಂದ 10 ಲಕ್ಷದ ವರೆಗೆ ದಂಡ ವಿಧಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಪ್ರತಿಭಟನೆಯಲ್ಲಿ ಅಖಿಲ ಭಾರತಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಭಾಗ್ಯಮ್ಮ, ತಾಲೂಕು ಸಿಐಟಿಯು ಕಾರ್ಯದರ್ಶಿ ಮಂಜುಳಾ, ತಾಲೂಕು ಸಮಿತಿ ಸದಸ್ಯರಾದ ಶೋಭಾ, ಅಳವೇಳಮ್ಮ, ಆಯಿಷಾ, ಗೀತಾ ತಾಲೂಕು ಸಿಪಿಎಂ ಮುಖಂಡರಾದ ವೆಂಕಟರಾಜು, ಚನ್ನರಾಯಪ್ಪ, ವೆಂಕಟರಮಣ, ಮುನಿ ವೆಂಕಟಪ್ಪ, ಶ್ರೀನಿವಾಸ ಸೇರಿದಂತೆ ಸೇರಿದಂತೆ ಹಲವರು ಇದ್ದರು.