Marriage Fraud – ಮದುವೆಯಾಗದ, ವಯಸ್ಸು ಹೆಚ್ಚುತ್ತಿರುವ ಯುವಕರನ್ನೇ ಟಾರ್ಗೆಟ್ ಮಾಡಿ, ಅವರನ್ನು ಮದುವೆಯಾಗಿ ಆಭರಣ, ನಗದು, ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ಪರಾರಿಯಾಗುತ್ತಿದ್ದ ಮಹಿಳೆಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಸವಾಯಿ ಮಾಧೋಪುರ ಪೊಲೀಸರು ಸೋಮವಾರ ಈ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆಕೆ ಕೇವಲ 7 ತಿಂಗಳ ಅವಧಿಯಲ್ಲಿ 25 ಯುವಕರನ್ನು ಮದುವೆಯಾಗಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಆದರೆ, ಈ ವಂಚನೆಯ ಹಿಂದೆ ಆ ಮಹಿಳೆ ಒಬ್ಬಳೇ ಇಲ್ಲ, ಒಂದು ದೊಡ್ಡ ಗ್ಯಾಂಗ್ ಇದೆ. ಪೊಲೀಸರು ಈಗ ಆ ಗ್ಯಾಂಗ್ ಅನ್ನು ಹುಡುಕುತ್ತಿದ್ದಾರೆ..
Marriage Fraud – ವಂಚಕಿಯ ಹಿನ್ನೆಲೆ ಮತ್ತು ಮೋಸದ ಜಾಲ
ಉತ್ತರ ಪ್ರದೇಶದ ಮಹಾರಾಜ್ಗಂಜ್ ಮೂಲದ 23 ವರ್ಷದ ಅನುರಾಧ ಪಾಸ್ವಾನ್ ಈ ವಂಚಕಿ. ಈಕೆ ಹಿಂದೆ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಗಂಡನೊಂದಿಗೆ ಜಗಳವಾಗಿ ವಿಚ್ಛೇದನ ಪಡೆದ ನಂತರ, ಅನುರಾಧ ಮಧ್ಯಪ್ರದೇಶಕ್ಕೆ ಸ್ಥಳಾಂತರಗೊಂಡಳು. ಭೋಪಾಲ್ನಲ್ಲಿ ವಾಸವಾಗಿದ್ದಾಗ, ಈಕೆ ಮದುವೆ ವಂಚನೆ ಜಾಲಕ್ಕೆ ಸೇರಿಕೊಂಡಳು. ಮದುವೆಗಾಗಿ ಆತುರದಿಂದ ಕಾಯುತ್ತಿರುವ ಯುವಕರನ್ನು ಈ ಗ್ಯಾಂಗ್ನ ಸದಸ್ಯರು ಗುರಿಯಾಗಿಸಿಕೊಳ್ಳುತ್ತಿದ್ದರು. ಒಳ್ಳೆಯ ಸಂಬಂಧ ಸಿಕ್ಕಿದೆ ಎಂದು ಅನುರಾಧಳ ಫೋಟೋ ತೋರಿಸುತ್ತಿದ್ದರು. ನಂತರ ಕಾನೂನುಬದ್ಧವಾಗಿ ಮದುವೆ ಮಾಡಿಸಿ, ಅದಕ್ಕೆ ಭಾರಿ ಕಮಿಷನ್ ಪಡೆಯುತ್ತಿದ್ದರು.
Read this also : ಮೂರು ವರ್ಷಕ್ಕೆ ನಾಲ್ಕು ಮದುವೆಯಾದ ಖತರ್ನಾಕ್ ಲೇಡಿ, ಹೆಣ್ಣು ಸಿಗದ ಗಂಡಸರೇ ಈಕೆಗೆ ಟಾರ್ಗೆಟ್?
Marriage Fraud – ಮದುವೆಯಾದ ಬಳಿಕ ವಂಚನೆ ಹೇಗೆ ನಡೆಯುತ್ತಿತ್ತು?
ಅನುರಾಧ ಮದುವೆಯಾದ ನಂತರ ಕೆಲವು ದಿನಗಳ ಕಾಲ ಗಂಡನ ಮನೆಯಲ್ಲಿ ಇರುತ್ತಿದ್ದಳು. ಸಮಯ ಸಿಕ್ಕ ತಕ್ಷಣ ಚಿನ್ನಾಭರಣ, ನಗದು, ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ರಾತ್ರೋರಾತ್ರಿ ಪರಾರಿಯಾಗುತ್ತಿದ್ದಳು. ಹೀಗೆ, ವಿವಿಧ ರಾಜ್ಯಗಳಲ್ಲಿ 7 ತಿಂಗಳಲ್ಲಿ 25 ಮಂದಿಗೆ ಮೋಸ ಮಾಡಿದ್ದಾಳೆ. ಸವಾಯಿ ಮಾಧೋಪುರಕ್ಕೆ ಸೇರಿದ ವಿಷ್ಣು ಶರ್ಮಾ ಎಂಬುವವರು ಮೇ 3ರಂದು ನೀಡಿದ ದೂರಿನಿಂದ ಈ ವಂಚನೆ ಬೆಳಕಿಗೆ ಬಂದಿದೆ. ಸುನೀತಾ ಮತ್ತು ಪಪ್ಪು ಮೀನಾ ಎಂಬ ಇಬ್ಬರು ಏಜೆಂಟ್ಗಳಿಗೆ 2 ಲಕ್ಷ ರೂಪಾಯಿ ನೀಡಿ ಅನುರಾಧಳೊಂದಿಗೆ ಮದುವೆ ಸಂಬಂಧ ಕುದುರಿಸಿಕೊಂಡಿದ್ದಾಗಿ ವಿಷ್ಣು ಶರ್ಮಾ ಹೇಳಿದ್ದಾರೆ. ಏಪ್ರಿಲ್ 20ರಂದು ಸ್ಥಳೀಯ ನ್ಯಾಯಾಲಯದಲ್ಲಿ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ. ಆದರೆ, ಮೇ 2ರಂದು ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳೊಂದಿಗೆ ಅನುರಾಧ ಪರಾರಿಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರ ಕಾರ್ಯಾಚರಣೆ ಮತ್ತು ಆರೋಪಿಗಳ ಬಂಧನ
ವಿಷ್ಣು ಶರ್ಮಾ ದೂರಿನ ನಂತರ, ಪೊಲೀಸರು ಸಿನಿಮೀಯ ರೀತಿಯಲ್ಲಿ ಒಬ್ಬ ಕಾನ್ಸ್ಟೆಬಲ್ ಅನ್ನು ವರನಂತೆ ಕಳುಹಿಸಿದರು. ಏಜೆಂಟ್ಗಳೊಂದಿಗೆ ಸಂಪರ್ಕ ಸಾಧಿಸಿದಾಗ, ಅನುರಾಧಳ ಫೋಟೋ ಕಳುಹಿಸಿದ್ದಾರೆ. ನೇರವಾಗಿ ಭೇಟಿ ಮಾಡಿ ಮಾತನಾಡಲು ವಿಳಾಸ ಪಡೆದ ಕಾನ್ಸ್ಟೆಬಲ್, ಆ ವಿವರಗಳನ್ನು ಹಿರಿಯ ಅಧಿಕಾರಿಗಳಿಗೆ ನೀಡಿದರು. ನಂತರ ಪೊಲೀಸರು ದಾಳಿ ನಡೆಸಿ ಅನುರಾಧಳನ್ನು ವಶಕ್ಕೆ ಪಡೆದರು. ಈ ಗ್ಯಾಂಗ್ನಲ್ಲಿ ರೋಶ್ನಿ, ರಘುಬೀರ್, ಗೋಲು, ಮಜ್ಬೂತ್ ಸಿಂಗ್ ಯಾದವ್, ಅರ್ಜುನ್ ಸೇರಿದಂತೆ ಇನ್ನೂ ಕೆಲವು ಆರೋಪಿಗಳು ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.