Local News – ಸುಮಾರು 10 ವರ್ಷಗಳ ಹಿಂದೆ ಗುಡಿಬಂಡೆ ಮುಖ್ಯರಸ್ತೆ ಅಗಲೀಕರಣದ ವೇಳೆ ಆಸ್ತಿ ಕಳೆದುಕೊಂಡವರಿಗೆ ನಿವೇಶನ ನೀಡುವುದು ನನ್ನ ಆದ್ಯ ಕರ್ತವ್ಯವವಾಗಿದೆ. ಆರು ತಿಂಗಳ ಒಳಗಾಗಿ ರಸ್ತೆ ಅಗಲೀಕರಣದಲ್ಲಿ ಮನೆ ಕಳೆದುಕೊಂಡವರಿಗೆ ಹಾಗೂ ಪಟ್ಟಣದಲ್ಲಿರುವ ನಿವೇಶನ ರಹಿತರರಿಗೆ ನಿವೇಶನ ನೀಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಸುಬ್ಬಾರೆಡ್ಡಿ ಭರವಸೆ ನೀಡಿದರು.
Local News – ತಾತ್ಕಲಿಕವಾಗಿ ನಿವೇಶನಗಳ ಹಕ್ಕು ಪತ್ರ ವಿತರಣೆ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬ್ರಾಹ್ಮಣರಹಳ್ಳಿ ರಸ್ತೆಗೆ ಹೋಗುವ ಮಾರ್ಗದಲ್ಲಿ ಗುಡಿಬಂಡೆ ಪ.ಪಂ ವ್ಯಾಪ್ತಿಯ ಮುಖ್ಯರಸ್ತೆ ಅಗಲೀಕರಣದ ವೇಳೆ ಮನೆ/ನಿವೇಶನ ಕಳೆದುಕೊಂಡವರಿಗೆ ಆಶ್ರಯ ಯೋಜನೆಯಡಿ ಉಚಿತ ನಿವೇಶನಗಳ ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಪಟ್ಟಣದಲ್ಲಿ ನಿವೇಶನ ಕಳೆದುಕೊಂಡವರಿಗೆ ಮೊದಲ ಹಂತವಾಗಿ 54 ಹಕ್ಕುಪತ್ರಗಳನ್ನು ನೀಡಲು ಕಳೆದ ಆಶ್ರಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಇದೀಗ 40 ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಆದರೆ ಈ ಪಟ್ಟಿಯಲ್ಲಿ ಲೋಪದೋಷಗಳು ಇದೆ. ಮುಖ್ಯರಸ್ತೆಯಲ್ಲಿ ಅಗಲೀಕರಣದ ವೇಳೆ ನಿವೇಶನ ಕಳೆದುಕೊಳ್ಳದೇ ಇರುವಂತಹವರಿಗೂ ಹಕ್ಕುಪತ್ರ ನೀಡಲಾಗಿದೆ, ಪೂರ್ಣ ಪ್ರಮಾಣದ ಮನೆ ಕಳೆದುಕೊಂಡವರಿಗೆ ನಿವೇಶನ ನೀಡಿಲ್ಲ ಎಂಬೆಲ್ಲಾ ದೂರುಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ತಾತ್ಕಲಿಕವಾಗಿ ಈ ಹಕ್ಕು ಪತ್ರಗಳನ್ನು ನೀಡಲಾಗುತ್ತಿದೆ. ಈ ಪಟ್ಟಿಯಲ್ಲಿ ಅನರ್ಹರನ್ನು ತೆಗೆದುಹಾಕಿ ಅರ್ಹರಿಗೆ ನಿವೇಶನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನೂ ಈಗಾಗಲೇ ಪಟ್ಟಣಕ್ಕೆ ಸಮೀಪದಲ್ಲಿ ಜಮೀನು ಗುರ್ತಿಸಲಾಗಿದೆ. ಶೀಘ್ರದಲ್ಲೇ ಅಲ್ಲಿ ನಿವೇಶನ ರಹಿತರರಿಗೆ ನಿವೇಶನ ನೀಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

Local News – ನಿವೇಶನ ನೀಡಲು ಲಂಚ ಪಡೆದರೇ ಶಿಸ್ತು ಕ್ರಮ
ಇನ್ನೂ ನಿವೇಶನಗಳನ್ನು ನೀಡುವುದು ಬಡವರಿಗೆ, ಅವರ ಬಳಿ ಯಾವುದೇ ಜನಪ್ರತಿನಿಧಿಯಾಗಲಿ ಅಥವಾ ಅಧಿಕಾರಿಗಳಾಗಲಿ ಹಣ ಕೇಳಿದರೇ ನನಗೆ ತಿಳಿಸಿ ಅವರನ್ನು ಮನೆಗೆ ಕಳುಹಿಸುವ ಕೆಲಸ ಮಾಡುತ್ತೇನೆ. ಅಥವಾ ಈಗಾಗಲೇ ಯಾರಿಗಾದರೂ ಹಣ ನೀಡಿದ್ದರೇ ತಿಳಿಸಿ ಅಥವಾ ನೀವೆ ಅವರ ಮನೆಯ ಮುಂದೆ ಹೋಗಿ ಕುಳಿತುಕೊಳ್ಳಿ, ಹಣ ನೀಡುವ ತನಕ ಬಿಡಬೇಡಿ. ಬಡವರ ಬಳಿ ಯಾರಾದರೂ ಹಣ ಕೇಳಿದರೇ ಅಂತಹವರ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಎಚ್ಚರಿಕೆ ಸಹ ನೀಡಿದರು.
Local News – ಹಕ್ಕುಪತ್ರ ವಿತರಣಾ ಪಟ್ಟಿಯ ವಿರುದ್ದ ಜನರ ಆಕ್ರೋಷ:
ಇನ್ನೂ ಮುಖ್ಯರಸ್ತೆ ಅಗಲೀಕರಣದ ವೇಳೆ ನಿವೇಶನ ಕಳೆದುಕೊಂಡ ಮಾಲೀಕರು ಈ ಹಕ್ಕು ಪತ್ರ ವಿತರಣಾ ಪಟ್ಟಿಯ ಬಗ್ಗೆ ಆಕ್ರೋಷ ಹೊರಹಾಕಿದರು. ಅಧಿಕಾರಿಗಳು ಸಿದ್ದಪಡಿಸಿರುವಂತಹ ಪಟ್ಟಿ ಸಂಪೂರ್ಣವಾಗಿ ತಪ್ಪಾಗಿದೆ. ಬಹುತೇಕರು ಆಸ್ತಿ ಇರುವಂತಹವರೇ ಆಗಿದ್ದಾರೆ. ಆದರೆ ರಸ್ತೆ ಅಗಲೀಕರಣದ ವೇಳೆ ಸಂಪೂರ್ಣವಾಗಿ ಮನೆ ಕಳೆದುಕೊಂಡವರ ಹೆಸರು ಮಾತ್ರ ಈ ಪಟ್ಟಿಯಲ್ಲಿ ಇಲ್ಲ. ಹಣ ಕೊಟ್ಟವರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಆದ್ದರಿಂದ ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕರು ಈ ಪಟ್ಟಿಯನ್ನು ತಡೆ ಹಿಡಿಯಬೇಕಾಗಿ, ಹಾಗೂ ಸಂಪೂರ್ಣವಾಗಿ ನಿವೇಶನ ಕಳೆದುಕೊಂಡವರಿಗೆ ಮೊದಲ ಆದ್ಯತೆಯಾಗಿ ನಿವೇಶನಗಳನ್ನು ನೀಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸುಬ್ಬಾರೆಡ್ಡಿ, ಜನರ ಮನವಿಯನ್ನು ನಾನು ಸ್ವೀಕರಿಸುತ್ತೇನೆ. ಕಳೆದ ಆಶ್ರಯ ಸಮಿತಿ ಸಭೆಯಲ್ಲಿಯೇ ಪೂರ್ಣ ಪ್ರಮಾಣದ ಮನೆ ಕಳೆದುಕೊಂಡವರಿಗೆ ನಿವೇಶನ ನೀಡುವಂತೆ ಸೂಚನೆ ನೀಡಿದ್ದೇನೆ. ಆದರೆ ನೀವು ಈ ಪಟ್ಟಿಯ ಬಗ್ಗೆ ಆರೋಪ ಮಾಡಿದ್ದೀರಿ. ಈ ಕಾರಣದಿಂದ ನಾನು ಈಗ ಹಕ್ಕು ಪತ್ರಗಳನ್ನು ತಾತ್ಕಲಿಕವಾಗಿ ನೀಡುತ್ತಿದ್ದೇನೆ. ಸೋಮವಾರದಿಂದ ಅಧಿಕಾರಿಗಳಿಗೆ ಸರ್ವೆ ಮಾಡಲು ತಿಳಿಸಿದ್ದೇನೆ. ಅನರ್ಹರು ಕಂಡುಬಂದರೇ ಕೂಡಲೇ ಅವರ ಹಕ್ಕು ಪತ್ರಗಳನ್ನು ರದ್ದು ಮಾಡಿ ಅರ್ಹರಿಗೆ ನೀಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಇನ್ನೂ ಸಭೆಯಲ್ಲಿ ಪಟ್ಟಣದ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ ಪಟ್ಟಣ ಪಂಚಾಯತಿ ನಿಧಿಯಿಂದ ಪ್ರೋತ್ಸಾಹಧನವನ್ನು ವಿತರಣೆ ಮಾಡಲಾಯಿತು. ಈ ಸಮಯದಲ್ಲಿ ತಾಲೂಕು ಪಂಚಾಯತಿ ಇ.ಒ ನಾಗಮಣಿ, ಪಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಮುಖ್ಯಾಧಿಕಾರಿ ಸಭಾ ಶಿರೀನ್, ಪಪಂ ಸದಸ್ಯರುಗಳು, ನಾಮ ನಿರ್ದೇಶಿತ ಸದಸ್ಯರು, ಆಶ್ರಯ ಸಮಿತಿ ಸದಸ್ಯರು, ಪ.ಪಂ. ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಇದ್ದರು.