Local News – ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಆತಂಕದ ನಡುವೆ, ಅವುಗಳ ಉಳಿವಿಗಾಗಿ ಹಳೆ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಸರ್ಕಾರಿ ಮಾಧ್ಯಮಿಕ ಮತ್ತು ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಬಳಗವು ಜೂನ್ 26 ರಂದು ಅದ್ಧೂರಿ ‘ಪ್ರತಿಭಾ ಪುರಸ್ಕಾರ ಹಾಗೂ ಸಾಮೂಹಿಕ ಗಾಯನ’ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಮೂಲಕ ಶಾಲೆಯ ಭವಿಷ್ಯವನ್ನು ಉಜ್ವಲಗೊಳಿಸುವ ಪ್ರಯತ್ನಕ್ಕೆ ಎಲ್ಲರೂ ಸಾಕ್ಷಿಯಾಗುವಂತೆ ಆಹ್ವಾನ ನೀಡಲಾಗಿದೆ.
Local News – ಸರ್ಕಾರಿ ಶಾಲೆಗಳ ಉಳಿವಿಗೆ ಹಳೆ ವಿದ್ಯಾರ್ಥಿಗಳ ದೃಢ ಸಂಕಲ್ಪ
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಖಾಸಗೀಕರಣದ ಪ್ರಭಾವದಿಂದ ಅನೇಕ ಸರ್ಕಾರಿ ಶಾಲೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಈ ಬಗ್ಗೆ ಕೇವಲ ವೇದಿಕೆಗಳಲ್ಲಿ ಮಾತನಾಡುವುದು ಮಾತ್ರವಲ್ಲದೆ, ಕಾರ್ಯರೂಪಕ್ಕೆ ತರುವ ಅಗತ್ಯವಿದೆ ಎಂದು ಹಳೆ ವಿದ್ಯಾರ್ಥಿಗಳು ಮನಗಂಡಿದ್ದಾರೆ.
ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಹಳೆಯ ವಿದ್ಯಾರ್ಥಿ ಪ್ರೆಸ್ ಸುಬ್ಬರಾಯಪ್ಪ, “ವೇದಿಕೆಗೆ ಸೀಮಿತವಾಗುವ ಮಾತುಗಳ ಬದಲಿಗೆ, ನಾವೇನಾದರೂ ಮಾಡಬೇಕು ಎಂದು ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳು ನಿರ್ಧರಿಸಿದ್ದೇವೆ. ನಮ್ಮ ಶಾಲೆಯ ಉಳಿವಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇದರ ಸಂಪೂರ್ಣ ವೆಚ್ಚವನ್ನು ಹಳೆ ವಿದ್ಯಾರ್ಥಿಗಳೇ ಭರಿಸಲಿದ್ದಾರೆ” ಎಂದರು.
Local News – ಗೂಳಿ ಬಜ್ಜಣ್ಣ ಅವರ ಕೊಡುಗೆ ಮತ್ತು ಶಾಲೆಯ ಇತಿಹಾಸ
ಬೀಚಗಾನಹಳ್ಳಿ ಗ್ರಾಮದ ದಾನಿ, ದಿವಂಗತ ಶ್ರೀ ಗೂಳಿ ಬಜ್ಜಣ್ಣನವರು ಪ್ರೌಢಶಾಲೆ ಪ್ರಾರಂಭಿಸಲು 3 ಎಕರೆ ಜಮೀನು ಮತ್ತು ಬೇಕಾದ ಕಟ್ಟಡವನ್ನು ಕಟ್ಟಿಸುವ ನಿರ್ಧಾರ ಮಾಡಿದ್ದರು. ಅಂದಿನಿಂದ ಇಂದಿನ ತನಕ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಶಾಲೆಯಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದು ಹೀಗೆ ಮುಂದುವರಿದರೆ, ಶಾಲೆಯು ಮುಚ್ಚಲ್ಪಡುವ ಆತಂಕವಿದೆ. ಇದೇ ಆತಂಕದಿಂದ ಹಳೆ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮೂಲಕ ಶಾಲೆಯನ್ನು ಉಳಿಸಲು ಮುಂದಾಗಿದ್ದಾರೆ.
Read this also : ಉರ್ದು ಶಾಲೆಗಳ ಉಳಿವು: ಪೋಷಕರ ಸಹಕಾರ ಅತ್ಯಗತ್ಯ – ಮೊಹಮ್ಮದ್ ನಾಸೀರ್ ಮನವಿ
Local News – ಸಂಗೀತ ಮತ್ತು ಮಾನವೀಯ ಮೌಲ್ಯಗಳ ಸಂಗಮ
ಮತ್ತೋರ್ವ ಹಳೆ ವಿದ್ಯಾರ್ಥಿ ಡಾ. ವಿಜಯ್ ಕುಮಾರ್, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಿದರು. “ಸಂಗೀತವು ಪ್ರತಿಭೆಯನ್ನು ಹೆಚ್ಚಿಸುವುದಲ್ಲದೆ, ನೆನಪಿನ ಶಕ್ತಿಯನ್ನೂ ವೃದ್ಧಿಸುತ್ತದೆ. ಜೊತೆಗೆ, ಮಾನವೀಯ ಮೌಲ್ಯಗಳನ್ನು ಕಲಿಯಲು ಸಹಾಯ ಮಾಡುತ್ತದೆ. ಈ ಸಾಮೂಹಿಕ ಗಾಯನ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ತುಂಬಲಿದೆ” ಎಂದು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಪ್ರಮುಖ ಗಣ್ಯರ ಉಪಸ್ಥಿತಿ
ಈ ಮಹತ್ವದ ಕಾರ್ಯಕ್ರಮವನ್ನು ಹಿರಿಯ ಸಾಹಿತಿಗಳು, ಜಾನಪದ ತಜ್ಞರು ಹಾಗೂ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ನಾಡೋಜ ಗೊ.ರು. ಚನ್ನಬಸಪ್ಪ ಅವರು ಉದ್ಘಾಟಿಸಲಿದ್ದಾರೆ. ಜೊತೆಗೆ, ಬೀಚಗಾನಹಳ್ಳಿ ಗ್ರಾಪಂ ಅಧ್ಯಕ್ಷರಾದ ಶಾಂತಮ್ಮ, ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ.ಕೋಡಿ ರಂಗಪ್ಪ, ಪ್ರಸಿದ್ಧ ಕವಿ ಹಾಗೂ ವಿಮರ್ಶಕ ಹಾಗೂ ಪ್ರಾದ್ಯಾಪಕರಾದ ಡಾ.ಕಾ. ವೆಂ. ಶ್ರೀನಿವಾಸ್ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಕೃಷ್ಣ ಕುಮಾರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.