Kempegowda Jayanti – ಗುಡಿಬಂಡೆ ತಾಲೂಕು ಬೈರೇಗೌಡ ಒಕ್ಕಲಿಗರ ಸಂಘದ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಅದ್ದೂರಿಯಾಗಿ ನೆರವೇರಿತು. ಇಪ್ಪತೈದಕ್ಕೂ ಅಧಿಕ ಬೆಳ್ಳಿ ರಥಗಳು, ವಿವಿಧ ಕಲಾತಂಡಗಳು ಹಾಗೂ ಸಮುದಾಯದವರು ಪಟ್ಟಣದ ರಾಜಬೀದಿಯಲ್ಲಿ ಮೆರವಣಿಗೆ ನಡೆಸುವ ಮೂಲಕ ಸಂಭ್ರಮ ಸಡಗರದಿಂದ ಜಯಂತಿಯನ್ನು ಆಚರಿಸಲಾಯಿತು.
Kempegowda Jayanti – ಕೆಂಪೇಗೌಡರ ಆದರ್ಶಗಳು ಇಂದಿಗೂ ಪ್ರಸ್ತುತ!
ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಹೂವಿನ ಪಲ್ಲಕ್ಕಿ ಹಾಗೂ ಬೆಳ್ಳಿ ರಥಗಳಿಗೆ ಚಾಲನೆ ನೀಡಿ ಮಾತನಾಡಿದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, “ಶತಮಾನಗಳ ಬಳಿಕವೂ ಕೆಂಪೇಗೌಡರ ಸಾಧನೆಗಳು ಆದರ್ಶವಾಗಿವೆ. ಎಲ್ಲಾ ಸಮುದಾಯಗಳಿಗೆ ಅವರು ನೀಡಿದ ಕೊಡುಗೆಗಳು ಮುಂದೆಯೂ ಶತ ಶತಮಾನಗಳ ಕಾಲ ಆದರ್ಶವಾಗಿ ಉಳಿಯಲಿವೆ” ಎಂದರು.
ಸ್ವಾಮೀಜಿಗಳು ಒಕ್ಕಲಿಗ ಸಮುದಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, “ಒಕ್ಕಲಿಗರು ಎಲ್ಲಾ ಸಮುದಾಯಗಳ ಹಿತ ಬಯಸುತ್ತಾರೆ, ಎಲ್ಲರ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಎಲ್ಲ ಸಮುದಾಯಗಳ ಜೊತೆ ಉತ್ತಮ ಬಾಂಧವ್ಯ ಹೊಂದುವ ಜೊತೆಗೆ, ಎಲ್ಲರಿಗೂ ಆದರ್ಶವಾಗುವ ರೀತಿ ಒಕ್ಕಲಿಗರು ಜೀವನ ನಡೆಸುತ್ತಿದ್ದಾರೆ. ನಾಲ್ಕು ಜನರಿಗೆ ತುತ್ತು ಅನ್ನ ನೀಡುವ ರೀತಿಯಲ್ಲಿ ಬದುಕಬೇಕು” ಎಂದು ಹೇಳಿದರು. ಅಲ್ಲದೆ, ಬೈರೇಗೌಡರ ಪುತ್ಥಳಿ ಸ್ಥಾಪನೆಗೆ ಕಾನೂನುಬದ್ಧವಾಗಿ ಒಗ್ಗಟ್ಟಿನಿಂದ ಪ್ರಯತ್ನಿಸುವಂತೆ ಕರೆ ನೀಡಿದರು.
Kempegowda Jayanti – ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡರ ದೂರದೃಷ್ಟಿ
ಒಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ಎನ್. ರಮೇಶ್ ಮಾತನಾಡಿ, ಬೆಂಗಳೂರು ನಿರ್ಮಾಣದ ನಂತರ ವಿಶ್ವದ ಹಲವು ದೇಶಗಳ ಹಾಗೂ ದೇಶದ ಹಲವು ರಾಜ್ಯಗಳ ಜನರು ಉದ್ಯೋಗ ಪಡೆದು ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. “ಕೆಂಪೇಗೌಡರು ಎಲ್ಲಾ ಸಮುದಾಯಗಳಿಗೂ ಅವಶ್ಯಕವಿರುವ ಕೆರೆ ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ, ವ್ಯಾಪಾರ ವಹಿವಾಟು ನಡೆಸಲು ಅನೇಕ ಪೇಟೆಗಳನ್ನು ನಿರ್ಮಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ” ಎಂದು ಕೆಂಪೇಗೌಡರ ದೂರದೃಷ್ಟಿಯನ್ನು ಸ್ಮರಿಸಿದರು.
Kempegowda Jayanti – ಸಮುದಾಯದ ಅಭಿವೃದ್ಧಿಗೆ ಸಂಘದ ಕೊಡುಗೆ
ಒಕ್ಕಲಿಗರ ಸಂಘದ ಇನ್ನೊಬ್ಬ ನಿರ್ದೇಶಕ ಡಾ. ರಮೇಶ್ ಮಾತನಾಡಿ, ಸಮುದಾಯದ ಮಕ್ಕಳಿಗಾಗಿ ಸಂಘದ ವತಿಯಿಂದ ಅನೇಕ ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ನಿಲಯಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. “ನಮ್ಮ ಸಂಘವು ಸುಮಾರು 800 ಕೋಟಿಯಷ್ಟು ಆದಾಯದಲ್ಲಿದ್ದು, ಸಮುದಾಯದ ಅಭಿವೃದ್ಧಿಗೆ ದುಡಿಯೋಣ” ಎಂದು ಹೇಳಿದರು.
Kempegowda Jayanti – ಮೆರವಣಿಗೆಯಲ್ಲಿ ಗ್ರಾಮಗಳ ಸಂಭ್ರಮ
ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದ್ದು ತಾಲೂಕಿನ ಒಕ್ಕಲಿಗ ಸಮುದಾಯದವರ ಭಾಗವಹಿಸುವಿಕೆ. ತಮ್ಮ ಗ್ರಾಮಗಳಿಂದ ತಲಾ ಒಂದೊಂದು ಪಲ್ಲಕ್ಕಿ ಜೊತೆ, ನೂರಾರು ಜನ ಭಾಗವಹಿಸಿದ್ದರು. ಚೆಂಡೂರು ಸರ್ಕಲ್, ಪೆಮ್ಮನಹಳ್ಳಿ, ಕೊಂಡಾವಲಹಳ್ಳಿ, ಇಡ್ರಹಳ್ಳಿ, ತಿರುಮಣಿ, ಬ್ರಾಹ್ಮಣರಹಳ್ಳಿ, ಚಿಕ್ಕತಮ್ಮನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ಪಲ್ಲಕ್ಕಿಗಳು ಅದ್ದೂರಿಯಾಗಿದ್ದವು.
ವಿವಿಧ ಕಲಾ ತಂಡಗಳೊಂದಿಗೆ ಹಳ್ಳಿಗಳಿಂದ ಆಗಮಿಸಿದ್ದ ಪಲ್ಲಕ್ಕಿಗಳು ಹಾಗೂ ಬೆಳ್ಳಿ ರಥಗಳಲ್ಲಿ ಕೆಂಪೇಗೌಡರ ಪ್ರತಿಮೆ ಹಾಗೂ ಭಾವಚಿತ್ರಗಳ ಮೆರವಣಿಗೆಯು ಎಲ್ಲರ ಗಮನ ಸೆಳೆಯಿತು. ಸಾವಿರಾರು ಜನರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಾ ಕೆಂಪೇಗೌಡರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಿದರು.
Read this also : ಕೇವಲ ಆಚರಣೆಯಲ್ಲ, ಆದರ್ಶಗಳ ಅಳವಡಿಕೆ ಮುಖ್ಯ – ಶಾಸಕ ಸುಬ್ಬಾರೆಡ್ಡಿ
Kempegowda Jayanti – ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು
ಈ ಸಂದರ್ಭದಲ್ಲಿ ತಾಲೂಕು ಬೈರೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್ ರೆಡ್ಡಿ, ಕಾರ್ಯದರ್ಶಿ ವೇಣುಗೋಪಾಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಚ್.ಎನ್. ಮಂಜುನಾಥ್ ರೆಡ್ಡಿ, ಮುಖಂಡರಾದ ಶಿವಣ್ಣ, ಗಂದಂನಾಗೇನಹಳ್ಳಿ ಭೈರಪ್ಪ, ಕೆ.ಎ. ನರಸಿಂಹರೆಡ್ಡಿ, ಅಮರನಾರಾಯಣ ರೆಡ್ಡಿ, ಭಾಸ್ಕರ್ ರೆಡ್ಡಿ, ಚೌಡರೆಡ್ಡಿ, ಹೆಚ್.ಪಿ. ರಾಮನಾಥರೆಡ್ಡಿ, ನಾರಾಯಣಸ್ವಾಮಿ, ತಟ್ಟಹಳ್ಳಿ ಮದ್ದರೆಡ್ಡಿ ಸೇರಿದಂತೆ ಅನೇಕ ಮುಖಂಡರು ಹಾಗೂ ಸಮುದಾಯದ ಜನರು ಭಾಗವಹಿಸಿದ್ದರು.