Hyderabad – ಹೈದರಾಬಾದ್ ನ ಗಾಜುಲರಾಮರಂ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದ ಭೀಕರ ಘಟನೆಯೊಂದು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಇಲ್ಲೊಬ್ಬ ತಾಯಿ ತನ್ನ ಇಬ್ಬರು ಮುದ್ದಾದ ಮಕ್ಕಳನ್ನು ನಿರ್ದಯವಾಗಿ ಕೊಲೆ ಮಾಡಿ, ನಂತರ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತೇಜಸ್ವಿನಿ ಎಂಬ ಮಹಿಳೆ ತನ್ನ ಆರು ಮತ್ತು ಎಂಟು ವರ್ಷದ ಮಕ್ಕಳನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾಳೆ. ಬಳಿಕ ಆಕೆಯೂ ಕಟ್ಟಡದ ಮೇಲಿನಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ಮಕ್ಕಳನ್ನು ಅರ್ಶಿತ್ ರೆಡ್ಡಿ (6) ಮತ್ತು ಆಶಿಶ್ ರೆಡ್ಡಿ (8) ಎಂದು ಗುರುತಿಸಲಾಗಿದೆ. ಇವರು ಖಮ್ಮಂ ಜಿಲ್ಲೆಯ ಸತ್ತುಪಲ್ಲಿಯವರು ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಪೊಲೀಸರಿಗೆ ನಾಲ್ಕು ಪುಟಗಳ ಸೂಸೈಡ್ ನೋಟ್ ದೊರೆತಿದ್ದು, ಅದರಲ್ಲಿ ತೇಜಸ್ವಿನಿ ತನ್ನ ಮಾನಸಿಕ ಸ್ಥಿತಿಯ ಬಗ್ಗೆ ಬರೆದುಕೊಂಡಿದ್ದಾಳೆ ಎನ್ನಲಾಗಿದೆ.
Hyderabad – ಸೂಸೈಡ್ ನೋಟ್ ಮತ್ತು ಕಾರಣಗಳು
ತೇಜಸ್ವಿನಿ ಮತ್ತು ಆಕೆಯ ಪತಿ ವೆಂಕಟೇಶ್ವರ್ ರೆಡ್ಡಿ ಬಾಲಾಜಿ ಲೇಔಟ್ನ ಸಹಸ್ರ ಹೈಟ್ಸ್ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ತೇಜಸ್ವಿನಿಗೆ ಮಾನಸಿಕ ಸಮಸ್ಯೆಗಳಿದ್ದವು ಎನ್ನಲಾಗಿದ್ದು, ಅಲ್ಲದೆ ಆಕೆಯ ಮಕ್ಕಳು ಸಹ ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಇದರೊಂದಿಗೆ, ದಂಪತಿಗಳ ನಡುವೆ ಸಣ್ಣಪುಟ್ಟ ಕೌಟುಂಬಿಕ ಕಲಹಗಳು ಸಹ ಇದ್ದವು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಎಲ್ಲ ಕಾರಣಗಳಿಂದಲೇ ತೇಜಸ್ವಿನಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಎನ್ನಲಾಗಿದೆ.
Hyderabad – ಪೊಲೀಸ್ ತನಿಖೆ
ಗುರುವಾರ ಸಂಜೆ ಸುಮಾರು 4 ಗಂಟೆ ಸುಮಾರಿಗೆ ತೇಜಸ್ವಿನಿ ತನ್ನ ಇಬ್ಬರು ಮಕ್ಕಳನ್ನು ಕೊಡಲಿಯಿಂದ ಕಡಿದಿದ್ದಾಳೆ. ಘಟನೆಯಲ್ಲಿ ಆಶಿಶ್ ರೆಡ್ಡಿ ಸ್ಥಳದಲ್ಲೇ ಮೃತಪಟ್ಟರೆ, ಅರ್ಶಿತ್ ರೆಡ್ಡಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾನೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಜೀಡಿಮೆಟ್ಲ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳದಿಂದ ಐದು ಪುಟಗಳ ಸೂಸೈಡ್ ನೋಟ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಅನಾರೋಗ್ಯದ ಕಾರಣದಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತೇಜಸ್ವಿನಿ ಬರೆದಿದ್ದಾಳೆ ಎಂದು ಹೇಳಲಾಗಿದೆ.
Read this also : ಟೆಕ್ಕಿ ಆತ್ಮಹತ್ಯೆ: ಕೌಟುಂಬಿಕ ಕಲಹದ ನೋವಿನಿಂದ ಇಹಲೋಕ ತ್ಯೆಜಿಸಿದ ಟೆಕ್ಕಿ….!
ಈ ಘಟನೆಗೆ ಸಂಬಂಧಿಸಿದಂತೆ ಜೀಡಿಮೆಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎಲ್ಲಾ ಆಯಾಮಗಳಲ್ಲಿಯೂ ತನಿಖೆಯನ್ನು ಮುಂದುವರಿಸಿದ್ದಾರೆ. ಸದ್ಯಕ್ಕೆ, ತೇಜಸ್ವಿನಿಯ ಮಾನಸಿಕ ಸ್ಥಿತಿ ಮತ್ತು ಕೌಟುಂಬಿಕ ಕಲಹಗಳೇ ಈ ದುರಂತಕ್ಕೆ ಮುಖ್ಯ ಕಾರಣಗಳೆಂದು ಪೊಲೀಸರು ಶಂಕಿಸುತ್ತಿದ್ದಾರೆ. ಮುಂದಿನ ತನಿಖೆಯಿಂದ ಇನ್ನಷ್ಟು ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.