Marriage – ಹಾಸನ ಜಿಲ್ಲೆಯ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದ ಘಟನೆ ಇಡೀ ಮದುವೆ ಸಮಾರಂಭವನ್ನೇ ತಲ್ಲಣಗೊಳಿಸಿದೆ. ತಾಳಿ ಕಟ್ಟುವ ಶುಭ ಮುಹೂರ್ತದಲ್ಲಿ ವಧು (Bride) ತಲೆ ಅಲ್ಲಾಡಿಸಿ, “ನನಗೆ ಈ ಮದುವೆ (Marriage) ಬೇಡ” ಎಂದು ಅಚ್ಚರಿಯ ಹೇಳಿಕೆ ನೀಡಿದ್ದು, ನೆರೆದಿದ್ದ ಎಲ್ಲರೂ ಕಂಗಾಲಾಗಿದ್ದಾರೆ.
Marriage – ಮದುವೆ ನಿಲ್ಲಲು ಕಾರಣವಾದ ಆ ಒಂದು ಫೋನ್ ಕರೆ!
ಧಾರೆ ಮುಹೂರ್ತಕ್ಕೂ ಮುನ್ನ ಯುವತಿಗೆ ಒಂದು ಫೋನ್ ಕರೆ ಬಂದಿದೆ. ಈ ಕರೆ ಬಂದ ಕೂಡಲೇ ವಧು ತಕ್ಷಣವೇ ತೀವ್ರ ವಿರೋಧ ವ್ಯಕ್ತಪಡಿಸಿ, “ನನಗೆ ಈ ಮದುವೆ ಬೇಡ” ಎಂದು ಹಠ ಹಿಡಿದಿದ್ದಾರೆ. ಹೆತ್ತವರು, ಸಂಬಂಧಿಕರು ಎಷ್ಟೇ ಸಮಾಧಾನಪಡಿಸಲು ಪ್ರಯತ್ನಿಸಿದರೂ ವಧು ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ರೂಂಗೆ ಹೋಗಿ ಮದುವೆ ಬೇಡವೇ ಬೇಡ ಎಂದು ಹಠ ಮುಂದುವರಿಸಿದ್ದಾರೆ.
Marriage – ಕಣ್ಣೀರಿಟ್ಟ ವರ ಮತ್ತು ಪೋಷಕರು
ಕೈಯಲ್ಲಿ ತಾಳಿ ಹಿಡಿದಿದ್ದ ವರ (Groom) ವಧುವನ್ನು ಮನವೊಲಿಸಲು ಹರಸಾಹಸ ಪಟ್ಟರು. “ಏನಾಯ್ತು? ಯಾಕೆ ಈ ಮದುವೆ ಬೇಡ?” ಎಂದು ಕೇಳಿದರೂ ಆಕೆ ಸ್ಪಂದಿಸಲಿಲ್ಲ. ಕೊನೆಗೆ ವರ ಕೂಡ ನಿರಾಶರಾಗಿ, “ನನಗೂ ಈ ಮದುವೆ ಬೇಡ” ಎನ್ನುತ್ತಾ ಕಣ್ಣೀರಿಟ್ಟಿದ್ದಾರೆ. ಮಗಳ ನಿರ್ಧಾರದಿಂದ ಆಘಾತಕ್ಕೊಳಗಾದ ಪೋಷಕರು ಕೂಡ ಕಣ್ಣೀರು ಹಾಕಿದ್ದಾರೆ. ಈ ಘಟನೆಯಿಂದಾಗಿ ಧಾರಾ ಮುಹೂರ್ತದ ಸಮಯದಲ್ಲಿ ಬಂದ ಆ ಒಂದು ಫೋನ್ ಕರೆ ಇಡೀ ಮದುವೆಯನ್ನೇ ಮುರಿದು ಹಾಕಿದೆ.
Marriage – ಮೂರು ತಿಂಗಳ ಪ್ರೀ-ವೆಡ್ಡಿಂಗ್ ಶೂಟ್, ಕೊನೆಗಳಿಗೆಯಲ್ಲಿ ಅವಾಂತರ!
ಹಾಸನ ಹೊರವಲಯದ ಬೂವನಹಳ್ಳಿಯ ಯುವತಿಗೂ, ಆಲೂರು ತಾಲ್ಲೂಕಿನ ಸರ್ಕಾರಿ ಶಾಲೆಯ ಶಿಕ್ಷಕರಿಗೂ ಮೂರು ತಿಂಗಳ ಹಿಂದೆ ನಿಶ್ಚಯವಾಗಿತ್ತು. ಇಂದು ಬೆಳಗ್ಗೆ 9 ಗಂಟೆಗೆ ತಾಳಿ ಕಟ್ಟುವ ಮುಹೂರ್ತ ನಿಗದಿಯಾಗಿತ್ತು. ಮುತ್ತೈದೆಯರು ಕೈ ನೀರು ಬಿಟ್ಟು ಹರಸಿ, ಅರ್ಚಕರು ಮಂತ್ರ ಹೇಳಿ, ಮಂಗಳವಾದ್ಯಗಳು ಮೊಳಗುತ್ತಿದ್ದವು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದಾಗಲೇ, ತಾಳಿ ಕಟ್ಟಲು ವರ ಕೈಗೆತ್ತಿಕೊಳ್ಳುತ್ತಿದ್ದಂತೆ ವಧು ತಲೆ ಅಲ್ಲಾಡಿಸಿ ಕಣ್ಣೀರಿಡಲು ಶುರುಮಾಡಿದ್ದಾರೆ. ಏನಾಯ್ತು ಎಂದು ಕೇಳಿದರೂ ಹೇಳದೆ, ಹಸೆಮಣೆಯಿಂದ ಎದ್ದು ರೂಮ್ಗೆ ಓಡಿಹೋಗಿದ್ದಾರೆ.
ಇನ್ನು, ಒಂದು ತಿಂಗಳ ಹಿಂದಷ್ಟೇ ಅದ್ದೂರಿಯಾಗಿ ಪ್ರೀ-ವೆಡ್ಡಿಂಗ್ ಶೂಟ್ (Pre-wedding shoot) ಕೂಡ ಮಾಡಿಸಿಕೊಂಡಿದ್ದ ಈ ಜೋಡಿ, ನಿನ್ನೆಯ ಸಂಜೆಯೇ ಕಲ್ಯಾಣ ಮಂಟಪಕ್ಕೆ ಬಂದಿತ್ತು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಬೆಳಿಗ್ಗೆ ಎದ್ದು ಮದುವೆಯ ಉಡುಗೆ ತೊಟ್ಟು, ಎಲ್ಲ ಶಾಸ್ತ್ರಗಳನ್ನು ಪೂರೈಸಿಕೊಂಡಿದ್ದ ವಧು, ಕೊನೆಗಳಿಗೆಯಲ್ಲಿ ಮದುವೆಯನ್ನು ಮುರಿದು ಹಸೆಮಣೆಯಿಂದ ಎದ್ದು ಹೋಗಿದ್ದು, ಎಲ್ಲರಿಗೂ ಆಘಾತ ಮೂಡಿಸಿದೆ.
Read this also : Marriage : ಮದುವೆ ರಿಸೆಪ್ಷನ್ ದಿನದಂದೆ ಸಿನಿಮೀಯ ರೀತಿಯಲ್ಲಿ ಲವರ್ ಜೊತೆ ಪರಾರರಿಯಾದ ವಧು….!
ಬಯಲಾಯ್ತು ಪ್ರೀತಿಯ ರಹಸ್ಯ!
ತಾಳಿ ಕೈಯಲ್ಲಿ ಹಿಡಿದು ಪರಿಪರಿಯಾಗಿ ಕೇಳಿದಾಗ ವರನಿಗೆ ತಿಳಿದದ್ದು ಆಕೆಯ ಪ್ರೀತಿಯ ರಹಸ್ಯ. ಸ್ನಾತಕೋತ್ತರ ಪದವಿ ಮುಗಿಸಿರುವ ಯುವತಿಗೆ ಬೇರೊಬ್ಬ ಯುವಕನ ಜೊತೆ ಪ್ರೀತಿ (Love) ಇತ್ತಂತೆ. ಇದನ್ನು ಮನೆಯವರಿಂದ ಮುಚ್ಚಿಟ್ಟಿದ್ದ ಆಕೆ, ಮನೆಯವರ ಒತ್ತಾಯಕ್ಕೆ ಮಣಿದು ಶಿಕ್ಷಕನ ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದಳು. ಆದರೆ, ಮುಹೂರ್ತದ ಸಮಯದಲ್ಲಿ ಬಂದ ಆ ಒಂದು ಕರೆಯಿಂದಾಗಿ ಪ್ರೀತಿಯ ಸತ್ಯ ಬಯಲಾಗಿ ಮದುವೆ ಮುರಿದುಬಿದ್ದಿದೆ.
ಪೊಲೀಸ್ ಮಧ್ಯಸ್ಥಿಕೆ, ವಾದ-ವಿವಾದ!
ಕೊನೆಗೆ ಈ ವಿಚಾರ ಹಾಸನ ಬಡಾವಣೆ ಠಾಣೆ ಪೊಲೀಸರಿಗೆ ತಲುಪಿದೆ. ಸ್ಥಳಕ್ಕೆ ಬಂದ ಪೊಲೀಸರು ಎರಡೂ ಕಡೆಯವರನ್ನು ಮಾತನಾಡಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಹುಡುಗಿ ಮನೆಯವರು ಮತ್ತು ಯುವಕನ ಮನೆಯವರ ನಡುವೆ ವಾಗ್ವಾದ ನಡೆದಿದೆ. ಎಲ್ಲ ಶಾಸ್ತ್ರ ಸಂಪ್ರದಾಯಗಳನ್ನು ಖುಷಿಖುಷಿಯಾಗಿ ಮಾಡಿಸಿಕೊಂಡ ಹುಡುಗಿಯ ಈ ನಡೆ ಅಲ್ಲಿದ್ದವರೆಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಎರಡೂ ಕಡೆಯವರನ್ನು ಸಮಾಧಾನಪಡಿಸಲು ಪೊಲೀಸರು ಹೈರಾಣಾಗಿದ್ದಾರೆ. ಕೊನೆಗೆ ಮದುವೆ ಮುರಿದುಬಿದ್ದಿದ್ದು, ಮದುವೆಗೆ ಬಂದವರಿಗಾಗಿ ಮಾಡಿಸಿದ್ದ ಬಗೆ ಬಗೆಯ ಊಟ (Wedding Food) ಕೂಡ ವ್ಯರ್ಥವಾಗಿದೆ.
ಒಟ್ಟಿನಲ್ಲಿ, ಹೆತ್ತವರು ಹೇಳಿದ ಹುಡುಗನನ್ನು ಇಷ್ಟಪಟ್ಟು ಮದುವೆಗೆ ಒಪ್ಪಿದ್ದ ಹುಡುಗಿ ದಿಢೀರ್ ಪ್ರೀತಿ-ಪ್ರೇಮದ ನೆಪ ಹೇಳಿ ಮದುವೆಯನ್ನೇ ಮುರಿದಿದ್ದಾಳೆ. ಹೊಸ ಜೀವನದ ಕನಸು ಕಂಡು ಹಸೆಮಣೆ ಏರಿದ್ದ ಹುಡುಗ, ಮದುವೆಯೂ ಆಗದೆ ಲಕ್ಷ ಲಕ್ಷ ಹಣವನ್ನೂ ಕಳೆದುಕೊಂಡು ಕಂಗಾಲಾಗಿದ್ದಾನೆ. ಈ ಘಟನೆ ಹಾಸನದಲ್ಲಿ ಈಗ ಸಖತ್ ವೈರಲ್ ನ್ಯೂಸ್ (Viral News) ಆಗಿದೆ.