Groom – ನೆನ್ನೆ ನಡೆದ ವಿವಾಹ ಸಮಾರಂಭವೊಂದು ಕ್ಷಣಾರ್ಧದಲ್ಲಿ ದುರಂತ ಅಂತ್ಯ ಕಂಡಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹದಲ್ಲಿ, ವರ ತಾಳಿ ಕಟ್ಟಿದ ಕೇವಲ 15 ನಿಮಿಷಗಳಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಸ್ಥರು ಮತ್ತು ಬಂಧುಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.
Groom – ಹೃದಯಾಘಾತದಿಂದ ಯುವಕ ಸಾವು
ಮೃತಪಟ್ಟ ವರ ಪ್ರವೀಣ ಕುರ್ನೆ (26). ಅವರು ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ನಿವಾಸಿಯಾಗಿದ್ದು, ಸದ್ಯ ಜಮಖಂಡಿ ನಗರದಲ್ಲಿ ವಾಸಿಸುತ್ತಿದ್ದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದ ಯುವತಿಯೊಂದಿಗೆ ಅವರ ವಿವಾಹ ನಿಶ್ಚಯವಾಗಿತ್ತು. ಶನಿವಾರ (ಮೇ 17) ರಂದು ಅದ್ದೂರಿಯಾಗಿ ವಿವಾಹ ಸಮಾರಂಭ ನೆರವೇರಿತು. ಬಂಧುಗಳು, ಮಿತ್ರರು ಎಲ್ಲರೂ ಸೇರಿ ನವಜೋಡಿಗೆ ಶುಭ ಹಾರೈಸಿದರು. ಆರತಕ್ಷತೆಗಾಗಿ ವೇದಿಕೆ ಮೇಲೆ ನಿಂತಿದ್ದ ನವದಂಪತಿಗಳ ಒಂದೆರಡು ಫೋಟೋಗಳನ್ನು ತೆಗೆಯಲಾಗಿತ್ತು. ಅಷ್ಟರಲ್ಲಿಯೇ ವರ ಪ್ರವೀಣ ಅವರಿಗೆ ಕಾಲು ನಡುಗುವುದು ಮತ್ತು ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ ಕೊನೆಯುಸಿರೆಳೆದಿದ್ದಾರೆ.
Groom – ವಿಧಿಯಾಟಕ್ಕೆ ಕಂಗಾಲಾದ ಕುಟುಂಬ
ತಾಳಿ ಕಟ್ಟಿದ ಕೇವಲ 15 ನಿಮಿಷಗಳಲ್ಲೇ ನವವಧು ವಿಧವೆಯಾಗಿದ್ದು, ಆಕೆಯ ದುರಾದೃಷ್ಟಕ್ಕೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಮದುವೆಯ ಸಂಭ್ರಮದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಮೃತ ಪ್ರವೀಣ ಅವರ ತಂದೆ ಶ್ರೀಶೈಲ್ ಕುರ್ನೆ ಅವರು ರಾಜ್ಯ ಸೈಕ್ಲಿಂಗ್ ಅಸೋಸಿಯೇಷನ್ನ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಪ್ರವೀಣ ಕುಟುಂಬದ ಹಿರಿಯ ಮಗನಾಗಿದ್ದು, ಖಾಸಗಿ ಬ್ಯಾಂಕ್ನಲ್ಲಿ ಉದ್ಯೋಗದಲ್ಲಿದ್ದರು. Read this also : ಮದುವೆಯ ಮನೆಯಲ್ಲಿ ವಿಷಾದ, ಹಳದಿ ಕಾರ್ಯಕ್ರಮದಲ್ಲಿ ಕುಣಿಯುತ್ತಿದ್ದ ವರ ಕುಸಿದು ಬಿದ್ದು ಸಾವು…!
Groom – ಮಂಟಪ ಬಿಕೋ ಎನ್ನುತ್ತಿದೆ
ತಮ್ಮ ಸೋದರಮಾವನ ಮಗಳನ್ನೇ ಪ್ರವೀಣ ವರಿಸಿದ್ದರು. ಬಂಧು ಬಳಗವೆಲ್ಲರೂ ಸಂತೋಷದಿಂದ ಆಗಮಿಸಿ ನವಜೋಡಿಯನ್ನು ಹರಸಿದ್ದರು. ಅತಿಥಿಗಳಿಗಾಗಿ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ವಿಧಿಯಾಟ ಬೇರೆಯೇ ಇತ್ತು. ಸುಂದರ ಸಂಸಾರದ ಕನಸು ಕಂಡಿದ್ದ ವರ ಕೊನೆಯಿಲ್ಲದ ಪಯಣಕ್ಕೆ ತೆರಳಿದ್ದಾರೆ. ಮದುಮಗ ತೀರಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ನಂದಿಕೇಶ್ವರ ಕಲ್ಯಾಣ ಮಂಟಪ ಬಿಕೋ ಎನ್ನುತ್ತಿದೆ. ಅಡುಗೆ ಮತ್ತು ಪಾತ್ರೆಗಳನ್ನು ಸಹ ಸ್ಥಳಾಂತರಿಸಲಾಗಿದೆ.
Groom – ದುರಂತಕ್ಕೆ ಮರುಗಿದ ಜನ
ಈ ದುರಂತ ಘಟನೆಯನ್ನು ಕಂಡ ಜನರು ಆಘಾತ ವ್ಯಕ್ತಪಡಿಸಿದ್ದಾರೆ. “ಇಂತಹ ಘಟನೆ ಯಾರಿಗೂ ಆಗಬಾರದಿತ್ತು. ಮದುವೆಗೆ ನೂರು ಕಾಲ ಚೆನ್ನಾಗಿರಲಿ ಎಂದು ಹಾರೈಸಲು ಬಂದ ನಮಗೆ, ಪ್ರವೀಣ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಗಿದೆ” ಎಂದು ದುಃಖದಿಂದ ನುಡಿದರು. ಹೊಸ ಜೀವನದ ಕನಸು ಹೊತ್ತಿದ್ದ ಯುವಕ ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿರುವುದು ವಧು ಮತ್ತು ಆಕೆಯ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ. ಮದುವೆಯ ಸಂಭ್ರಮದ ನಡುವೆ ಕಣ್ಣೀರಿನ ಕಡಲು ಉಂಟಾಗಿದೆ.