Jatre – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಸಂಭ್ರಮದೊಂದಿಗೆ ಗ್ರಾಮ ದೇವತೆ ಗಂಗಾಭವಾನಿ ದೇವಿಯ 70ನೇ ವರ್ಷದ ಜಾರುಟ್ಲು ಜಾತ್ರೆಯು ಅತ್ಯಂತ ಅದ್ದೂರಿಯಾಗಿ ಜರುಗಿತು. ಈ ವಿಶೇಷ ಜಾತ್ರೆಗೆ ಸ್ಥಳೀಯ ಜನರಷ್ಟೇ ಅಲ್ಲದೆ ದೂರದ ಕೋಲಾರ, ತುಮಕೂರು, ಮೈಸೂರು, ಬೆಂಗಳೂರು ಹಾಗೂ ಆಂಧ್ರಪ್ರದೇಶದ ಕದಿರಿ, ಗೋರೆಂಟ್ಲ, ಅನಂತಪುರದಂತಹ ಪ್ರದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಈ ಜಾತ್ರೆಯ ಸಂಪೂರ್ಣ ಆಯೋಜನೆಯನ್ನು ಗಂಗಾಭವಾನಿ ಭಕ್ತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಯಶಸ್ವಿಯಾಗಿ ನಿರ್ವಹಿಸಿದರು.
Jatre – ಜಾತ್ರೆಯ ಆರಂಭ: ಪವಿತ್ರ ಪೂಜೆ ಮತ್ತು ಮಹಾಮಂಗಳಾರತಿ
ಸೋಮೇನಹಳ್ಳಿ ಗ್ರಾಮದ ಗಂಗಾಭವಾನಿ ದೇವಾಲಯದ ಮುಂಭಾಗದಲ್ಲಿ ಸೋಮವಾರ ಮಧ್ಯಾಹ್ನ 3:30 ಗಂಟೆಗೆ ಜಾತ್ರೆಯ ಮುಖ್ಯ ಆಕರ್ಷಣೆಯಾದ ಜಾರುಟ್ಲು ಮರಕ್ಕೆ ಪೂಜೆ ಆರಂಭವಾಯಿತು. ಗ್ರಾಮದ ಪೌರೋಹಿತರಾದ ಎಸ್.ಎಲ್. ಬಾಲಸುಬ್ರಹ್ಮಣ್ಯಂ ಮತ್ತು ವಿಜಯ್ ಕುಮಾರ್ ಅವರು ಪುಣ್ಯಾಹ ಮತ್ತು ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಅಲಂಕೃತಗೊಂಡ ಗಂಗಾಭವಾನಿ ದೇವಿಗೆ ತೆಂಗಿನಕಾಯಿ ಒಡೆಯಲಾಗಿ, ಮಹಾಮಂಗಳಾರತಿಯೊಂದಿಗೆ ಧಾರ್ಮಿಕ ವಿಧಿ-ವಿಧಾನಗಳು ಪೂರ್ಣಗೊಂಡವು.
Jatre – ಜಾರುಟ್ಲು ಮರ ಏರಿಕೆ: ರೋಚಕ ಸ್ಪರ್ಧೆಯ ಆರಂಭ
ಈ ಜಾತ್ರೆಯ ಪ್ರಮುಖ ಘಟನೆಯಾದ ಜಾರುಟ್ಲು ಮರ ಏರಿಕೆಯಲ್ಲಿ ವಾಲ್ಮೀಕಿ ನಾಯಕ ಜನಾಂಗದ 30 ರಿಂದ 40 ಜನರ ತಂಡ ಭಾಗವಹಿಸಿತು. ಮಿಲ್ಟ್ರಿ ಶ್ರೀನಿವಾಸ್, ವೆಂಕಟೇಶಪ್ಪ, ಕೋಳ್ಳ ನಾರಾಯಣಪ್ಪ, ಆದಿನಾರಾಯಣಪ್ಪ ಮಾಸ್ಟರ್, ಸುಬ್ಬನಾರಾಯಣಪ್ಪ ಮತ್ತು ಶಿವಪ್ಪ ಅವರ ನೇತೃತ್ವದಲ್ಲಿ ಈ ತಂಡವು ದೇವಾಲಯಕ್ಕೆ ಆಗಮಿಸಿ, ದೇವಿಗೆ ಪೂಜೆ ಸಲ್ಲಿಸಿತು. ತದನಂತರ, ಮರದ ಸುತ್ತಲೂ ಸರತಿಯ ಸಾಲಿನಲ್ಲಿ ನಿಂತು ಮರ ಏರಲು ಸಿದ್ಧತೆ ಮಾಡಿಕೊಂಡರು.
ಇದನ್ನೂ ಓದಿ : ಅದ್ದೂರಿಯಾಗಿ ನಡೆದ ಸೋಮೇನಹಳ್ಳಿ ಗಂಗಾಭವಾನಿ ದೇವಿಯ ತಂಬಿಟ್ಟು ದೀಪೋತ್ಸವ….!
ಮರದ ತುದಿಯಲ್ಲಿ ಕುಳಿತ ಅಕ್ಕಸಾಲಿಗ ರಾಮಕೃಷ್ಣ ಮತ್ತು ಕುಮಾರ್ ಅವರು ನಾಲ್ಕು ದಿಕ್ಕುಗಳಲ್ಲಿ ಕಟ್ಟಿದ ಹಗ್ಗದ ಸಹಾಯದಿಂದ ಮೇಲಕ್ಕೆ ಏರಿ, ನೀರನ್ನು ಹಾಯಿಸುವ ಕಾರ್ಯವನ್ನು ಪ್ರಾರಂಭಿಸಿದರು. ಈ ವೇಳೆ ಉಪ್ಪಾರ ಚೌಡಪ್ಪ ಅವರು ಕಂಬದ ಮೇಲಿರುವವರಿಗೆ ಸಹಕಾರ ನೀಡಿದರು. ನಾಯಕ ತಳವಾರ ಜನಾಂಗದ ಯುವಕರು ಜಾರುವ ಸವಾಲನ್ನು ಸ್ವೀಕರಿಸಿದರು. ಮರವನ್ನು ಏರುವುದು, ಜಾರುವುದು ಮತ್ತು ಕೆಳಗೆ ಬೀಳುವ ಈ ಮನರಂಜನಾತ್ಮಕ ಆಟವು ಸುಮಾರು ಮೂರು ಗಂಟೆಗಳ ಕಾಲ ನಡೆಯಿತು.
Jatre – ಜನರಿಗೆ ಮನರಂಜನೆ ನೀಡಿದ ಜಾರುಟ್ಲು
ಕೊನೆಯಲ್ಲಿ, ನಾಯಕ ಜನಾಂಗದ ಲಕ್ಷ್ಮಣ ಮತ್ತು ಮಂಜುನಾಥ ಅವರು ಹಗ್ಗಗಳನ್ನು ಕಂಬಕ್ಕೆ ಕಟ್ಟಿಕೊಂಡು ಮರವನ್ನು ಏರಿ, ತುದಿಯಲ್ಲಿದ್ದ ಅಕ್ಕಸಾಲಿಗನನ್ನು ಕೆಳಗೆ ಬೀಳಿಸುವ ಪ್ರಯತ್ನ ಮಾಡಿದರು. ಅಕ್ಕಸಾಲಿಗ ಮತ್ತು ನಾಯಕ ಜನಾಂಗದವರ ನಡುವಿನ ಜಂಗಿ ಕುಸ್ತಿ ನೆರೆದಿದ್ದ ಜನರಿಗೆ ಭರ್ಜರಿ ಮನರಂಜನೆ ನೀಡಿತು. ಗ್ರಾಮದ ಯುವ ಘರ್ಜನೆ ಯುವಕ ಸಂಘದವರು ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಿದ್ದರು. ಭಕ್ತರು ಭಕ್ತಿಭಾವದಿಂದ ಗಂಗಾಭವಾನಿ ದೇವಿಯ ಆಶೀರ್ವಾದ ಪಡೆದರು.