ವೀಕೆಂಡ್ ಎಂಜಾಯ್ ಮಾಡಲು ಸ್ನೇಹಿತರೊಂದಿಗೆ ಬಂದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಕೆರೆಯಲ್ಲಿ ಈಜಲು ಹೋಗಿ ಬೆಂಗಳೂರಿನ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಇಂದಿರಾ ನಗರದ ನಿವಾಸಿ ವಿನಯ್ ರಮೇಶ್ (42) ಮೃತ ದುರ್ದೈವಿ. ವೀಕೆಂಡ್ ರಜೆ ಕಳೆಯಲು ಬೆಂಗಳೂರಿನಿಂದ ಸ್ನೇಹಿತರ ಜೊತೆಗೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಕೆರೆಯ ಪ್ರಾಕೃತಿಕ ಸೊಬಗನ್ನು ಸವಿಯಲು ಬಂದಿದ್ದಾರೆ. ಪ್ರತಿ ವಾರಾಂತ್ಯದಲ್ಲಿ ಈ ಭಾಗಕ್ಕೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುತ್ತಾರೆ. ಅದರಂತೆ ವಿನಯ್ ಹಾಗೂ ಅವರ ಸ್ನೇಹಿತರು ಸಹ ವೀಕೆಂಡ್ ಟ್ರಿಪ್ ಗೆ ಬಂದಿದ್ದಾರೆ.
ಇನ್ನೂ ವಾಟದಹೊಸಹಳ್ಳಿ ಕೆರೆಯಲ್ಲಿ ನೀರಿರುವ ಕಾರಣ ಪ್ರವಾಸಿಗರು ನೀರಿನಲ್ಲಿ ಆಟವಾಡಲು ಮುಂದಾಗುತ್ತಾರೆ. ಅದರಂತೆ ಮೃತ ವಿನಯ್ ಹಾಗೂ ಸ್ನೇಹಿತರು ಈಜಾಡಲು ಹೋಗಿದ್ದಾರೆ. ಆದರೆ ವಿನಯ್ ನೀರಿನಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಇನ್ನೂ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ರಾತ್ರಿಯಿಡೀ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಇನ್ನೂ ವಿನಯ್ ಮೃತದೇಹ ಪತ್ತೆಯಾಗಿಲ್ಲ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.