ಕರ್ನಾಟಕ ಸಿಎಂ ಸಿದ್ದರಾಮಯ್ಯನವರ ವಿರುದ್ದ ಮುಡಾ ಸೈಟು ಹಂಚಿಕೆ ಆರೋಪ ಕೇಳಿಬರುತ್ತಿದೆ. ಇದರ ಜೊತೆಗೆ ವಾಲ್ಮೀಕಿ ನಿಗಮ ಹಗರಣದ ಸದ್ದು ಸಹ ಜೋರಾಗಿದೆ. ಈ ಹಗರಣಗಳ ವಿರುದ್ದ ಬಿಜೆಪಿ ಜೋರಾಗಿಯೇ ಪ್ರತಿಭಟನೆ ನಡೆಸುತ್ತಿದೆ. ಈ ಸಂಬಂಧ ಬಿಜೆಪಿ ಮೈಸೂರು ಚಲೋ ಹಮ್ಮಿಕೊಂಡಿದ್ದು, ಇದಕ್ಕೆ ಪೊಲೀಸರು ತಡೆ ಹಾಕಿದ್ದರು. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಲಾದ್ ಜೋಷಿ (Pralhad Joshi) ಸಿದ್ದರಾಮಯ್ಯನವರ ವಿರುದ್ದ ಹರಿಹಾಯ್ದಿದ್ದಾರೆ.
ಬಿಜೆಪಿ ವತಿಯಿಂದ ಮುಡಾ ಹಗರಣದ ಸಂಬಂಧ ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಮೈಸೂರು ಚಲೋ ಹಮ್ಮಿಕೊಳ್ಳಲಾಗಿತ್ತು. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಲಾದ್ ಜೋಷಿ (Pralhad Joshi) ಮಾತನಾಡಿದರು. ಈ ವೇಳೆ ಸಿದ್ದರಾಮಯ್ಯನವರ ವಿರುದ್ದ ಜೋರು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯನವರೇ ನೀವು ನಮ್ಮನ್ನು ಬಂಧನ ಮಾಡುತ್ತೀರಾ, ಮುಡಾ ಪ್ರಕರಣದಲ್ಲಿ ನೀವೇ ಅರೆಸ್ಟ್ ಆಗಬಹುದು. ಈ ಸಂಬಂಧ ಅಗತ್ಯ ಬಿದ್ದರೇ ನಾವೂ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಸೈಟ್ ಗಳು ತಮ್ಮ ಪತ್ನಿಯ ಹೆಸರಲ್ಲಿದೆ ಅಂತಾರೆ. ನೀವು ಸಿಎಂ ಆದ ಬಳಿಕ ಅದನ್ನು ಗಮನಿಸಿ ವಾಪಸ್ಸು ಕೊಡಬೇಕಿತ್ತು. ನಿಮಗೆ ಜಮೀನು ಕೊಟ್ಟವ ಯಾರು ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ನೀವು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಇನ್ನೂ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು 1985 ರಲ್ಲಿ ಸರ್ವಾಧಿಕಾರಿಯಾಗಿದ್ದರು, ಇದೀಗ ಸಿದ್ದರಾಮಯ್ಯನವರು 2023-24 ರಲ್ಲಿ ಸರ್ವಾಧಿಕಾರಿಯಾಗಿದ್ದಾರೆ. ಹೋರಾಟ ಮಾಡೋಕು ನಮಗೆ ಹಕ್ಕು ಇಲ್ಲವೇ, ಕಾಂಗ್ರೇಸ್ ಪಕ್ಷದ ಹೈಕಮಾಂಡ್ ಗೆ ಏನಾದರೂ ಕಮಾಂಡ್ ಅನ್ನೋದು ಇದ್ದರೇ, ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಯನ್ನು ಪಡೆಯಬೇಕು. ರಾಹುಲ್ ಗಾಂಧಿಯವರು ಸಂವಿಧಾನದಡಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಹಗರಣದ ಬಗ್ಗೆ ನೀವು ಏನು ಹೇಳ್ತೀರಾ, ಕರ್ನಾಟಕದಲ್ಲಿ ನೂರಾರು ಕೋಟಿ ಹಗರಣ ನಡೆದಿದೆ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ಎಂದು ಸ್ವತಃ ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿಯೇ ಹೇಳಿದ್ದಾರೆ. ಇದರ ಬಗ್ಗೆ ನೀವೇನು ಹೇಳ್ತೀರಾ ಎಂದು ಕಿಡಿಕಾರಿದರು.
ಇದೇ ಸಮಯದಲ್ಲಿ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣದ ಬಗ್ಗೆ ಮಾತನಾಡಿದ ಜೋಶಿ, ಈ ಹಗರಣದಡಿ ಶಾಸಕ ನಾಗೇಂದ್ರ ರನ್ನು ಇಡಿ ವಶಕ್ಕೆ ಪಡೆಯಿತು. ಆದರೆ ಮತ್ತೊಬ್ಬ ಶಾಸಕ ದದ್ದಲ್ ಎಸ್.ಐ.ಟಿ ಗೆ ಹೋಗಿ ಕುಳಿತಿದ್ದಾರೆ. ಇಡಿ ಬಂಧನ ಮಾಡುತ್ತದೆ ಎಂಬ ಭಯದಿಂದ ಎಸ್.ಐ.ಟಿ ನಲ್ಲಿ ಕುಳಿತಿದ್ದಾರೆ. ಸಿದ್ದರಾಮಯ್ಯನವರು ಅವರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಕಿದರು. ಇನ್ನೂ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಎಂ ರವರಿಗೂ SIT ನೊಟೀಸ್ ನೀಡಬೇಕು. ಈ ಹಗರಣದಲ್ಲಿ ಅವರ ಪಾತ್ರದ ಬಗ್ಗೆ ಸಹ ತನಿಖೆ ನಡೆಸಬೇಕು. ಮುಡಾ ಹಗರಣದಲ್ಲೂ ಸಿಎಂ ಸಿದ್ದರಾಮಯ್ಯ ಪಾತ್ರವಿದೆ ಅವರು ವಿರುದ್ದ ನೇರ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.