ಗುಡಿಬಂಡೆ: 2024-25 ನೇ ಸಾಲಿನ ಬಜೆಟ್ ನಲ್ಲಿ ಸಮಗ್ರ ಶಿಶು ಅಭಿವೃದ್ದಿ ಯೋಜನೆಗೆ ಸಾಕಷ್ಟು ಹಣಕಾಸು ಮೀಸಲು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಸಂಘಟನೆ (CITU Protest) ವತಿಯಿಂದ ಗುಡಿಬಂಡೆ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಸಿಐಟಿಯು ಸಂಘಟನೆಯ ಭಾಗ್ಯಮ್ಮ ಮಾತನಾಡಿ, ಅಂಗನವಾಡಿ ಕೇಂದ್ರಗಳ ಮೂಲಕ ನಮ್ಮ ನೌಕರರು ಮಕ್ಕಳಲ್ಲಿನ ಅಪೌಷ್ಟಿಕತೆ ಮಾಡಿ ಹಾಗೂ ಬೆಳವಣಿಗೆ ಮಾಡುವತ್ತ ತುಂಬಾನೆ ಕೆಲಸ ಮಾಡುತ್ತಿದ್ದಾರೆ. NFHS-6 ಇದು ನೀಡಿರುವ ಮಾಹಿತಿ ಪ್ರಕಾರ, ನಮ್ಮ ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳು ಕುಂಠಿತ ಬೆಳವಣಿಗೆಯವರು ಅಂದರೆ, ಅಗತ್ಯಕ್ಕಿಂತ ಕಡಿಮೆ ತೂಕ ಮತ್ತು ಕಡಿಮೆ ಎತ್ತರದ ಬಡಕಲು ದೇಹದವರು ಆಗಿದ್ದಾರೆ. ರಕ್ತಹೀನತೆ ಹೆಚ್ಚಾಗಿ ಮಹಿಳೆಯರು ಸಾಯುತ್ತಿದ್ದಾರೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ಸರಾಸರಿ ಆರು ವರ್ಷದೊಳಗಿನ 9 ಲಕ್ಷ ಮಕ್ಕಳು ಸಾಯುತ್ತಿದ್ದಾರೆ. ಪೋಷಣ್ 2.0 ಯೋಜನೆ ಜಾರಿ ಮಾಡಲಾಗಿದೆ. ಆದರೆ ಯೋಜನೆ ಜಾರಿಗಾಗಿ ಬೇಕಾಗುವಂತಹ ಸೌಕರ್ಯಗಳು ಹಾಗೂ ಪೌಷ್ಟಿಕಾಂಶದ ಅವಶ್ಯಕತೆಗಳಿಗೆ ಅನುದಾನ ಕೊಡುತ್ತಿಲ್ಲ. ಜೊತೆಗೆ ಎನ್.ಡಿ.ಎ ಸರ್ಕಾರಗಳ ಬಜೆಟ್ ಗಳಲ್ಲಿ ಎಸ್.ಎನ್.ಪಿ ಹಾಗೂ ಅಂಗನವಾಡಿ ನೌಕರರ, ಸಹಾಯಕರಿಗೆ ಹೆಚ್ಚು ಮಾಡಿದ ಸಂಭಾವನೆ, ಕಟ್ಟಡಗಳ ಪುನರ್ ನಿರ್ಮಾಣ ಅನುದಾನಗಳನ್ನು ಸಹ ಕೊಟ್ಟಿಲ್ಲ. ಇದರಿಂದಾಗಿ ಅನೇಕ ಅಂಗನವಾಡಿಗಳ ಮೂಲ ಸೇವೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.
ಸುಮಾರು ಐದು ದಶಕಗಳಿಂದ ದುಡಿಯುತ್ತಿರುವ 26 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಐಕಿಯರನ್ನು ಕಾರ್ಮಿಕರನ್ನಾಗಿ ಗುರ್ತಿಸಲು ಸಹ ಸರ್ಕಾರ ಸಿದ್ದವಿಲ್ಲ. ಆದ್ದರಿಂದ ಅಂಗನವಾಡಿ ನೌಕರರನ್ನು ಒಳಗೊಂಡಂತೆ ಎಲ್ಲಾ ಯೋಜನಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಗುರ್ತಿಸಿ ಕನಿಷ್ಟ ವೇತನ, ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ನೀಡಬೇಕು. ಇದೆಲ್ಲರದ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು ಗ್ರಾಚ್ಯುಟಿಗೆ ಅರ್ಹರು ಎಂದು ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಅದನ್ನು ಸಹ ಸರ್ಕಾರ ಗಮನಿಸಿ ನಿಬಂಧನೆಗಳನ್ನು ರಚಿಸಬೇಕು. ಇದೇ ತಿಂಗಳ ಬಜೆಟ್ ನಲ್ಲಿ ಮೂಲಭೂತ ಸೇವೆಗಳಾದ ಪೌಷ್ಟಿಕಾಂಶ, ಆರೋಗ್ಯ ಮತ್ತು ಶಿಕ್ಷಣದ ಅರ್ಹತೆಯನ್ನು ಖಾತ್ರಿಪಡಿಸಿಕೊಳ್ಳಲು ಬಜೆಟ್ ಹಂಚಿಕೆಯನ್ನು ಹೆಚ್ಚಿಸುವಂತೆ ಆಗ್ರಹಿಸಲಾಯಿತು.
ಈ ವೇಳೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು. ಈ ಸಮಯದಲ್ಲಿ ಸಿಐಟಿಯು ಸಂಘಟನೆಯ ತಾಲೂಕು ಘಟಕದ ಪದಾಧಿಕಾರಿಗಳು ಸೇರಿದಂತೆ ಅಂಗನವಾಡಿ ನೌಕರರು ಹಾಗೂ ಕಾರ್ಯಕರ್ತೆಯರು ಹಾಜರಿದ್ದರು.