ಹಲ್ಲು ನೋವಿನಿಂದ ಪಾರಾಗಲು ಆಸ್ಪತ್ರೆಗೆ ಹೋದರೆ, ಅಲ್ಲಿ ವೈದ್ಯರು ಕೀಳಬೇಕಾದ ಹಲ್ಲನ್ನು ಬಿಟ್ಟು, ಪಕ್ಕದಲ್ಲಿದ್ದ ಒಳ್ಳೆಯ ಹಲ್ಲನ್ನೇ ಕಿತ್ತು ಕಳಿಸಿದರೆ ಹೇಗಿರುತ್ತದೆ ಊಹಿಸಿ! ರಾಜಸ್ಥಾನದ ಅಜ್ಮೀರ್ನಲ್ಲಿರುವ (Ajmer Hospital Case) ಜವಾಹರಲಾಲ್ ನೆಹರು (JLN) ಆಸ್ಪತ್ರೆಯಲ್ಲಿ ಇಂಥದ್ದೇ ಒಂದು ಆಘಾತಕಾರಿ ಘಟನೆ ನಡೆದಿದ್ದು, “ನನ್ನ ಜೊತೆ ದೊಡ್ಡ ಅನ್ಯಾಯವಾಗಿದೆ” ಎಂದು ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದಾರೆ. ಚಿಕಿತ್ಸೆ ವೇಳೆ ವೈದ್ಯರು ತೋರಿದ ನಿರ್ಲಕ್ಷ್ಯದ ವಿರುದ್ಧ ರೋಗಿ ಹಾಗೂ ಅವರ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ajmer Hospital Case – ನೋವಿಗೆ ಪರಿಹಾರ ಹುಡುಕಿ ಹೋದರೆ, ಕಾದಿತ್ತು ಮತ್ತೊಂದು ಆಘಾತ!
ಅಜ್ಮೀರ್ನ ನಾಗಫಣಿ ನಯೀ ಸಡಕ್ ಪ್ರದೇಶದ ನಿವಾಸಿ ಶಬಾನಾ ಖಾನ್ ಈ ದುರ್ಘಟನೆಗೆ ಒಳಗಾದವರು. ಕಳೆದ ಎರಡು ತಿಂಗಳಿನಿಂದ ಅವರು ತೀವ್ರವಾದ ಹಲ್ಲು ನೋವಿನಿಂದ ನರಳುತ್ತಿದ್ದರು. ಇದೇ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿದಾಗ, ಒಂದು ಹಲ್ಲು ಸಂಪೂರ್ಣವಾಗಿ ಹುಳುಕಾಗಿದ್ದು, ಅದನ್ನು ತೆಗೆಯಬೇಕು ಎಂದು ವೈದ್ಯರು ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಶಬಾನಾ ಅವರು ತಮ್ಮ ಪತಿಯೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದರು. ಆದರೆ, ಹಲ್ಲು ಕೀಳುವ ಪ್ರಕ್ರಿಯೆಯಲ್ಲಿ ವೈದ್ಯೆ, ಹಾಳಾಗಿದ್ದ ಹಲ್ಲಿನ ಬದಲು ಯಾವುದೇ ಸಮಸ್ಯೆಯಿಲ್ಲದ, ಗಟ್ಟಿಯಾದ (Ajmer Hospital Case) ಹಲ್ಲನ್ನು ಕಿತ್ತು ಹಾಕಿದ್ದಾರೆ ಎಂದು ಶಬಾನಾ ಗಂಭೀರವಾಗಿ ಆರೋಪಿಸಿದ್ದಾರೆ.
ಮಾತುಕತೆಯಲ್ಲಿ ಮುಳುಗಿದ್ದ ವೈದ್ಯೆ: ರೋಗಿಯ ಕೂಗು ಕೇಳಲೇ ಇಲ್ಲ!
ಈ ಅಚಾತುರ್ಯ ಹೇಗೆ ನಡೆಯಿತು ಎಂಬುದನ್ನು ವಿವರಿಸಿರುವ ಶಬಾನಾ ಅವರ ಮಾತುಗಳು ಆಸ್ಪತ್ರೆಯ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಿವೆ. ಹಲ್ಲು ಕೀಳುವಾಗ ತಮಗೆ ವಿಪರೀತ ನೋವಾಗುತ್ತಿತ್ತು. ಆ ಕ್ಷಣದಲ್ಲಿ, “ನೀವು ಬೇರೆ ಹಲ್ಲು ಕೀಳುತ್ತಿದ್ದೀರಿ, ಆ ಹಲ್ಲು ನನಗೆ ನೋವು ಕೊಡುತ್ತಿಲ್ಲ” ಎಂದು ತಾವು ಪದೇ ಪದೇ ಹೇಳಿದರೂ, ವೈದ್ಯೆ ಅದಕ್ಕೆ ಕಿವಿಕೊಡಲಿಲ್ಲ ಎಂದು ಅವರು ದೂರಿದ್ದಾರೆ. ರೋಗಿ ನೀಡಿದ ದೂರಿನ ಪ್ರಕಾರ, ಚಿಕಿತ್ಸೆ ನೀಡುತ್ತಿದ್ದ ಆ ಮಹಿಳಾ ವೈದ್ಯೆ ತಮ್ಮ ಸಹೋದ್ಯೋಗಿಗಳೊಂದಿಗೆ ಹರಟೆಯಲ್ಲಿ ಮಗ್ನರಾಗಿದ್ದರು. ಅವರ ಗಮನವೆಲ್ಲಾ ಮಾತಿನ ಮೇಲಿದ್ದಿದ್ದೇ ಈ ಅನಾಹುತಕ್ಕೆ ಕಾರಣ ಎನ್ನಲಾಗಿದೆ. Read this also : ನೋಯ್ಡಾದಲ್ಲಿ ನಡುರಸ್ತೆಯಲ್ಲೇ ಮಹಿಳೆಯರಿಗೆ ನಡುಕ ಹುಟ್ಟಿಸಿದ ಕಿರಾತಕರು: ಕಾರಿನಲ್ಲಿ ಬೆತ್ತಲೆಯಾಗಿ ಆಟೋ ಬೆನ್ನಟ್ಟಿದ ಕಾಮುಕರು!
ಸಿಬ್ಬಂದಿಯಿಂದ ಉದ್ಧಟತನ, ಹಳೆಯ ಘಟನೆ ಬಿಚ್ಚಿಟ್ಟ ಮಹಿಳೆ
ಹುಳುಕು ಹಲ್ಲಿನ ಬದಲು ಗಟ್ಟಿ ಹಲ್ಲು ಕಿತ್ತ ವಿಷಯ (Ajmer Hospital Case) ತಿಳಿಯುತ್ತಿದ್ದಂತೆ ಶಬಾನಾ ಹಾಗೂ ಅವರ ಕುಟುಂಬಸ್ಥರು ಆಸ್ಪತ್ರೆಯೊಳಗೆ ಪ್ರತಿಭಟನೆಗೆ ಇಳಿದರು. ಆದರೆ, ತಪ್ಪನ್ನು ತಿದ್ದಿಕೊಳ್ಳುವ ಅಥವಾ ಸಮಾಧಾನ ಮಾಡುವ ಬದಲು, ಆಸ್ಪತ್ರೆಯ ಸಿಬ್ಬಂದಿ ರೋಗಿಯ ಸಂಬಂಧಿಕರ ಜೊತೆಯೇ ವಾಗ್ವಾದಕ್ಕಿಳಿದು ಒರಟಾಗಿ ವರ್ತಿಸಿದ್ದಾರೆ. ಇದರಿಂದ ಆಸ್ಪತ್ರೆಯ ಆವರಣದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ.
ಅರಿವಳಿಕೆಯೂ ಇಲ್ಲದೆ ಹಲ್ಲು ಕಿತ್ತಿದ್ದರು! ಇದೇ ವೇಳೆ ಶಬಾನಾ ಅವರು ಆಸ್ಪತ್ರೆಯ ಮತ್ತೊಂದು ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಅವರ ಮತ್ತೊಂದು ಹಲ್ಲನ್ನು ಕೀಳಲಾಗಿತ್ತು. ಆಗ ವೈದ್ಯರು ಯಾವುದೇ ಅರಿವಳಿಕೆ (Anesthesia) ಚುಚ್ಚುಮದ್ದು ನೀಡದೆ ಹಲ್ಲು ಕಿತ್ತಿದ್ದರಿಂದ, ತಾವು ನರಕಯಾತನೆ ಅನುಭವಿಸಿದ್ದಾಗಿ ಅವರು ತಿಳಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ: ತನಿಖೆಗೆ ಆದೇಶ
ಈ ಘಟನೆಯ (Related video here) ಬಳಿಕ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಶಬಾನಾ ಅವರು ಆಸ್ಪತ್ರೆಯ ಅಧೀಕ್ಷಕರಾದ ಡಾ. ಅರವಿಂದ್ ಖರೆ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ (Ajmer Hospital Case) ಆಸ್ಪತ್ರೆಯ ಉಪ ಅಧೀಕ್ಷಕ ಡಾ. ಅಮಿತ್ ಯಾದವ್, “ಮಹಿಳಾ ವೈದ್ಯೆಯ ವಿರುದ್ಧ ನಿರ್ಲಕ್ಷ್ಯ ತೋರಿದ ಹಾಗೂ ತಪ್ಪು ಹಲ್ಲು ಕಿತ್ತಿರುವ ದೂರು ನಮಗೆ ಬಂದಿದೆ. ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಹಾಗೂ ನಿಯಮಾವಳಿಗಳ ಪ್ರಕಾರ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.
