Local News – ಚಿಕ್ಕಬಳ್ಳಾಪುರ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ಪುಲಸಾನಿವೊಡ್ಡು ಗ್ರಾಮದ ಬಳಿ ಮ್ಯಾಕ್ಸಿನ್ ಕಚೇರಿ (ಸ್ಪೋಟಕಗಳ ದಾಸ್ತಾನು ಘಟಕ) ಸ್ಥಾಪನೆಗಾಗಿ ಪುಲಸಾನಿವೊಡ್ಡು ಗ್ರಾಮದ 35/5 ಸನಂ ನಲ್ಲಿರುವ 1.12 ಎಕರೆ ಜಮೀನು ಭೂ ಪರಿವರ್ತನೆ ಮಾಡಿದ್ದು, ಈ ಸಂಬಂಧ ಸದರಿ ಸ್ಥಳವನ್ನು ಜಿಲ್ಲಾಧಿಕಾರಿ ಪಿ.ರವೀಂದ್ರ ರವರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು.
ಗುಡಿಬಂಡೆ ತಾಲೂಕಿನ ಪುಲಸಾನಿವೊಡ್ಡು ಗ್ರಾಮದ ಬಳಿ ಮ್ಯಾಕ್ಸಿನ್ ಕಚೇರಿ (ಸ್ಪೋಟಕಗಳ ದಾಸ್ತಾನು ಘಟಕ) ಸ್ಥಾಪನೆಗಾಗಿ ಜಮೀನನ್ನು ಭೂ ಪರಿವರ್ತನೆ ಮಾಡಲಾಗಿತ್ತು. ಈ ಸಂಬಂಧ ವಿವಿಧ ಇಲಾಖೆಗಳ ವರದಿಯ ಮೇರೆಗೆ ಎನ್.ಒ.ಸಿ ಸಹ ನೀಡಲಾಗಿತ್ತು. ಆದರೆ ಸ್ಥಳೀಯರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಲ್ಲಿಸಿದ್ದರು. ಈ ಸಂಬಂಧ ನ್ಯಾಯಾಲಯ ವಾದಿ ಹಾಗೂ ಪ್ರತಿವಾದಿಗಳಿಬ್ಬರ ವಾದವನ್ನು ಆಲಿಸಬೇಕು. ಅದನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಾಡಬೇಕು ಎಂದು ಆದೇಶ ನೀಡಿದ್ದು, ಅದರಂತೆ ಜಿಲ್ಲಾಧಿಕಾರಿ ರವೀಂಧ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Local News – ಹಲವು ಗ್ರಾಮಸ್ಥರ ವಿರೋಧ
ಇನ್ನೂ ಈ ಜಾಗದಲ್ಲಿ ಸ್ಪೋಟಕ ವಸ್ತುಗಳನ್ನು ದಾಸ್ತಾನು ಮಾಡುವುದರಿಂದ ನಮ್ಮ ಗ್ರಾಮಸ್ಥರಿಗೆ ಸಮಸ್ಯೆಯಾಗಲಿದೆ. ಏನಾದರೂ ಅನಾಹುತಗಳ ಸಂಭವಿಸಿದರೇ ಅದಕ್ಕೆ ಯಾರು ಹೊಣೆ. ಈ ಸ್ಪೋಟಕಗಳನ್ನು ಸಾಗಿಸಲು ಗ್ರಾಮದ ಮೂಲಕ ಸಾಗಬೇಕು. ಇದರಿಂದ ನಾವೆಲ್ಲರೂ ಭಯದ ವಾತಾವರಣದಲ್ಲಿ ಬದುಕಬೇಕಿದೆ. ಅಷ್ಟೇಅಲ್ಲದೇ ಉದ್ದೇಶಿತ ಜಾಗದ ಅಕ್ಕ ಪಕ್ಕದಲ್ಲಿ ಸಣ್ಣ ರೈತರಿದ್ದಾರೆ. ಈ ಜಾಗದಲ್ಲಿ ಅನುಮತಿ ನೀಡಿದರೇ ನಮಗೆ ಸಮಸ್ಯೆಯಾಗುತ್ತದೆ ಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.
Local News – ಹಲವು ಗ್ರಾಮಸ್ಥರು ಪರ
ಇನ್ನೂ ಈ ಜಾಗದಲ್ಲಿ ಸ್ಪೋಟಕ ವಸ್ತುಗಳನ್ನು ದಾಸ್ತಾನು ಮಾಡುವುದರಿಂದ ಯಾವುದೇ ಸಮಸ್ಯೆಯಿಲ್ಲ. ನಮ್ಮ ಜಾಗದಲ್ಲಿಯೇ ನಾವು ಸ್ಥಾಪನೆ ಮಾಡಲು ಭೂ ಪರಿವರ್ತನೆ ಮಾಡಿಸಿ, ಖಾಸಗಿಯವರಿಗೆ ಗುತ್ತಿಗೆ ನೀಡುತ್ತಿದ್ದೇವೆ. ಬೇಕೆಂತಲೇ ಕೆಲವರು ನಮಗೆ ವಿರೋಧ ಮಾಡುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿದ್ದೇವೆ ಎಂದು ಕೆಲವರು ಸ್ಪೋಟಕ ವಸ್ತುಗಳನ್ನು ದಾಸ್ತಾನು ಕಟ್ಟಡದ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Read this also : ಯಾರೂ ನೋಡದಂತೆ ನಿಮ್ಮ ವಾಟ್ಸ್ಆ್ಯಪ್ ಚಾಟ್ ಹೈಡ್ ಮಾಡುವುದು ಹೇಗೆ? ಸುಲಭ ವಿಧಾನ ಇಲ್ಲಿದೆ..!
Local News – ಜಿಲ್ಲಾಧಿಕಾರಿ ಹೇಳಿದ್ದಿಷ್ಟು
ಇನ್ನೂ ಈ ಸಂಬಂಧ ಜಿಲ್ಲಾಧಿಕಾರಿ ರವೀಂದ್ರ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ತಾಲೂಕಿನ ಪುಲಸಾನಿವೊಡ್ಡು ಗ್ರಾಮದ ಸರ್ವೇ ನಂ. 34/5 ರ 1.12ಗುಂಟೆ ಜಮೀನಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮ್ಯಾಕ್ಸಿನ್ ಕಚೇರಿ (ಸ್ಪೋಟಕಗಳ ದಾಸ್ತಾನು ಘಟಕ) ಕಟ್ಟಡ ನಿರ್ಮಾಣ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು ಎಂದು ಹಂಪಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ 4-5 ಗ್ರಾಮಸ್ಥರು ಉಚ್ಚ ನ್ಯಾಯಾಲಯದ ಮೊರೆಹೋಗಿದ್ದರು. ನ್ಯಾಯಾಲಯವು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರ ಸುರಕ್ಷತೆ ಹಿತದೃಷ್ಟಿಯಿಂದ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ನಿರ್ದೇಶನ ನೀಡಿತ್ತು. ಅದಂತೆ ಸ್ಥಳ ಪರಿಶೀಲನೆ ನಡೆಸಲು ತಹಶೀಲ್ದಾರ್, ತಾಲ್ಲೂಕು ಪಂಚಾಯತಿ ಇಓ, ಲೋಕೋಪಯೋಗಿ ಇಲಾಖೆ, ಭೂ ಮಾಪನಾ ಇಲಾಖೆ, ಪರಿಸರ ಇಲಾಖೆ ಸೇರಿದಂತೆ ಇತರೆ ಇಲಾಖೆ ತಂಡ ಪರಿಶೀಲನೆ ನಡೆಸಿದೆವು. ವಾದಿಗಳ ಮತ್ತು ಪ್ರತಿವಾದಿಗಳ ಇಬ್ಬರು ನೀಡಿರುವ ಹೇಳಿಕೆಗಳನ್ನು ರೆಕಾರ್ಡ್ ಮಾಡಿ ಉಚ್ಚನ್ಯಾಯಾಲಕ್ಕೆ ವರದಿಯನ್ನು ಸಲ್ಲಿಸುತ್ತೇವೆ ಎಂದರು.
Local News – ಸ್ಥಳದಲ್ಲಿದ್ದ ಅಧಿಕಾರಿಗಳು
ಯಾವುದೇ ಗಲಾಟೆಯಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತು ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸಿಗ್ಬತುಲ್ಲ, ತಾಲ್ಲೂಕು ಪಂಚಾಯತಿ ಇಓ ನಾಗಮಣಿ, ಎಡಿಎಲ್ ಆರ್ ಸುಬ್ರಮಣಿ, ಲೋಕೋಪಯೋಗಿ ಇಲಾಖೆಯ ಪೂಜಪ್ಪ, ಗುಡಿಬಂಡೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಗಣೇಶ್, ರಮೇಶ್, ಪೊಲೀಸ್ ಸಿಬ್ಬಂದಿ, ಹಂಪಸಂದ್ರ ಗ್ರಾ,ಪಂ ಪಿಡಿಓ ಮಮತ, ಪರಿಸರ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಪುಲಸಾನಿವೊಡ್ಡು, ನಲ್ಲಗೊಂಡಯ್ಯಗಾರಹಳ್ಳಿ, ಹಂಪಸಂದ್ರ ಗ್ರಾಮಸ್ಥರು ಸೇರಿದಂತೆ ಹಲವರು ಇದ್ದರು.