Tourism – ನೂರಾರು ವರ್ಷಗಳ ಇತಿಹಾಸ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ಪ್ರಯತ್ನ ನಡೆಸುತ್ತಿದ್ದು, ಸುಮಾರು 200 ಕೋಟಿ ವೆಚ್ಚದಲ್ಲಿ ಡಿಪಿಆರ್ ತಯಾರಿಸಿ, ಜೂ 19 ರಂದು ಚಿಕ್ಕಬಳ್ಳಾಪುರದಲ್ಲಿ ನಡೆಯಲಿರುವ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅನುಮೋದನೆ ಮಾಡಿಸಲು ಪ್ರಯತ್ನ ಮಾಡುವುದಾಗಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
Tourism – ಪ್ರವಾಸೋದ್ಯಮದ ಅಭಿವೃದ್ದಿಗಾಗಿ ಪರಿಶೀಲನೆ
ಗುಡಿಬಂಡೆ ತಾಲೂಕಿನ ವರ್ಲಕೊಂಡ, ಸುರಸದ್ಮಗಿರಿ, ಅಮಾನಿಬೈರ ಸಾಗರ, ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟ ಮೊದಲಾದ ಐತಿಹಾಸಿಕ ತಾಣಗಳಿಗೆ ಶಾಸಕ ಸುಬ್ಬಾರೆಡ್ಡಿಯವರು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸ್ಥಳೀಯ ಮಾಹಿತಿಯನ್ನು ಸಂಗ್ರಹಿಸಲಾಯಿತು. ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 200 ಕೋಟಿ ವೆಚ್ಚದಲ್ಲಿ ಡಿಪಿಆರ್ ತಯಾರಿಸಿ ಜೂ.19 ರಂದು ಚಿಕ್ಕಬಳ್ಳಾಪುರದಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಮಂಡನೆ ಮಾಡುವುದಾಗಿ ಹಾಗೂ ಅನುಮೋದನೆ ಮಾಡಿಸುವುದಾಗಿ ಶಾಸಕರು ಭರವಸೆ ನೀಡಿದರು.
Tourism – 200 ಕೋಟಿ ರೂ.ಗಳ ಡಿಪಿಆರ್ ಸಿದ್ಧತೆ
ಇದೇ ಸಮಯದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಸುಮಾರು ವರ್ಷಗಳಿಂದ ಗುಡಿಬಂಡೆ ತಾಲೂಕಿನ ಜನತೆ ಗುಡಿಬಂಡೆಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ಹಾಗೂ ಅಭಿವೃದ್ದಿ ಮಾಡಲು ಬೇಡಿಕೆಯಿಡುತ್ತಿದ್ದಾರೆ. ಕೆಲವೊಂದು ಕಾರಣಗಳಿಂದ ಇದು ತಡವಾಗಿತ್ತು. ಇದೀಗ ಪ್ರವಾಸೋದ್ಯಮ ಇಲಾಖೆಯ ಸಚಿವರ ಸೂಚನೆಯಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಗುಡಿಬಂಡೆಗೆ ಭೇಟಿ ನೀಡಿ ಕೆಲವೊಂದು ತಾಣಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಡಿಪಿಆರ್ ಸಹ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜೂನ್ 19 ರಂದು ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಸಭೆಯಲ್ಲಿಯೇ ಈ ಡಿಪಿಆರ್ ಅನುಮೋದನೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗುಡಿಬಂಡೆ ಅಮಾನಿ ಬೈರಸಾಗರ ಕೆರೆಯಲ್ಲಿ ಬೋಟಿಂಗ್, ಸುರಸದ್ಮಗಿರಿ ಬೆಟ್ಟದ ಅಭಿವೃದ್ದಿ, ವರ್ಲಕೊಂಡ ಬೆಟ್ಟದ ಭಾಗದಲ್ಲಿ ಅಭಿವೃದ್ದಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
Tourism – ಏನೆಲ್ಲಾ ಅಭಿವೃದ್ಧಿ ನಿರೀಕ್ಷೆ?
ಮೊದಲ ಹಂತವಾಗಿ ಈ ಎಲ್ಲಾ ಕಾಮಗಾರಿಗಳನ್ನು ಕೈಗೊಂಡ ಬಳಿಕ ನಂತರದಲ್ಲಿ ಸುರಸದ್ಮಗಿರಿ ಬೆಟ್ಟೆದಿಂದ ವಿದ್ಯಾಗಿರ ಬೆಟ್ಟಕ್ಕೆ ರೋಪ್ ವೇ ಸೇರಿದಂತೆ ಮತ್ತಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಯಾದರೇ, ಗುಡಿಬಂಡೆಯ ಅಭಿವೃದ್ದಿಯಾಗುವುದರ ಜೊತೆಗೆ ಉದ್ಯೋಗಾವಕಾಶಗಳು, ವ್ಯಾಪಾರ ಅಭಿವೃದ್ದಿ ಎಲ್ಲವೂ ಅಭಿವೃದ್ದಿಯಾಗುತ್ತದೆ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
Read this also : ₹1 ಕೋಟಿ ವೆಚ್ಚದಲ್ಲಿ ಸೇತುವೆ ಮತ್ತು ಚೆಕ್ ಡ್ಯಾಂ ನಿರ್ಮಾಣಕ್ಕೆ ಶಾಸಕರಿಂದ ಭೂಮಿ ಪೂಜೆ
ಸುಮಾರು ವರ್ಷಗಳಿಂದ ಗುಡಿಬಂಡೆ ಭಾಗದ ಜನತೆಯ ಅತಿ ದೊಡ್ಡ ಕನಸಾದ ಪ್ರವಾಸೋದ್ಯಮ ಅಭಿವೃದ್ದಿಯ ಕನಸಿಗೆ ಜೂ.19 ರಂದು ನಡೆಯಲಿರುವ ಸಿಎಂ ಅಧ್ಯಕ್ಷತೆಯ ಕ್ಯಾಬಿನೆಟ್ ಸಭೆಯಲ್ಲಿ ಅನುಮತಿ ದೊರೆಯಲಿ ಎಂಬುದು ಸ್ಥಳೀಯರ ಆಶಯ ಹಾಗೂ ಪ್ರಮುಖ ಬೇಡಿಕೆಯಾಗಿದೆ. ಈ ವೇಳೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಅನುಪಮ, ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾ.ಪಂ ಇಒ ನಾಗಮಣಿ, ಪಪಂ ಅಧ್ಯಕ್ಷ ವಿಕಾಸ್, ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಕೇಂದ್ರದ ಯಶ್ವಂತ್ ಸೇರಿದಂತೆ ಸ್ಥಳೀಯ ಮುಖಂಡರುಗಳು ಹಾಜರಿದ್ದರು.