Live In Relationship ನಲ್ಲಿದ್ದಾಗ ನೀಡಿದ್ದ ಹಣ ಮತ್ತು ಆಭರಣಗಳನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ ಯುವಕನಿಗೆ, ಆತನ ಮಾಜಿ ಪ್ರೇಯಸಿ ಮತ್ತು ಆಕೆಯ ಸಹಚರರು ಥಳಿಸಿ, ವಿಷ ಸೇವಿಸಲು ಒತ್ತಾಯಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ (Uttar Pradesh) ಹಮೀರ್ಪುರದಲ್ಲಿ ನಡೆದಿದೆ.

Live in Relationship – ಘಟನೆಯ ಹಿನ್ನೆಲೆ:
ಹಮೀರ್ಪುರದ ನಿವಾಸಿ ಶೈಲೇಂದ್ರ ಗುಪ್ತಾ ಈ ಘಟನೆಯಲ್ಲಿ ಬಲಿಯಾಗಿದ್ದಾರೆ. ಶೈಲೇಂದ್ರ ಮಹೋಬಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು ನಾಲ್ಕು ವರ್ಷಗಳ ಹಿಂದೆ ಅವರು ಕಾಲಿಪಹರಿ ಗ್ರಾಮದ ಒಬ್ಬ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಈ ಸಮಯದಲ್ಲಿ ಶೈಲೇಂದ್ರ ಮಹಿಳೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ಕೊಟ್ಟಿದ್ದರು. ಅಲ್ಲದೆ, 4 ಲಕ್ಷ ರೂಪಾಯಿ ನಗದು ಹಣವೂ ನೀಡಿದ್ದರು. ಆದರೆ, ಇತ್ತೀಚೆಗೆ ಮಹಿಳೆ ಬೇರೊಬ್ಬನ ಸಂಪರ್ಕದಲ್ಲಿದ್ದಳು. ಇದರಿಂದ ಶೈಲೇಂದ್ರ ಮತ್ತು ಮಹಿಳೆಯ ನಡುವೆ ದೂರ ಉಂಟಾಯಿತು. ನಂತರ, ಶೈಲೇಂದ್ರ ತಮ್ಮಿಂದ ಕೊಟ್ಟಿದ್ದ ಹಣ ಮತ್ತು ಆಭರಣಗಳನ್ನು ಹಿಂತಿರುಗಿಸುವಂತೆ ಮಹಿಳೆಗೆ ಒತ್ತಾಯಿಸಲು ಶುರು ಮಾಡಿದ ಎನ್ನಲಾಗಿದೆ.
Live in Relationship – ವಿಷ ಕುಡಿಸಿದ ಮಾಜಿ ಪ್ರೇಯಸಿ?
ಇನ್ನೂ ಶೈಲೇಂದ್ರ ತನ್ನ ಮಾಜಿ ಪ್ರೇಯಸಿಗೆ ನೀಡಿದ್ದ ಹಣ ಮತ್ತು ಆಭರಣಗಳನ್ನು ವಾಪಸ್ ನೀಡುವಂತೆ ಒತ್ತಾಯಿಸುತ್ತಿದ್ದ. ಬಳಿಕ ಹಣ ಹಾಗೂ ಆಭರಣಗಳನ್ನು ಪಡೆಯಲು ತನ್ನ ಮಾಜಿ ಪ್ರೇಯಸಿಗೆ ಮನೆಗೆ ತೆರಳಿದ್ದಾಗ, ಮಹಿಳೆ ಹಾಗೂ ಆಕೆಯ ಸಹಚರರಾದ ಸದಾಬ್ ಬೇಗ್, ದೀಪಕ್ ಹಾಗೂ ಹ್ಯಾಪಿ ಎಂಬುವವರು ಸೇರಿಕೊಂಡು ಶೈಲೇಂದ್ರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ವಿಷ ಕುಡಿಸಲು ಒತ್ತಾಯಿಸಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಇನ್ನೂ ಯುವಕನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಘಟನೆ ಸಂಬಂಧ ಶೈಲೇಂದ್ರ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ಮಹಿಳೆ ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ಹಾಗೂ ಹಣ-ಆಭರಣ ಹಿಂದಿರುಗಿಸಲು ಒತ್ತಾಯಿಸಿದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಬೆದರಿಕೆ ಹಾಕುತ್ತಿದ್ದಳು ಎಂಬ ಆರೋಪವನ್ನು ಮುಂದಿಟ್ಟಿದ್ದಾನೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.