ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಮತದಾರರ ಮೇಲೆ ಉಚಿತ ಕೊಡುಗೆಗಳ ಸುರಿಮಳೆಗರೆಯುವುದು ಸಾಮಾನ್ಯವಾಗಿದೆ. ಆದರೆ, ಇಂತಹ “ಉಚಿತ ಗ್ಯಾರಂಟಿ” ಯೋಜನೆಗಳು ದೇಶದ ಅಭಿವೃದ್ಧಿಗೆ ಮಾರಕ ಎಂದು (Supreme Court) ಸುಪ್ರೀಂಕೋರ್ಟ್ ಇಂದು ಕಳವಳ ವ್ಯಕ್ತಪಡಿಸಿದೆ. ರಾಜ್ಯಗಳು ಹಂಚುತ್ತಿರುವ ಈ ಕೊಡುಗೆಗಳು ಆರ್ಥಿಕ ಶಿಸ್ತನ್ನು ಹದಗೆಡಿಸುತ್ತಿವೆ ಎಂದು ನ್ಯಾಯಾಲಯ ಎಚ್ಚರಿಸಿದೆ.

Supreme Court – ರಾಜ್ಯಗಳ ಆರ್ಥಿಕ ಸ್ಥಿತಿಗತಿಯ ಬಗ್ಗೆ ತೀವ್ರ ಅಸಮಾಧಾನ
ಪ್ರಕರಣವೊಂದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಇತರ ನ್ಯಾಯಮೂರ್ತಿಗಳನ್ನೊಳಗೊಂಡ ಪೀಠವು ರಾಜ್ಯಗಳ ಇಂದಿನ ಪರಿಸ್ಥಿತಿಯನ್ನು ಕಂಡು ತೀವ್ರ ಬೇಸರ ವ್ಯಕ್ತಪಡಿಸಿತು. ಈಗಾಗಲೇ ದೇಶದ ಬಹುತೇಕ ರಾಜ್ಯಗಳು ಭಾರೀ ನಷ್ಟದಲ್ಲಿವೆ. ಇಂತಹ ಸಂದರ್ಭದಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕೆಲಸಗಳಿಗೆ ಹಣ ವಿನಿಯೋಗಿಸುವ ಬದಲು, ಕೇವಲ ಮತ ಗಳಿಕೆಗಾಗಿ ಉಚಿತ ಸೌಲಭ್ಯಗಳನ್ನು ಘೋಷಿಸುತ್ತಿರುವುದು ಸರಿಯಲ್ಲ ಎಂದು ನ್ಯಾಯಾಲಯ ಟೀಕಿಸಿದೆ.
ಬಡವರು ಮತ್ತು ಶ್ರೀಮಂತರ ನಡುವಿನ ವ್ಯತ್ಯಾಸ ಮರೆತ ಯೋಜನೆಗಳು
ಸಮಾಜದ ಅತ್ಯಂತ ಕೆಳಸ್ತರದಲ್ಲಿರುವ, ನಿಜವಾಗಿಯೂ ಸಹಾಯದ ಅಗತ್ಯವಿರುವವರಿಗೆ ನೆರವು ನೀಡುವುದನ್ನು ನ್ಯಾಯಾಲಯ (Supreme Court) ಸ್ವಾಗತಿಸಿದೆ. ಆದರೆ, ಅರ್ಹತೆಯ ಮಾನದಂಡವಿಲ್ಲದೆ ಶ್ರೀಮಂತ ಮತ್ತು ಬಡವರಿಬ್ಬರಿಗೂ ಉಚಿತ ವಸ್ತುಗಳನ್ನು ಹಂಚುವುದು ತಪ್ಪು ನೀತಿ ಎಂದು ಸುಪ್ರೀಂ ಹೇಳಿದೆ. ಎಲ್ಲವನ್ನೂ ಉಚಿತವಾಗಿ ನೀಡುತ್ತಾ ಹೋದರೆ ಜನರಲ್ಲಿ ಕೆಲಸ ಮಾಡುವ ಮನೋಭಾವ ಮತ್ತು ಶ್ರಮದ ಸಂಸ್ಕೃತಿ ಕಡಿಮೆಯಾಗುತ್ತದೆ ಎಂಬ ಆತಂಕವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.
ತಮಿಳುನಾಡು ವಿದ್ಯುತ್ ಮಂಡಳಿಗೆ ಸುಪ್ರೀಂ ಚಾಟೇಟು
ವಿಚಾರಣೆಯ ಸಂದರ್ಭದಲ್ಲಿ ತಮಿಳುನಾಡು ವಿದ್ಯುತ್ ಮಂಡಳಿಯ ನಡೆಯನ್ನು ನ್ಯಾಯಾಲಯ (Supreme Court) ಕಠಿಣವಾಗಿ ಖಂಡಿಸಿತು. ಜನರಿಗೆ ನಿರಂತರವಾಗಿ ಉಚಿತ ವಿದ್ಯುತ್ ಭರವಸೆ ನೀಡುತ್ತಿರುವ ಮಂಡಳಿಯ ಆರ್ಥಿಕ ಹೊರೆಯ ಬಗ್ಗೆ ಪ್ರಶ್ನಿಸಲಾಯಿತು. ಇಂತಹ ಯೋಜನೆಗಳು ಕೇವಲ ರಾಜಕೀಯ ಲಾಭಕ್ಕೆ ಸೀಮಿತವಾಗಬಾರದು ಮತ್ತು ಇವುಗಳಿಂದ ವ್ಯವಸ್ಥೆಯ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಪಕ್ಷಗಳು ಗಂಭೀರವಾಗಿ ಆಲೋಚಿಸಬೇಕು ಎಂದು ಸೂಚಿಸಲಾಗಿದೆ. Read this also : ಪಾನ್-ಆಧಾರ್ ಲಿಂಕ್ ಮಾಡದಿದ್ದರೆ ಜೇಬಿಗೆ ಕತ್ತರಿ! ಆದಾಯ ತೆರಿಗೆ ಇಲಾಖೆಯ ಹೊಸ ಎಚ್ಚರಿಕೆ ಏನು?
ಉದ್ಯೋಗ ಸೃಷ್ಟಿಯೇ ನಿಜವಾದ ಅಭಿವೃದ್ಧಿಯ ಹಾದಿ
ಜನರಿಗೆ ವಸ್ತುಗಳನ್ನು ಪುಕ್ಕಟೆಯಾಗಿ ಹಂಚುವ ಬದಲು, ಅವರಿಗೆ ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡುವ ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತ ಗಮನಹರಿಸಿ ಎಂದು ನ್ಯಾಯಾಲಯ (Supreme Court) ರಾಜ್ಯಗಳಿಗೆ ಕಿವಿಮಾತು ಹೇಳಿದೆ. “ನಾವು ಭಾರತದಲ್ಲಿ ಎಂತಹ ಸಂಸ್ಕೃತಿಯನ್ನು ಸೃಷ್ಟಿಸುತ್ತಿದ್ದೇವೆ?” ಎಂದು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿಗಳು, ಇದು ಕೇವಲ ಮತಗಳನ್ನು ಸೆಳೆಯುವ ತಂತ್ರವಾಗಬಾರದು ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಗೆ ನೋಟಿಸ್ ಜಾರಿ
ಸದ್ಯದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ (Supreme Court) ಸುಪ್ರೀಂಕೋರ್ಟ್, ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ಇತರ ಪ್ರಮುಖ ರಾಜಕೀಯ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದೆ. ಉಚಿತ ವಿದ್ಯುತ್ ಮತ್ತು ಇತರೆ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಯಾವ ರೀತಿಯ ಕಠಿಣ ನಿಯಮಗಳನ್ನು ಜಾರಿಗೆ ತರಬಹುದು ಎಂಬುದನ್ನು ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯ ನಿರ್ಧರಿಸಲಿದೆ.
