Local News – ಗುಡಿಬಂಡೆ ಪಟ್ಟಣದ ರಾಮಪಟ್ಟಣ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಆಸ್ತಿ ಮಾಲೀಕರೊಡನೆ ತಹಸೀಲ್ದಾರ್ ನೇತೃತ್ವದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಭೆ ನಡೆಸಿದರು. ಸಭೆಯಲ್ಲಿ ರಸ್ತೆ ಅಗಲೀಕರಣದ ಸಂಬಂಧ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾದವು.

Local News – ರಸ್ತೆ ಅಗಲೀಕರಣಕ್ಕೆ ಸಹಕರಿಸಲು ಮನವಿ
ಸಭೆಯಲ್ಲಿ ಆಸ್ತಿ ಮಾಲೀಕರೊಡನೆ ಸಭೆ ನಡೆಸಿದ ಅಧಿಕಾರಿಗಳು ರಾಮಪಟ್ಟಣ ರಸ್ತೆ ತುಂಬಾ ಕಿರಿದಾಗಿರುವ ಕಾರಣ ಆ ರಸ್ತೆಯಲ್ಲಿ ವಾಹನ ಸಂಚಾರ ತುಂಬಾನೆ ಕಷ್ಟಕರವಾಗಿದೆ. ಇದರ ಜೊತೆಗೆ ಈ ಭಾಗದಲ್ಲಿಯೇ ಡಿಗ್ರಿ, ಪಿಯುಸಿ ಹಾಗೂ ಐಟಿಐ ಸೇರಿದಂತೆ ಎರಡು ಖಾಸಗಿ ಶಾಲೆಗಳೂ ಸಹ ಬರುತ್ತದೆ. ಶಾಲಾ ಸಮಯದಲ್ಲಿ ಈ ರಸ್ತೆಯಲ್ಲಿ ಓಡಾಡುವಂತಹ ಮಕ್ಕಳು ಪ್ರಾಣ ಭಯದಿಂದ ಓಡಾಡಬೇಕಿದೆ. ಆದ್ದರಿಂದ ಅಂಗಡಿ ಮಾಲೀಕರು ರಸ್ತೆ ಅಗಲೀಕರಣಕ್ಕೆ ಸಹಕರಿಸಬೇಕು. ಮಧ್ಯ ರಸ್ತೆಯಿಂದ 20 ಅಡಿ ಅಗಲೀಕರಣಕ್ಕೆ ತಾವೇ ಮುಂದಾಗಬೇಕು. ಆದಷ್ಟು ಶೀಘ್ರವಾಗಿ ಈ ಕೆಲಸವನ್ನು ಮಾಡಿ ಮುಗಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಆಸ್ತಿ ಮಾಲೀಕರ ಬಳಿ ಮನವಿ ಮಾಡಿದರು.
Local News – ಆಸ್ತಿ ಕಳೆದುಕೊಂಡವರಿಗೆ ಪರಿಹಾರ, ಸ್ಪಷ್ಟ ಸರ್ವೇಗೆ ಆಗ್ರಹ
ಈ ವೇಳೆ ಸ್ಥಳೀಯರಾದ ಮಂಜುನಾಥರೆಡ್ಡಿ ಮಾತನಾಡಿ, ನಾವು ಈಗಾಗಲೇ ಶಾಸಕರ ಬಳಿ ಚರ್ಚೆ ನಡೆಸಿ ಮಧ್ಯ ರಸ್ತೆಯಿಂದ 20 ಅಡಿ ಅಗಲೀಕರಣಕ್ಕೆ ಒಪ್ಪಿಗೆ ಸೂಚಿಸಿದ್ದೇವೆ. ಅದಕ್ಕೆ ಶಾಸಕರೂ ಸಹ ಸಹಮತಿ ಸೂಚಿಸಿದ್ದಾರೆ. ರಸ್ತೆ ಅಗಲೀಕರಣದ ವೇಳೆ ಸಂಪೂರ್ಣವಾಗಿ ಆಸ್ತಿ ಕಳೆದುಕೊಂಡವರಿಗೆ ನಿವೇಶನ ಹಾಗೂ ಮನೆ ನೀಡುವ ಭರವಸೆಯನ್ನೂ ಸಹ ಶಾಸಕರು ನೀಡಿದ್ದಾರೆ.
ಆದರೆ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟ ಪೂರ್ವ ಸಿದ್ದತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು. ಮಧ್ಯ ರಸ್ತೆಯಿಂದ 20 ಅಡಿ ಅಂದರೇ ನಮ್ಮ ಆಸ್ತಿಗಳು ಎಲ್ಲಿಯವರೆಗೂ ಹೋಗುತ್ತದೆ ಎಂಬುದನ್ನು ಸರ್ವೆ ಮಾಡಿಸಿ ಸ್ಪಷ್ಟಪಡಿಸಬೇಕು. ರಸ್ತೆ ಅಗಲೀಕರಣದ ವೇಳೆ ಆಸ್ತಿ ಕಳೆದುಕೊಂಡವರಿಗೆ ಪರಿಹಾರ ನೀಡುವ ಕುರಿತು ಅಧಿಕಾರಿಗಳು ಸಂಬಂಧಪಟ್ಟವರಿಗೆ ಪತ್ರ ಬರೆಯಬೇಕು. ರಸ್ತೆ ಅಗಲೀಕರಣದ ಬಳಿಕ ಮೂಲಭೂತ ಸೌಕರ್ಯಗಳಾದ ನೀರು ಹಾಗೂ ವಿದ್ಯುತ್ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಈ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಮತ್ತೊಂದು ಸಭೆ ಕರೆದು ಅಂತಿಮಗೊಳಿಸಬೇಕೆಂದು ಮನವಿ ಮಾಡಿದರು.

Local News – ರಸ್ತೆ ಅಗಲೀಕರಣಕ್ಕೆ ಕೆಲವರ ವಿರೋಧ
ಇನ್ನೂ ಈ ರಸ್ತೆಯಲ್ಲಿ ಬರುವಂತಹ ಕೆಲ ಆಸ್ತಿ ಮಾಲೀಕರು ರಾಮಪಟ್ಟಣ ರಸ್ತೆ ಅಗಲೀಕರಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಗುಡಿಬಂಡೆ ಪಟ್ಟಣದ ಮುಖ್ಯರಸ್ತೆ ಅಗಲೀಕರಣಗೊಂಡು 10 ವರ್ಷಗಳು ಕಳೆದರೂ ಇನ್ನೂ ಆಸ್ತಿ ಕಳೆದುಕೊಂಡವರಿಗೆ ನಿವೇಶನ ಕೊಟ್ಟಿಲ್ಲ. ಮುಖ್ಯರಸ್ತೆಯಲ್ಲಿ ಕೋಟ್ಯಂತರ ರೂಪಾಯಿ ಬೆಳೆಬಾಳುವ ಆಸ್ತಿ ಕಳೇದುಕೊಂಡವರಿಗೆ ಕಡಿಮೆ ಅಳತೆಯ ನಿವೇಶನ ಕೊಟ್ಟಿದ್ದಾರೆ, ಕೆಲವರಿಗೆ ಅದೂ ಸಹ ಇಲ್ಲ. ರಸ್ತೆ ಅಗಲೀಕರಣಕ್ಕೆ ನಮ್ಮದೇನೂ ತಕರಾರು ಇಲ್ಲ, ನಮಗೆ ಪರಿಹಾರ ಕೊಡುವ ಬಗ್ಗೆ ಖಚಿತಪಡಿಸಿ ರಸ್ತೆ ಅಗಲೀಕರಣಕ್ಕೆ ಮುಂದಾಗಿ ಎಂದು ಕೆಲವರು ಆಗ್ರಹಿಸಿದರು. Read this also : ಚಿಕ್ಕಬಳ್ಳಾಪುರದಲ್ಲಿ ‘ಮನೆ ಮನೆ ಪೊಲೀಸ್’ ಅಭಿಯಾನ: ಅಪರಾಧ ತಡೆಯಲು ಜನರ ಸಹಕಾರ ಅತಿ ಮುಖ್ಯ – SP ಕುಶಲ್ ಚೌಕ್ಸೆ
Local News – ಸಭೆಯಲ್ಲಿ ಹಾಜರಿದ್ದವರು
ಈ ಸಮಯದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಪಪಂ ಮುಖ್ಯಾಧಿಕಾರಿ ಸಭಾ ಶಿರೀನ್, ಬೆಸ್ಕಾಂ ಇಲಾಖೆಯ ವಿಶ್ವಾಸ್, ಕೃಷ್ಣೇ ನಾಯಕ್, ಲೋಕೋಪಯೋಗಿ ಇಲಾಖೆಯ ಪೂಜಪ್ಪ, ಪಪಂ ಸಿಬ್ಬಂದಿಯಾದ ಬಾಲಪ್ಪ ಸೇರಿದಂತೆ ರಾಮಪಟ್ಟಣ ರಸ್ತೆಯ ವ್ಯಾಪ್ತಿಯಲ್ಲಿ ಬರುವಂತಹ ಆಸ್ತಿ ಮಾಲೀಕುರ ಹಾಜರಿದ್ದರು.
