“ಪ್ರೀತಿಗೆ ಕಣ್ಣಿಲ್ಲ ಅನ್ನೋದು ಹಳೇ ಮಾತು, ಆದ್ರೆ ಇಲ್ಲಿ ಆ ಪ್ರೀತಿಯೇ ಯಮಪಾಶವಾಗಿದೆ. 40 ವರ್ಷದ ವ್ಯಕ್ತಿ ಹಾಗೂ 19ರ ಹರೆಯದ ಯುವತಿ ನಡುವಿನ ಲವ್ ಸ್ಟೋರಿ (Love Story) ಈಗ ಕೊಲೆಯಲ್ಲಿ ಅಂತ್ಯವಾಗಿದೆ. ಮಗಳು ತನ್ನ ಸಂಬಂಧಿಯನ್ನೇ ಪ್ರೀತಿಸಿ ಓಡಿ ಹೋಗಿದ್ದಳು ಅನ್ನೋದು ತಂದೆಯ ರಕ್ತ ಕುದಿಯುವಂತೆ ಮಾಡಿತ್ತು. ಇದೇ ಸಿಟ್ಟಿನಲ್ಲಿ ಮಗಳ ಪ್ರಿಯಕರನನ್ನು ಕಾರಿನಲ್ಲಿ ಕಿಡ್ನ್ಯಾಪ್ (Kidnap) ಮಾಡಿ, ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆದ ಈ ಘನಘೋರ ಘಟನೆಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.”ನಡೆದಿದ್ದೇನು?

Love Story – 40ರ ಚಲುವನಿಗೆ 19ರ ಹುಡುಗಿ ಮೇಲೆ ಲವ್!
ಚಲುವನಿಗೆ 40 ವರ್ಷ, ಆ ಯುವತಿಗೆ ಕೇವಲ 19 ವರ್ಷ. ಇವರಿಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಕೇವಲ ಪ್ರೀತಿಸಿ ಸುಮ್ಮನಾಗದ ಈ ಜೋಡಿ, ಹದಿನೈದು ದಿನಗಳ ಹಿಂದಷ್ಟೇ ಓಡಿ ಹೋಗಿತ್ತು. ಮಂಡ್ಯದ ಕೆ.ಎಂ.ದೊಡ್ಡಿಯ ಸಂಬಂಧಿಕರ ಮನೆಯಲ್ಲಿ ಈ ಜೋಡಿ ಆಶ್ರಯ ಪಡೆದಿತ್ತು. ವಿಷಯ ತಿಳಿದು ದೊಡ್ಡವರ ಸಮಕ್ಷಮದಲ್ಲಿ ಪಂಚಾಯತಿ ನಡೆಸಿ, ಯುವತಿಯನ್ನು ತಂದೆ ಕೆಂಪಣ್ಣನ ಮನೆಗೆ ವಾಪಸ್ ಕಳುಹಿಸಲಾಗಿತ್ತು.
Love Story – ಆ ಒಂದು ವಿಡಿಯೋ ತಂದಿಟ್ಟ ಕಂಟಕ!
ಮನೆಗೆ ಬಂದ ಮಗಳನ್ನು ತಂದೆ ಕೆಂಪಣ್ಣ ಗದರಿಸಿ ಮನೆಯಲ್ಲೇ ಇರಿಸಿಕೊಂಡಿದ್ದರು. ಆದರೆ, ಇತ್ತ ಚಲುವ ಸುಮ್ಮನಿರಲಿಲ್ಲ. ಮೂರು ದಿನಗಳ ಹಿಂದೆ ಫೇಸ್ಬುಕ್ನಲ್ಲಿ (Facebook) ವಿಡಿಯೋವೊಂದನ್ನು ಹರಿಬಿಟ್ಟಿದ್ದ. “ನನ್ನ ಪ್ರೇಯಸಿಯನ್ನು ಮನೆಯಲ್ಲಿ ಕೂಡಿ ಹಾಕಿದ್ದಾರೆ” ಎಂದು ಹೇಳಿಕೊಂಡಿದ್ದ. ಈ ವಿಡಿಯೋ ಯುವತಿಯ ತಂದೆ ಕೆಂಪಣ್ಣನ ಕೋಪವನ್ನು ನೆತ್ತಿಗೇರುವಂತೆ ಮಾಡಿತ್ತು. ಇದೇ ಸಿಟ್ಟಿನಲ್ಲಿ ಕೆಂಪಣ್ಣ ಒಂದು ಭಯಾನಕ ನಿರ್ಧಾರಕ್ಕೆ ಬಂದಿದ್ದ.
ಸಿನಿಮೀಯ ರೀತಿಯಲ್ಲಿ ಕಿಡ್ನ್ಯಾಪ್ ಮತ್ತು ಮರ್ಡರ್
ತನ್ನ ಮಗಳ ಬಗ್ಗೆ ವಿಡಿಯೋ ಹಾಕಿದ್ದಕ್ಕೆ ರೊಚ್ಚಿಗೆದ್ದ ಕೆಂಪಣ್ಣ, ತನ್ನ ಬಾಮೈದರಾದ ರಾಮಕೃಷ್ಣ ಮತ್ತು ಮಂಜು ಅವರ ಜೊತೆಗೂಡಿ ಸ್ಕೆಚ್ ಹಾಕಿದ್ದ. ನಿನ್ನೆ (ಡಿಸೆಂಬರ್ 18) ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ಚಲುವನನ್ನು ಈ ತಂಡ ಅಡ್ಡಗಟ್ಟಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದೆ. ಸಾಕಷ್ಟು ಕಡೆ ಸುತ್ತಾಡಿಸಿದ ಬಳಿಕ, ಕಾರಿನಲ್ಲೇ ಚಲುವನ ಕತ್ತನ್ನು ಬರ್ಬರವಾಗಿ ಕೊಯ್ದು ಹತ್ಯೆ ಮಾಡಿದ್ದಾರೆ. ನಂತರ ಮೃತದೇಹವನ್ನು ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ಹೊರವಲಯದ ಹಳ್ಳದ ಬಳಿ ಎಸೆದು ಆರೋಪಿಗಳು ಪರಾರಿಯಾಗಿದ್ದರು.

ಪೊಲೀಸರ ಬಲೆಗೆ ಬಿದ್ದ ಹಂತಕರು
ಬೆಳಗ್ಗೆ ಹಳ್ಳದ ಬಳಿ ಬಿದ್ದಿದ್ದ ಶವವನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಮಾಗಡಿ ಪೊಲೀಸರು ಪರಿಶೀಲನೆ ನಡೆಸಿದಾಗ ಚಲುವನ ಗುರುತು ಪತ್ತೆಯಾಗಿದೆ. ಕಿಡ್ನ್ಯಾಪ್ ಆಗಿದ್ದು ಕುಣಿಗಲ್ನಲ್ಲಿ ಎಂಬುದು ಗೊತ್ತಾಗುತ್ತಿದ್ದಂತೆ, ಪ್ರಕರಣವನ್ನು ಕುಣಿಗಲ್ ಠಾಣೆಗೆ ವರ್ಗಾಯಿಸಲಾಗಿದೆ. Read this also : ಮಕ್ಕಳಿಗಾಗಿ ಅಂದು ಕ್ಷಮಿಸಿದ್ದ, ಇಂದು ಹೋಟೆಲ್ನಲ್ಲಿ ಸಿಕ್ಕಿಬಿದ್ದ ಪತ್ನಿ : 15 ವರ್ಷದ ಸಂಸಾರ ಧೂಳಿಪಟ…!
ತಕ್ಷಣ ಕಾರ್ಯಪ್ರವೃತ್ತರಾದ ಕುಣಿಗಲ್ ಪೊಲೀಸರು, ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ್ದು, ಚಲುವನ ಹತ್ಯೆ ಮಾಡಿದ ಪ್ರಮುಖ ಮೂವರು ಆರೋಪಿಗಳನ್ನು (ಕೆಂಪಣ್ಣ ಮತ್ತು ಆತನ ಬಾಮೈದರು) ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ವಯಸ್ಸಿನ ಅಂತರ ಮರೆತ ಪ್ರೀತಿ, ತಂದೆಯ ಕೋಪಕ್ಕೆ ಬಲಿಯಾಗಿ ಒಂದು ಜೀವವೇ ಹೋಗಿದ್ದು ಮಾತ್ರ ದುರಂತ.
