Lok Adalat – ಲೋಕ ಅದಾಲತ್ ಕಾರ್ಯಕ್ರಮವು ನ್ಯಾಯಾಂಗದ ಮೇಲಿನ ಹೊರೆ ಕಡಿಮೆ ಮಾಡಿ, ವಿವಾದಗಳನ್ನು ಬೇಗನೆ ಇತ್ಯರ್ಥಪಡಿಸುತ್ತವೆ. ಇದು ಸಾರ್ವಜನಿಕರಿಗೆ ಅನುಕೂಲವಾಗಿದ್ದು, ನ್ಯಾಯಾಲಯದ ಶುಲ್ಕಗಳು ಉಳಿಯುತ್ತವೆ ಇದರಿಂದ ಸಾರ್ವಜನಿಕರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ಸಿವಿಲ್ ಮತ್ತು ಜೆ.ಎಂ.ಎಫ್.ಸಿ, ನ್ಯಾಯಾಧೀಶರಾದ ಸವಿತಾ ರುದ್ರಗೌಡ ಚಿಕ್ಕನಗೌಡರ್ ತಿಳಿಸಿದರು.

Lok Adalat – ವ್ಯಾಜ್ಯಗಳನ್ನು ಬಗೆಹರಿಸಲು ಉತ್ತಮ ವೇದಿಕೆ
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶರು, ಕಡಿಮೆ ಸಮಯ ಮತ್ತು ಅಲ್ಪ ಖರ್ಚಿನಲ್ಲಿ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಲೋಕ ಅದಾಲತ್ ಒಂದು ಉತ್ತಮ ವೇದಿಕೆ. ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ವಿಮೆ ಕಂಪನಿಗಳು ಮತ್ತು ಬ್ಯಾಂಕ್ ಅಧಿಕಾರಿಗಳಿಗೆ ಅವರು ಧನ್ಯವಾದ ಸಲ್ಲಿಸಿದರು. ಇಂತಹ ಪ್ರಯತ್ನಗಳಿಂದ ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆಯಾಗುತ್ತಿದೆ ಎಂದರು.
Lok Adalat – ವಕೀಲರ ಸಹಕಾರಕ್ಕೆ ಪ್ರಶಂಸೆ
ಲೋಕ ಅದಾಲತ್ ಯಶಸ್ಸಿಗೆ ವಕೀಲರ ಸಹಕಾರವೂ ಮಹತ್ವದ ಪಾತ್ರ ವಹಿಸಿದೆ ಎಂದು ನ್ಯಾಯಾಧೀಶರು ಹೇಳಿದರು. ವಕೀಲರು ತಮ್ಮ ಕಕ್ಷಿದಾರರಿಗೆ ರಾಜಿ ಸಂಧಾನದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಹೆಚ್ಚಿನ ಪ್ರಕರಣಗಳು ಇತ್ಯರ್ಥಗೊಂಡಿವೆ. ಇದರಿಂದ ಕಕ್ಷಿದಾರರ ಅಮೂಲ್ಯ ಸಮಯ ಉಳಿತಾಯವಾಗಿದ್ದು, ಉತ್ತಮ ಬಾಂಧವ್ಯ ವೃದ್ಧಿಯಾಗಿದೆ ಎಂದು ಅವರು ತಿಳಿಸಿದರು.

Read this also : ರಾಷ್ಟ್ರೀಯ ಲೋಕ ಅದಾಲತ್ ಗೆ ಉತ್ತಮ ಪ್ರತಿಕ್ರಿಯೆ, ಲೋಕ ಅದಾಲತ್ನಲ್ಲಿ ಹಲವು ಪ್ರಕರಣಗಳ ಇತ್ಯರ್ಥ..!
Lok Adalat – ಇತ್ಯರ್ಥಗೊಂಡ ಪ್ರಕರಣಗಳ ವಿವರ
ಈ ಲೋಕ ಅದಾಲತ್ ಕಾರ್ಯಕ್ರಮದಲ್ಲಿ, ನ್ಯಾಯಾಲಯದಲ್ಲಿ ಬಾಕಿ ಇದ್ದ ಒಟ್ಟು 983 ಪ್ರಕರಣಗಳ ಪೈಕಿ 673 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಇದರ ಮೂಲಕ ₹ 10,69,376 ಮೊತ್ತದ ಪರಿಹಾರ ವಸೂಲಿ ಮಾಡಲಾಯಿತು. ಅದೇ ರೀತಿ, ವ್ಯಾಜ್ಯ ಪೂರ್ವ ಹಂತದಲ್ಲಿದ್ದ 331 ಪ್ರಕರಣಗಳ ಪೈಕಿ 24 ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹ 20,30,495 ಮೊತ್ತವನ್ನು ವಸೂಲಿ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿಗ್ಬತ್ ವುಲ್ಲಾ, ಎಪಿಪಿ ರಾಮಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಅಶ್ವತ್ಥ್ರೆಡ್ಡಿ, ಹಾಗೂ ಹಲವು ವಕೀಲರು, ಬ್ಯಾಂಕ್ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಮತ್ತು ಕಕ್ಷಿದಾರರು ಉಪಸ್ಥಿತರಿದ್ದರು.
