ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆ (Gruha Lakshmi Scheme) ಬಗ್ಗೆ ಈಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ತಲುಪಿಸುವ ಈ ಯೋಜನೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಮಹತ್ವದ ಹೆಜ್ಜೆಯನ್ನಿಡಲು ಮುಂದಾಗಿದೆ. ವಿಷಯವೇನೆಂದರೆ, ಮೃತಪಟ್ಟ ಫಲಾನುಭವಿಗಳ ಖಾತೆಗೂ ಹಣ ಜಮೆಯಾಗುತ್ತಿರುವುದನ್ನು ತಡೆಯಲು ಸರ್ಕಾರ ಈಗ ‘ಜೀವಿತ ಪ್ರಮಾಣಪತ್ರ’ (Life Certificate) ಸಲ್ಲಿಕೆಯನ್ನು ಕಡ್ಡಾಯಗೊಳಿಸಲು ಗಂಭೀರವಾಗಿ ಆಲೋಚಿಸುತ್ತಿದೆ.
Gruha Lakshmi Scheme – ಏನಿದು ಹೊಸ ನಿಯಮ?
ಯೋಜನೆಯ ಹಣ ದುರುಪಯೋಗವಾಗುವುದನ್ನು ತಡೆಯುವುದು ಸರ್ಕಾರದ ಮುಖ್ಯ ಉದ್ದೇಶ. ಈ ಬಗ್ಗೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಪ್ರಸ್ತಾಪಿಸಿದ್ದರು. ನಿವೃತ್ತ ಸರ್ಕಾರಿ ನೌಕರರು ತಮ್ಮ ಪಿಂಚಣಿ ಪಡೆಯಲು ಪ್ರತಿ ವರ್ಷ ಹೇಗೆ ಬ್ಯಾಂಕ್ಗೆ ಹೋಗಿ ತಾವು ಬದುಕಿರುವುದಕ್ಕೆ ಪುರಾವೆಯಾಗಿ ‘ಜೀವಿತ ಪ್ರಮಾಣಪತ್ರ’ ಸಲ್ಲಿಸುತ್ತಾರೋ, ಅದೇ ಮಾದರಿಯನ್ನು ಗೃಹಲಕ್ಷ್ಮಿ ಯೋಜನೆಗೂ ಅನ್ವಯಿಸಬೇಕು ಎಂಬುದು ಅವರ ಸಲಹೆಯಾಗಿದೆ.
ಬೊಕ್ಕಸಕ್ಕೆ ಬೀಳುತ್ತಿದೆ ಕೋಟಿ ಕೋಟಿ ಹೊರೆ!
ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ಅವರು ನೀಡಿರುವ ಅಂಕಿ-ಅಂಶಗಳು ನಿಜಕ್ಕೂ ಆಘಾತಕಾರಿಯಾಗಿವೆ. ರಾಯಚೂರು ಉತ್ಸವದಲ್ಲಿ ಮಾತನಾಡಿದ ಅವರು (Gruha Lakshmi Scheme) ಈ ಕೆಲವು ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ. Read this also : ಸಣ್ಣ ಉದ್ದಿಮೆದಾರರಿಗೆ ಗುಡ್ ನ್ಯೂಸ್: 20 ಲಕ್ಷದವರೆಗೆ ಅಡಮಾನ ರಹಿತ ಸಾಲ! RBI ಹೊಸ ಘೋಷಣೆಗಳೇನು?
- ಮೃತಪಟ್ಟ ಫಲಾನುಭವಿಗಳು: ರಾಜ್ಯದಲ್ಲಿ ಈಗಾಗಲೇ ಸುಮಾರು 1,44,056 ಮಹಿಳಾ ಫಲಾನುಭವಿಗಳು ಮರಣ ಹೊಂದಿದ್ದಾರೆ.
- ಹಣ ಸಂದಾಯ: ಇವರ ಪೈಕಿ 68,776 ಮಂದಿಯ ಖಾತೆಗೆ ಅವರು ಮರಣ ಹೊಂದಿದ ನಂತರವೂ ಹಣ ಜಮೆಯಾಗುತ್ತಿದೆ!
- ಒಟ್ಟು ನಷ್ಟ: ಮೃತಪಟ್ಟವರ ಖಾತೆಗೆ ಇದುವರೆಗೆ ಒಟ್ಟು ₹79,75,66,000 (ಸುಮಾರು 80 ಕೋಟಿ ರೂ.) ಹಣ ಸಂದಾಯವಾಗಿದೆ.
- ಕಂತುಗಳ ಲೆಕ್ಕ: ಮೃತಪಟ್ಟವರ ಹೆಸರಿನಲ್ಲಿ ಒಟ್ಟು 3,98,783 ಬಾರಿ ಕಂತಿನ ಹಣ (ತಲಾ ₹2,000) ಬಿಡುಗಡೆಯಾಗಿದೆ.
ಸಿಎಂ ಸಿದ್ದರಾಮಯ್ಯ ನೀಡಿದ ಸೂಚನೆ ಏನು?
ದಿನೇಶ್ ಗೂಳಿಗೌಡ ಅವರ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಈ ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ (Chief Secretary) ಅವರಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಸುಮಾರು 1.24 ಕೋಟಿ ಫಲಾನುಭವಿಗಳಿದ್ದು, ಇದಕ್ಕಾಗಿ ಸರ್ಕಾರ ₹57,300 ಕೋಟಿಗೂ ಅಧಿಕ ಹಣ ವ್ಯಯಿಸಿದೆ. ಈ ಬೃಹತ್ ಮೊತ್ತವು ಅರ್ಹರಿಗೆ ಮಾತ್ರ ತಲುಪಬೇಕು ಎನ್ನುವುದು ಸರ್ಕಾರದ ಆಶಯ.
ಸಾರ್ವಜನಿಕರಿಗೆ ಇದರಿಂದ ಏನು ಬದಲಾವಣೆ?
ಒಂದು ವೇಳೆ ಈ ನಿಯಮ ಜಾರಿಗೆ ಬಂದರೆ, ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಫಲಾನುಭವಿಗಳು ಪ್ರತಿ ವರ್ಷವೂ ನಿಗದಿತ ಸಮಯದಲ್ಲಿ ತಾವು ಬದುಕಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕಾಗಬಹುದು. ಇದರಿಂದ ಸರ್ಕಾರಕ್ಕೆ ಮೃತಪಟ್ಟವರ ಮಾಹಿತಿಯನ್ನು ಕಾಲಕಾಲಕ್ಕೆ ನವೀಕರಿಸಲು ಮತ್ತು ಸರ್ಕಾರದ ಹಣ ಸೋರಿಕೆಯನ್ನು ತಡೆಯಲು ಸಾಧ್ಯವಾಗುತ್ತದೆ.


