ಮನುಷ್ಯತ್ವವೇ ತಲೆತಗ್ಗಿಸುವಂತಹ ಘಟನೆಯೊಂದು ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ನಡೆದಿದೆ. ಆಟವಾಡಿಕೊಂಡಿರಬೇಕಾದ 6 ವರ್ಷದ ಪುಟ್ಟ ಬಾಲಕಿಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ, ಬಳಿಕ ಸಾಕ್ಷ್ಯ ನಾಶಪಡಿಸಲು ಆಕೆಯನ್ನು ಕಟ್ಟಡದ ಮೇಲಿನಿಂದ ಎಸೆದು ಕೊಲೆ ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಸಿಕಂದರಾಬಾದ್ (Crime News) ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

Crime – ಘಟನೆಯ ವಿವರ
ಫಿರೋಜಾಬಾದ್ ಮೂಲದ ಕಾರ್ಮಿಕರೊಬ್ಬರ 6 ವರ್ಷದ ಪುತ್ರಿ ಶುಕ್ರವಾರ ಸಂಜೆ ತನ್ನ ಮನೆಯ ಮೇಲ್ಛಾವಣಿಯಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಪಕ್ಕದ ಮನೆಯಲ್ಲಿ ಬಾಡಿಗೆಗೆ ಇದ್ದ ಇಬ್ಬರು ಯುವಕರು – ರಾಜೂ (ಬಲರಾಂಪುರ ಮೂಲ) ಮತ್ತು ವೀರು ಕಶ್ಯಪ್ (ಲಖೀಂಪುರ ಖೀರಿ ಮೂಲ) ಎಂಬುವವರು ಮದ್ಯದ ಅಮಲಿನಲ್ಲಿ ಬಾಲಕಿಯನ್ನು ಅಪಹರಿಸಿ ದೌರ್ಜನ್ಯ ಎಸಗಿದ್ದಾರೆ.
ಮೃಗಗಳಂತೆ ವರ್ತಿಸಿದ ಈ ಕಾಮುಕರು ಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಾಲಕಿ ನೋವಿನಿಂದ ಕಿರುಚಾಡಿದಾಗ, ವಿಷಯ ಹೊರಬರುತ್ತದೆ ಎಂಬ ಭಯದಿಂದ ಆಕೆಯನ್ನು ಹತ್ಯೆ ಮಾಡಿದ್ದಾರೆ. ಬಳಿಕ ಇದೊಂದು ಆಕಸ್ಮಿಕ ಸಾವು ಎಂದು ಬಿಂಬಿಸಲು ಮೃತದೇಹವನ್ನು 3ನೇ ಮಹಡಿಯ ಛಾವಣಿಯಿಂದ ಕೆಳಗೆ ಎಸೆದಿದ್ದಾರೆ.
ಪೊಲೀಸರ ಭರ್ಜರಿ ಕಾರ್ಯಾಚರಣೆ – ಎನ್ಕೌಂಟರ್ನಲ್ಲಿ ಆರೋಪಿಗಳ ಬಂಧನ!
ಬಾಲಕಿ ಕಾಣೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಅಲರ್ಟ್ ಆದ ಉತ್ತರ ಪ್ರದೇಶ ಪೊಲೀಸರು (UP Police) ತನಿಖೆ ಚುರುಕುಗೊಳಿಸಿದರು. ತಡರಾತ್ರಿ ನಿರ್ಮಾಣ ಹಂತದ ಕಾಲೋನಿಯೊಂದರಲ್ಲಿ ಅಡಗಿದ್ದ ಆರೋಪಿಗಳನ್ನು ಪೊಲೀಸರು ಸುತ್ತುವರೆದಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಆರೋಪಿಗಳು ಗುಂಡಿನ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ತಗುಲಿದ್ದು, ಸದ್ಯ ಅವರನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. Read this also : ಹಿಮಾಚಲದಲ್ಲಿ ದಾರುಣ ಘಟನೆ: ರ್ಯಾಗಿಂಗ್ (Ragging) ಹಾಗೂ ಲೈಂಗಿಕ ಕಿರುಕುಳಕ್ಕೆ ಬಲಿಯಾದ ವಿದ್ಯಾರ್ಥಿನಿ; ಪ್ರಾಧ್ಯಾಪಕ ಸೇರಿ ನಾಲ್ವರ ವಿರುದ್ಧ ಕೇಸ್!

ಪೊಲೀಸ್ ಎಸ್ಎಸ್ಪಿ ಹೇಳಿದ್ದೇನು?
ಘಟನೆ ಕುರಿತು ಮಾಹಿತಿ ನೀಡಿದ ಬುಲಂದ್ಶಹರ್ ಎಸ್ಎಸ್ಪಿ ದಿನೇಶ್ ಕುಮಾರ್ ಸಿಂಗ್, “ಆರೋಪಿಗಳು ಮದ್ಯದ ಅಮಲಿನಲ್ಲಿ ಈ ಹೇಯ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಗು ನಮ್ಮನ್ನು ಗುರುತಿಸುತ್ತದೆ ಎಂಬ ಕಾರಣಕ್ಕೆ ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.
